ಕರ್ನಾಟಕ

karnataka

ETV Bharat / international

ಸುಡಾನ್ ಸೇನಾ ಸಂಘರ್ಷ: ನೂರಕ್ಕೂ ಹೆಚ್ಚು ಸಾವು, 600 ಜನರಿಗೆ ಗಾಯ

ಸುಡಾನ್​ನಲ್ಲಿ ಸೇನಾಪಡೆಗಳ ಎರಡು ಬಣಗಳ ನಡುವೆ ನಡೆದಿರುವ ಯುದ್ಧದಲ್ಲಿ ಈವರೆಗೆ ನೂರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅಧಿಕಾರಕ್ಕಾಗಿ ನಡೆದಿರುವ ಸಂಘರ್ಷದಲ್ಲಿ ಈವರೆಗೆ 600ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

By

Published : Apr 17, 2023, 12:49 PM IST

Sudan death toll nears 100 as clashes continue
Sudan death toll nears 100 as clashes continue

ಖಾರ್ಟೂಮ್ (ಸುಡಾನ್) :ಸುಡಾನ್ ಸೈನ್ಯ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (paramilitary Rapid Support Forces -RSF) ನಡುವೆ ನಡೆಯುತ್ತಿರುವ ಭೀಕರ ಹೋರಾಟದಲ್ಲಿ ಸತ್ತವರ ಸಂಖ್ಯೆ 97 ಕ್ಕೆ ಏರಿದೆ ಎಂದು ಸುಡಾನ್ ವೈದ್ಯರ ಒಕ್ಕೂಟವನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರದ ವೇಳೆಗೆ ಹಿಂಸಾಚಾರದಲ್ಲಿ 97 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 600 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿವೆ.

ಸೋಮವಾರ ಬೆಳಗ್ಗೆ ರಾಜಧಾನಿಯ ದಕ್ಷಿಣ ಭಾಗದಲ್ಲಿರುವ ಆಸ್ಪತ್ರೆಯೊಂದಕ್ಕೆ ಗುರಿ ತಪ್ಪಿ ಬಾಂಬ್ ಒಂದು ಅಪ್ಪಳಿಸಿದ್ದು, ಸಾಕಷ್ಟು ಆತಂಕ ಸೃಷ್ಟಿಸಿತು. ಆದರೆ, ಈ ಘಟನೆಯಲ್ಲಿ ಯಾವುದೇ ರೋಗಿಗಳು ಮತ್ತು ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಸುಡಾನ್ ವೈದ್ಯರ ಒಕ್ಕೂಟ ಹೇಳಿದೆ.

ಭಾನುವಾರ ಬೆಳಗಿನ ಪ್ರಾರ್ಥನೆಯ ನಂತರ ಹೋರಾಟ ತೀವ್ರಗೊಂಡಿತು. ರಾತ್ರಿಯಿಡೀ ಬಾಂಬ್ ಸ್ಫೋಟದ ದೊಡ್ಡ ಶಬ್ದಗಳು ಕೇಳಿ ಬಂದವು ಎಂದು ರಾಜಧಾನಿ ಖಾರ್ಟೂಮ್​​ನಲ್ಲಿನ ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದರು. ದೇಶದ ಪೂರ್ವ ಭಾಗದಲ್ಲಿ ನೂರಾರು ಮೈಲಿ ದೂರದಲ್ಲಿರುವ ಪೋರ್ಟ್ ಸುಡಾನ್ ನಗರದಲ್ಲಿಯೂ ಯುದ್ಧ ನಡೆಯುತ್ತಿದೆ. ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳು (RSF) ದೇಶದ ಅಧಿಕಾರ ಹಿಡಿಯಲು ಕಾದಾಟ ನಡೆಸುತ್ತಿರುವುದರಿಂದ ಸುಡಾನ್​ನಲ್ಲಿ ಯುದ್ಧದ ವಾತಾವರಣ ತಲೆದೋರಿದೆ.

