ಕರ್ನಾಟಕ

karnataka

ರಷ್ಯಾ ಮಕ್ಕಳನ್ನೂ ಕೂಡಾ 'ಶಸ್ತ್ರಾಸ್ತ್ರ'ಗಳನ್ನಾಗಿ ಮಾಡಿದೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ

By ETV Bharat Karnataka Team

Published : Sep 20, 2023, 10:48 AM IST

Updated : Sep 20, 2023, 12:36 PM IST

ಒಂದು ರಾಷ್ಟ್ರದ ವಿರುದ್ಧ ದ್ವೇಷವನ್ನೇ ಅಸ್ತ್ರಗೊಳಿಸಿದಾಗ ಅದು ಎಂದಿಗೂ ನಿಲ್ಲುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

Zelenskyy
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ವಿಶ್ವಸಂಸ್ಥೆ:ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಆಹಾರ ಮತ್ತು ಶಕ್ತಿಯಿಂದ ಹಿಡಿದು ಅಪಹರಣಕ್ಕೊಳಗಾದ ಮಕ್ಕಳವರೆಗೆ ಎಲ್ಲವನ್ನೂ ಶಸ್ತ್ರಾಸ್ತ್ರಗಳನ್ನಾಗಿ ತಯಾರು ಮಾಡುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, "ಒಂದು ರಾಷ್ಟ್ರದ ವಿರುದ್ಧ ದ್ವೇಷವನ್ನು ಅಸ್ತ್ರಗೊಳಿಸಿದಾಗ, ಅದೆಂದಿಗೂ ನಿಲ್ಲಲಾರದು. ನಮ್ಮ ಭೂಮಿ, ನಮ್ಮ ಜನ ಮತ್ತು ಸಂಪನ್ಮೂಲಗಳನ್ನು ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಅವುಗಳನ್ನು ನಮ್ಮ ವಿರುದ್ಧವೇ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವುದು ರಷ್ಯಾ ಯುದ್ಧದ ಗುರಿ" ಎಂದರು.

ಉಕ್ರೇನ್‌ ಮೇಲಿನ ಯುದ್ಧವು ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಪ್ರಮುಖ ಜಾಗತಿಕ ಪೂರೈಕೆ ಅಡೆತಡೆಗಳನ್ನು ಇನ್ನೂ ಹೆಚ್ಚಿಸಿದೆ. ಆಹಾರ ಮತ್ತು ಇಂಧನ ಬೆಲೆಗಳಲ್ಲಿ ಭಾರಿ ಏರಿಕೆ ಉಂಟು ಮಾಡಿದೆ. ಇದು ಜಾಗತಿಕ ಆರ್ಥಿಕತೆಯನ್ನು ಕುಗ್ಗಿಸುತ್ತದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಕಷ್ಟ ಹೆಚ್ಚಿಸಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ಪ್ರಮುಖ ಧಾನ್ಯ ರಫ್ತುದಾರರು. ಕಳೆದ ಬೇಸಿಗೆಯಲ್ಲಿ ರಷ್ಯಾ ಕಪ್ಪು ಸಮುದ್ರದ ಮೂಲಕ ಉಕ್ರೇನಿಯನ್ ಧಾನ್ಯದ ಸಾಗಣೆಯನ್ನು ಅನುಮತಿಸುವ ಒಪ್ಪಂದವನ್ನು ಹಿಂತೆಗೆದುಕೊಂಡಿದ್ದು, ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಹೇಳಿದರು.

