ಕರ್ನಾಟಕ

karnataka

By ETV Bharat Karnataka Team

Published : Nov 11, 2023, 4:49 PM IST

ETV Bharat / international

ಐಸ್​ಲ್ಯಾಂಡ್​ನಲ್ಲಿ ಭೂಕಂಪ, ಜ್ವಾಲಾಮುಖಿ ಭೀತಿ: ಜನರ ತುರ್ತು ಸ್ಥಳಾಂತರಕ್ಕೆ ಸೂಚಿಸಿದ ಸರ್ಕಾರ

ಐಸ್​ಲ್ಯಾಂಡ್​ನಲ್ಲಿ ಭೂಕಂಪ ಮತ್ತು ಜ್ವಾಲಾಮುಖಿ ಭೀತಿಯಿಂದಾಗಿ ತಕ್ಷಣದ ಪರಿಹಾರ ಮತ್ತು ಜನರ ಸ್ಥಳಾಂತರಕ್ಕೆ ಅಲ್ಲಿನ ಸರ್ಕಾರ ಸೂಚಿಸಿದೆ.

ಐಸ್​ಲ್ಯಾಂಡ್​ನಲ್ಲಿ ಭೂಕಂಪ
ಐಸ್​ಲ್ಯಾಂಡ್​ನಲ್ಲಿ ಭೂಕಂಪ

ರೇಕ್‌ಜಾನೆಸ್ (ಐಸ್‌ಲ್ಯಾಂಡ್) :ಸತತ ಭೂಕಂಪ ಮತ್ತು ಜ್ವಾಲಾಮುಖಿಯಿಂದಾಗಿ ಜನರನ್ನು ರಕ್ಷಿಸಲು ಐಸ್​​ಲ್ಯಾಂಡ್​ ಸರ್ಕಾರ ರೇಕ್‌ಜಾನೆಸ್ ಪೆನಿನ್ಸುಲಾದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಗ್ರಿಂಡಾವಿಕ್‌ ನಗರದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಐಸ್‌ಲ್ಯಾಂಡಿಕ್ ಮೆಟ್ ಆಫೀಸ್ (ಐಎಂಒ) ಸೂಚಿಸಿದೆ.

ಭೂಕಂಪನಗಳ ಸೂಚನೆಯಿಂದಾಗಿ ಐಸ್‌ಲ್ಯಾಂಡ್‌ನ ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆಯು ರೇಕ್‌ಜಾನೆಸ್ ಪರ್ಯಾಯ ದ್ವೀಪದಲ್ಲಿ ತುರ್ತು ಸ್ಥಳಾಂತರಕ್ಕೆ ತಾಕೀತು ಮಾಡಿದ್ದಲ್ಲದೇ, ಖಾಸಗಿ ಸಂಘ ಸಂಸ್ಥೆಗಳೊಂದಿಗೆ ಜನರ ರಕ್ಷಣೆಗೆ ಕೈ ಜೋಡಿಸಿದೆ.