2021ರಲ್ಲಿ ದೇಶದಲ್ಲಿ ಮಿಲಿಟರಿ ಬಂಡಾಯ ನಡೆದಿತ್ತು. ಈಗ ಹೊಸ ಸರ್ಕಾರ ಸ್ಥಾಪಿಸುವ ವಿಷಯದಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ಮಧ್ಯೆ ವಿವಾದ ತಲೆದೋರಿದೆ. ಸೇನಾಪಡೆಗಳೊಂದಿಗೆ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳನ್ನು ಯಾವ ರೀತಿಯಲ್ಲಿ ಸಂಯೋಜನೆ ಮಾಡುವುದು ಹಾಗೂ ಈ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವುದು ಯಾರು ಎಂಬ ವಿಚಾರದಲ್ಲಿ ಎರಡೂ ಬಣಗಳ ಮಧ್ಯೆ ವಿವಾದ ಉಂಟಾಗಿದೆ. ಜನರಲ್ ಅಬ್ದೆಲ್ ಫತ್ತಾ ಅಲ್ ಬುರ್ಹಾನ್ ಸೇನಾಪಡೆಯ ಮುಖ್ಯಸ್ಥರಾಗಿದ್ದರೆ, ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೊ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ನಾಯಕರಾಗಿದ್ದಾರೆ.

ಮಿಲಿಟರಿ ಸರ್ಕಾರ ಸ್ಥಾಪನೆಯ 18 ತಿಂಗಳ ನಂತರ ಈ ತಿಂಗಳು ನಾಗರಿಕ ನೇತೃತ್ವದ ಸರ್ಕಾರಕ್ಕೆ ನಿಯಂತ್ರಣವನ್ನು ಬಿಟ್ಟುಕೊಡುವುದಾಗಿ ಮಿಲಿಟರಿ ಭರವಸೆ ನೀಡಿತ್ತು. ಆದರೆ ಈ ಪ್ರಕ್ರಿಯೆಯು ಜನರಲ್ ಅಲ್-ಬುರ್ಹಾನ್ ಮತ್ತು ಜನರಲ್ ಹಮ್ದಾನ್ ನಡುವಿನ ಪೈಪೋಟಿಯಿಂದ ಕಗ್ಗಂಟಾಗಿದೆ. ಇಬ್ಬರೂ ಜನರಲ್‌ಗಳು ಕಳೆದ ಕೆಲ ತಿಂಗಳುಗಳಿಂದ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಶನಿವಾರ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಸಿಬ್ಬಂದಿ ಸಾವಿನ ನಂತರ ಯುಎನ್ ಏಜೆನ್ಸಿ ತನ್ನ ಎಲ್ಲ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸುಡಾನ್‌ನಲ್ಲಿನ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಎನ್ ಏಜೆನ್ಸಿಯ ಕಾರ್ಯನಿರ್ವಾಹಕ ನಿರ್ದೇಶಕ ಸಿಂಡಿ ಮೆಕೇನ್ ಭಾನುವಾರ ಹೇಳಿದ್ದಾರೆ. ಭೀಕರ ಆಹಾರ ಅಭದ್ರತೆಯನ್ನು ಎದುರಿಸುತ್ತಿರುವ ಸುಡಾನ್ ಜನರಿಗೆ ಸಹಾಯ ಮಾಡಲು WFP ಬದ್ಧವಾಗಿದೆ. ಆದರೆ, ನಮಗೆ ಸುರಕ್ಷತೆಯನ್ನು ಖಾತರಿಪಡಿಸದಿದ್ದರೆ ನಾವು ಇತರರ ಜೀವ ಉಳಿಸುವ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮೆಕೇನ್ ಹೇಳಿದರು.

ಇದನ್ನೂ ಓದಿ :ಪಾಕಿಸ್ತಾನದ ಆರ್ಥಿಕತೆಗೆ ಮತ್ತೊಂದು ಹೊಡೆತ: ತಲಾದಾಯ 1,399 ಡಾಲರ್​ಗೆ ಇಳಿಕೆ

ABOUT THE AUTHOR

...view details