ಕರ್ನಾಟಕ

karnataka

By

Published : May 31, 2023, 11:07 AM IST

Updated : May 31, 2023, 1:51 PM IST

ETV Bharat / international

ಬಿಜೆಪಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ, ಜನರಿಗೆ ಬೆದರಿಕೆ: ಅಮೆರಿಕದಲ್ಲಿ ರಾಹುಲ್ ಗಾಂಧಿ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದು ಸ್ಯಾನಿಫ್ರಾನ್ಸಿಸ್ಕೋದಲ್ಲಿ ಸಭೆ ಉದ್ದೇಶಿಸಿ ಭಾಷಣ ಮಾಡಿದರು.

ರಾಹುಲ್​ ಗಾಂಧಿ ಸ್ಯಾನ್​ಫ್ರಾನ್ಸಿಸ್ಕೋ ಭಾಷಣ
ರಾಹುಲ್​ ಗಾಂಧಿ ಸ್ಯಾನ್​ಫ್ರಾನ್ಸಿಸ್ಕೋ ಭಾಷಣ

ಅಮೆರಿಕದಲ್ಲಿ ರಾಹುಲ್ ಗಾಂಧಿ ಭಾಷಣ

ಸ್ಯಾನ್​ಫ್ರಾನ್ಸಿಸ್ಕೋ (ಅಮೆರಿಕ):ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭಾಷಣಕ್ಕೆ ವಿರೋಧ ವ್ಯಕ್ತವಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಭೆಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಭಿಕರು ಘೋಷಣೆಗಳನ್ನು ಕೂಗಿದರು. ಸಭೆಯಿಂದ ಪ್ರತಿಭಟನಾಕಾರರನ್ನು ಹೊರಹಾಕುವ ಮೊದಲು ರಾಹುಲ್​ ನಗುತ್ತಲೇ 'ಭಾರತ್​ ಜೋಡೋ' ಎಂದು ಹೇಳಿ ಅವರತ್ತ ಕೈ ಬೀಸಿದರು.

ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದ್ದ 'ಪ್ರೀತಿಯ ಅಂಗಡಿ' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು. ಎಂದಿನಂತೆ ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ಶುರು ಮಾಡಿದರು. "ದೇಶದಲ್ಲಿ ಪ್ರಜಾಸತ್ತೆ ನಾಶವಾಗಿದೆ. ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ಜನರನ್ನು ಬೆದರಿಸುತ್ತಿದೆ" ಎಂದೆಲ್ಲ ಆರೋಪದ ಸುರಿಮಳೆ ಸುರಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಾವು ನಡೆಸಿದ ಭಾರತ್​ ಜೋಡೋ ಯಾತ್ರೆಯ ಬಗ್ಗೆಯೂ ಅವರು ಇದೇ ವೇಳೆ ಹೇಳಿಕೊಂಡರು.

ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದು ಅಷ್ಟು ಸುಲಭವಾಗಿರಲಿಲ್ಲ. ದಿನವೂ ನಡೆಯುವುದು ಸವಾಲಾಗಿತ್ತು. ಆದರೆ, ನನ್ನ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಉತ್ಸಾಹದಿಂದ ನೂರಕ್ಕೂ ಹೆಚ್ಚು ದಿನ ಪಾದಯಾತ್ರೆಯಿಂದ ಹಲವು ರಾಜ್ಯಗಳನ್ನು ಕ್ರಮಿಸಿ ಕಾಶ್ಮೀರದಲ್ಲಿ ಅಂತ್ಯಗೊಳಿಸಿದೆವು ಎಂದು ಹೇಳಿದರು.