ಉಕ್ರೇನ್ ಆಕ್ರಮಣದ ವೇಳೆ ಹತ್ತಾರು ಸಾವಿರ ಮಕ್ಕಳನ್ನು ಅಪಹರಿಸಲಾಗಿದೆ. ರಷ್ಯಾದಲ್ಲಿನ ಆ ಮಕ್ಕಳಿಗೆ ಉಕ್ರೇನ್ ದೇಶವನ್ನು ದ್ವೇಷಿಸಲು ಕಲಿಸಲಾಗುತ್ತಿದೆ. ಅವರ ಕುಟುಂಬಗಳೊಂದಿಗಿನ ಎಲ್ಲಾ ಸಂಬಂಧಗಳು ಮುರಿದು ಹೋಗಿವೆ. ಇದು ಸ್ಪಷ್ಟವಾಗಿ ನರಮೇಧಕ್ಕೆ ಸಮ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಕ್ರೇನ್‌ನಿಂದ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇನ್ನೊಬ್ಬ ಅಧಿಕಾರಿಗೆ ಕಳೆದ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಆದರೆ, ರಷ್ಯಾ ಅಧಿಕಾರಿಗಳು ಅಪಹರಣ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಇದೇ ವೇಳೆ, ನಾವು ಇಂದು ಈ ಆಕ್ರಮಣವನ್ನು ಎದುರಿಸಬೇಕು. ನಾಳಿನ ಇತರ ಆಕ್ರಮಣಕಾರರನ್ನೂ ತಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಂಗಳವಾರ ಜಾಗತಿಕ ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ:Russia-Ukraine War: ಉಕ್ರೇನ್​ಗೆ ಸಿಗುತ್ತಾ ನ್ಯಾಟೋ ಸದಸ್ಯತ್ವ? ಏನಂತಾರೆ ಬೈಡನ್?

ಅಪಾಯದಲ್ಲಿರುವ ಉಕ್ರೇನ್​ ಪಾರಂಪರಿಕ ಕಟ್ಟಡಗಳು:ಉಕ್ರೇನ್​ ಮತ್ತು ರಷ್ಯಾದ ನಡುವಿನ ಯುದ್ಧದಿಂದ ನಡೆದ ದಾಳಿಗಳಲ್ಲಿ ಅನೇಕ ಸ್ಮಾರಕ, ಕಟ್ಟಡಗಳು ಧರೆಗುರುಳಿವೆ. ಇದೀಗ ಸಾಂಸ್ಕೃತಿಕ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆ ಉಂಟಾಗಿದೆ. ಈ ಕುರಿತು ಯುನೆಸ್ಕೋ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಈ ಕುರಿತು ಮಾತನಾಡಿರುವ ಯುನೆಸ್ಕೋ, ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಿಂದ ಉಕ್ರೇನ್​ನ ರಾಜಧಾನಿ ಕೀವ್​ ಮತ್ತು ಎಲ್ವಿವ್​ ನಗರದಲ್ಲಿನ ಸಾಂಸ್ಕೃತಿಕ ಕಟ್ಟಡಗಳು ಅಪಾಯದಲ್ಲಿವೆ ಎಂದಿದೆ. ವಿಶ್ವಸಂಸ್ಥೆಯ ಸಾಂಸ್ಕೃತಿಕ ಭಾಗವಾಗಿರುವ ಯುನೆಸ್ಕೋ ಪ್ರಕಾರ, ಕೀವ್​ನಲ್ಲಿರುವ ಸೇಂಟ್​ ಸೋಫಿಯಾ ಕ್ಯಾಥೆಡ್ರೆಲ್​, ನಗರದ ಕೀವ್-ಪೆಚೆರ್ಸ್ಕ್ ಲಾವ್ರಾ ಮಠದ ಸ್ಥಳದ ಮಧ್ಯಕಾಲೀನ ಕಟ್ಟಡಗಳು ಮತ್ತು ಎಲ್ವಿವ್‌ನಲ್ಲಿರುವ ಐತಿಹಾಸಿಕ ಕೇಂದ್ರಗಳು ಅಪಾಯದಲ್ಲಿವೆ ಎಂದು ಬಿಬಿಸಿ ತಿಳಿಸಿದೆ.

ಇದನ್ನೂ ಓದಿ:ಯುದ್ಧದಿಂದ ಅಪಾಯದಲ್ಲಿವೆ ಉಕ್ರೇನ್​ ಪಾರಂಪರಿಕ ಕಟ್ಟಡಗಳು; ಯುನೆಸ್ಕೋ ಆತಂಕ

Last Updated : Sep 20, 2023, 12:36 PM IST

ABOUT THE AUTHOR

...view details