ಕರಾಚಿ(ಪಾಕಿಸ್ತಾನ):ಪ್ರವಾದಿ ಮಹಮದ್ರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತದಲ್ಲಿ ಮುಸ್ಲಿಂ ಸಂಘಟನೆಗಳು ಭಾರಿ ಗಲಾಟೆ ನಡೆಸಿದ್ದಲ್ಲದೇ, ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬರ ಶಿರಚ್ಛೇದ ಘಟನೆಯೂ ನಡೆದಿದೆ. ಪಾಕಿಸ್ತಾನದಲ್ಲೂ ಇದೇ ಕಾರಣಕ್ಕಾಗಿ ಭಾರೀ ದೊಂಬಿ ನಡೆಸಲಾಗಿದೆ.
ಪಾಕಿಸ್ತಾನದ ಕರಾಚಿಯಲ್ಲಿನ ಸ್ಯಾಮ್ಸಂಗ್ ಕಚೇರಿಯಲ್ಲಿ ಪ್ರವಾದಿ ಮಹಮದ್ರನ್ನು ನಿಂದಿಸಲಾಗಿದೆ ಎಂಬ ಆರೋಪದ ಮೇಲೆ ಕಚೇರಿಯ ವಸ್ತುಗಳನ್ನು ಧ್ವಂಸ ಮಾಡಲಾಗಿದೆ. ಘಟನೆಯಲ್ಲಿ 20 ಕ್ಕೂ ಅಧಿಕ ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಘಟನೆ ಏನು?:ಪಾಕಿಸ್ತಾನದ ಕರಾಚಿಯ ಮಾಲ್ನಲ್ಲಿ ಸ್ಥಾಪಿಸಲಾದ ಸ್ಯಾಮ್ಸಂಗ್ ಕಂಪನಿಯ ಕಚೇರಿಯಲ್ಲಿ ವೈಫೈ ಸಾಧನಗಳಲ್ಲಿ ಪ್ರವಾದಿ ಮಹಮದ್ರ ವಿರುದ್ಧದ ಹೇಳಿಕೆಗಳನ್ನು ಬಿತ್ತರಿಸಲಾಗಿತ್ತು. ಇದರಿಂದ ಕ್ರೋಧಗೊಂಡ ಗುಂಪೊಂದು ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದೆ. ಕಂಪನಿಯ ಜಾಹೀರಾತು ಫಲಕಗಳನ್ನು ಕಿತ್ತು ಹಾಕಿ, ಬೆಂಕಿ ಹಚ್ಚಿ ಸುಟ್ಟು ಹಾಕಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಕರಾಚಿ ಪೊಲೀಸರು ವೈಫೈ ಸಾಧನಗಳನ್ನು ಬಂದ್ ಮಾಡಿಸಿದ್ದಾರೆ. ಉದ್ರಿಕ್ತರ ಪ್ರತಿಭಟನೆ ನಂತರ ಕಂಪನಿಯ 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬಂಧಿಸಿದ್ದಾರೆ. ಧರ್ಮನಿಂದೆಯ ಹೇಳಿಕೆಯನ್ನು ಪ್ರದರ್ಶಿಸಿದ ಸಾಧನವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಕಂಪನಿ ಸ್ಪಷ್ಟನೆ:ಇನ್ನು ಘಟನೆಯ ಬಳಿಕ ಎಚ್ಚೆತ್ತುಕೊಂಡ ಸ್ಯಾಮ್ಸಂಗ್ ಕಂಪನಿ ಟ್ವಿಟರ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಯಾವುದೇ ಧರ್ಮದ ಪರ ಮತ್ತು ನಿಂದನೆ ಸಹಿಸುವುದಿಲ್ಲ. ಕಂಪನಿ ತಟಸ್ಥ ಧಾರ್ಮಿಕ ನೀತಿ ಅನುಸರಿಸುತ್ತದೆ ಎಂದು ಹೇಳಿದೆ.
ಕಂಪನಿಯ ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಧರ್ಮ ನಿಷ್ಟೆ ಪಾಲಿಸಲಾಗುವುದು. ಎಲ್ಲ ಧರ್ಮದ ನಂಬಿಕೆಗಳ ಮೇಲೆ ಅತ್ಯಂತ ಗೌರವವನ್ನು ಕಂಪನಿ ಹೊಂದಿದೆ. ಇಸ್ಲಾಂ ಧರ್ಮವನ್ನು ಅತ್ಯಂತ ಗೌರವದಿಂದ ಕಾಣಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ, ಕಂಪನಿಯ ಶಾಖೆಯಲ್ಲಾದ ಪ್ರಮಾದದ ಬಗ್ಗೆ ಆಂತರಿಕ ತನಿಖೆ ನಡೆಸಲಾಗುತ್ತದೆ ಎಂದಿದೆ.
ಓದಿ:ಭಾಗ್ಯನಗರಿಯಲ್ಲಿ ಇಂದಿನಿಂದ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