ಹಳೆಯ ಪಕ್ಷ ಕಾಂಗ್ರೆಸ್​ ಬಗ್ಗೆ ಜನರಿಗೆ ಪ್ರೀತಿಯಿದೆ. ಪಕ್ಷಕ್ಕೆ ಯಾರು ಬೇಕಾದರೂ ಬರಲು ಬಯಸುತ್ತಾರೆ. ಅವರು ಪಕ್ಷ ಸೇರಿದ ಬಳಿಕ ಮುಕ್ತವಾಗಿ ಮಾತನಾಡುವ ಅವಕಾಶ ಹೊಂದುತ್ತಾರೆ. ಅವರು ಏನೇ ಹೇಳಿದರೂ, ನಮ್ಮಲ್ಲಿ ಯಾರೂ ಕೋಪಿಸಿಕೊಳ್ಳುವುದಿಲ್ಲ, ಅವರ ವಿರುದ್ಧ ಮಾತನಾಡುವುದಿಲ್ಲ. ನಾವೆಲ್ಲರೂ ಅದನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತೇವೆ. ವಾಸ್ತವವಾಗಿ, ನಾವು ಅವರೊಂದಿಗೆ ಪ್ರೀತಿಯಿಂದ ಇರುತ್ತೇವೆ. ಅವರೂ ನಮ್ಮನ್ನು ಪ್ರೀತಿಸುತ್ತಾರೆ. ಅದು ನಮ್ಮ ಸ್ವಭಾವವಾಗಿದೆ. ಆದರೆ, ಬೇರೆ ಪಕ್ಷಗಳಲ್ಲಿ ಅದು ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಆಕ್ಷೇಪ:ಬಿಜೆಪಿ ವಿರುದ್ಧ ರಾಹುಲ್​ ಟೀಕೆ ನಡೆಸುತ್ತಿರುವ ವೇಳೆ ಸಭಿಕರು ಗಲಾಟೆ ಆರಂಭಿಸಿದರು. ಆರ್​ಎಸ್​ಎಸ್​ ಮತ್ತು ಬಿಜೆಪಿ ವಿರುದ್ಧ ರಾಹುಲ್​ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘಟಕರು ಪ್ರತಿಭಟನಾಕಾರರನ್ನು ಸಭೆಯಿಂದ ಹೊರ ಕಳುಹಿಸಿದರು.

ಪಾಸ್​ಪೋರ್ಟ್ ವಿವಾದ:ರಾಹುಲ್​ ಗಾಂಧಿ ಅವರ ವಿದೇಶ ಪ್ರವಾಸವನ್ನು ತಡೆಯಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಆಗ್ರಹಿಸಿದ್ದರು. ರಾಹುಲ್‌ಗೆ ಪಾಸ್‌ಪೋರ್ಟ್ ನೀಡುವುದನ್ನೂ ವಿರೋಧಿಸಿದ್ದರು. ಪಾಸ್‌ಪೋರ್ಟ್ ನೀಡಿದರೆ ಅವರು ವಿದೇಶಕ್ಕೆ ಹೋಗಿ ದೇಶದ ವಿರುದ್ಧವೇ ಮಾತನಾಡುತ್ತಾರೆ. ಅಲ್ಲದೇ, ಅವರ ಮೇಲಿನ ಪ್ರಕರಣಗಳ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪಿಸಿದ್ದರು.

ಆದರೆ, ದೆಹಲಿ ಕೋರ್ಟ್ ರಾಹುಲ್ ವಿದೇಶ ಭೇಟಿಗೆ ಯಾವುದೇ ನ್ಯಾಯಾಲಯ ನಿರ್ಬಂಧ ಹೇರಿಲ್ಲ. ಹೀಗಾಗಿ ಪಾಸ್​ಪೋರ್ಟ್​ ನೀಡುವುದನ್ನು ತಡೆಯಲಾಗದು ಎಂದು ಹೇಳಿತ್ತು. ಪ್ರಯಾಣ ಮಾಡುವುದು ಅವರ ಮೂಲಭೂತ ಹಕ್ಕು. ಇದು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್​ ತಿಳಿಸಿತ್ತು.

ರಾಹುಲ್ ಗಾಂಧಿ 10 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು, ಮೂರು ನಗರಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಅಮೆರಿಕದ ರಾಜಕಾರಣಿಗಳನ್ನು ಭೇಟಿಯಾಗಲಿದ್ದಾರೆ. ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಐಒಸಿಯ ಇತರ ಸದಸ್ಯರು ಇತರರು ಇದ್ದರು.

ಇದನ್ನೂ ಓದಿ:ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ಐಎ ದಾಳಿ

Last Updated : May 31, 2023, 1:51 PM IST

ABOUT THE AUTHOR

...view details