ಗ್ರಿಂಡಾವಿಕ್‌ನ ಉತ್ತರದ ಸುಂಧ್‌ಜುಕಾಗಿಗರ್ ಬಳಿ ತೀವ್ರ ಭೂಕಂಪನದ ಎಚ್ಚರಿಕೆ ನೀಡಲಾಗಿದೆ. ಶನಿವಾರ ಮಧ್ಯಾಹ್ನ ರೇಕ್‌ಜಾನೆಸ್ ಪೆನಿನ್ಸುಲಾದಲ್ಲಿ ಭೂಮಿ ನಡುಗುವ ಭೀತಿ ಇದ್ದು, ಭೂ ಅಂತರಾಳದಲ್ಲಿ ಚಟುವಟಿಕೆಗಳ ಮೇಲೆ ಗಮನ ಇಡಲಾಗಿದೆ. ಗ್ರಿಂಡಾವಿಕ್ ಕಡೆಗೆ ಕಂಪನಗಳು ಚಲಿಸುತ್ತಿವೆ. ಜಿಪಿಎಸ್​ ಮಾಪನಗಳು ಮತ್ತು ಅದರ ಮಾಹಿತಿ ಆಧಾರದ ಮೇಲೆ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಲಾಪಾಕದ ಚಲನೆ ಹೆಚ್ಚಳ:ಭೂಗರ್ಭದಲ್ಲಿನ ಜ್ವಾಲೆಗಳು ಯಾವ ಭಾಗದಲ್ಲಿ ಸಿಡಿಯುತ್ತವೆ ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಸುಂಧ್‌ಜುಕಾಗಿಗಮ್‌ನಿಂದ ಗ್ರಿಂಡವಿಕ್‌ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಲಾಪಾಕ ಚಲಿಸುತ್ತಿದೆ ಎಂಬ ಸೂಚನೆಗಳಿವೆ. ಲಾವಾರಸ ಧಾವಿಸುತ್ತಿರುವ ಪ್ರಮಾಣ ಮತ್ತು ಹಾದಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು. 2021 ರಲ್ಲಿ ನಡೆದ ಭೂಕಂಪನ ಆಧಾರದ ಮೇಲೆ ಜ್ವಾಲಾಮುಖಿ ಭೂಮಿಯ ಮೇಲೆ ಚಿಮ್ಮಲು ಇನ್ನಷ್ಟು ದಿನಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಐಸ್​​ಲ್ಯಾಂಡ್​ನ ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾ ದೇಶದ ಅತಿದೊಡ್ಡ ಪ್ರವಾಸಿ ತಾಣವಾಗಿದೆ. ಭೂಕಂಪಗಳು, ಜ್ವಾಲಾಮುಖಿ ಸ್ಫೋಟದ ಭೀತಿಯಿಂದಾಗಿ ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೆಲವು ದಿನಗಳ ಹಿಂದೆ ಲಾವಾರಸ ರಸ್ತೆಯ ಮೇಲೆ ಚಿಮ್ಮುತ್ತಿರುವುದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರು. ಇದರಿಂದ ವಾಹನ ದಟ್ಟಣೆ ಉಂಟಾಗಿ ಆತಂಕ ಸೃಷ್ಟಿಯಾಗಿತ್ತು.

ದಿನವೂ ಸಣ್ಣ ಭೂಕಂಪ ದಾಖಲು:ರೇಕ್​ಜಾನೆಸ್​ ಪೆನಿನ್ಸುಲಾದ ಸುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಪ್ರತಿದಿನ ಸಣ್ಣ ಪ್ರಮಾಣದ ಭೂಕಂಪಗಳು ಆಗುತ್ತಿವೆ. ಭೂಮಿತ 5 ಕಿಲೋಮೀಟರ್ ಆಳದಲ್ಲಿ ಜ್ವಾಲಾಮುಖಿಯ ಶಿಲಾಪಾಕ ಸಂಗ್ರಹಣೆಯಿಂದಾಗಿ ಭೂಮಿ ದಿನವೂ ನಡುಗುತ್ತಿದೆ. ಇದು ಇಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಜ್ವಾಲಾಮುಖಿ ಸ್ಫೋಟ ಸಂಭವಿಸುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ.

ಅಕ್ಟೋಬರ್ 27 ರಿಂದ ಈ ಪ್ರದೇಶದಲ್ಲಿ ಭೂಮಿಯ ನಡುಕ ಹೆಚ್ಚಾಗಿದೆ. ಭೂಕಂಪನ ಚಟುವಟಿಕೆಯು ಧರೆಯ ಮೇಲ್ಪದರಕ್ಕೆ ಬಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಶಿಲಾಪಾಕವು ಭೂಮಿಯ ಹೊರಪದರವನ್ನು ಭೇದಿಸುತ್ತಿರುವ ಸೂಚನೆ ಇದಾಗಿದೆ. ಇದು ದೊಡ್ಡ ಅನಾಹುತದ ಮುನ್ಸೂಚನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:ಹಮಾಸ್​ ದಾಳಿಯ ಬಗ್ಗೆ 4 ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಮೊದಲೇ ಅರಿವಿತ್ತು; ಇಸ್ರೇಲ್ ಆರೋಪ

ABOUT THE AUTHOR

...view details