ಕರ್ನಾಟಕ

karnataka

By

Published : Jun 11, 2023, 3:22 PM IST

ETV Bharat / international

Pakistan Political crisis ಸೇನೆಯ ಬೆಂಬಲ ಸಿಗದೆ ಇಮ್ರಾನ್​ ಖಾನ್​ಗೆ ಹತಾಶೆ: ಬಿಲಾವಲ್ ಭುಟ್ಟೊ ಆರೋಪ

ಪಾಕಿಸ್ತಾನ ಸೇನೆಯು ದೇಶದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದರ ಬಗ್ಗೆ ಇಮ್ರಾನ್​ಗೆ ಯಾವುದೇ ತಕರಾರಿಲ್ಲ. ಆದರೆ ಸೇನೆಯು ತನ್ನ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂಬ ವಿಚಾರಕ್ಕೆ ಇಮ್ರಾನ್ ಹತಾಶರಾಗಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಆರೋಪಿಸಿದ್ದಾರೆ.

Imran Khan upset over losing army's backing: Bilawal Bhutto
Imran Khan upset over losing army's backing: Bilawal Bhutto

ಕರಾಚಿ (ಪಾಕಿಸ್ತಾನ) : ರಾಜಕೀಯದಲ್ಲಿ ಸೇನೆಯ ಹಸ್ತಕ್ಷೇಪಕ್ಕೆ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ವಿರೋಧ ಹೊಂದಿಲ್ಲ, ಆದರೆ ಸೇನೆಯು ತನ್ನನ್ನು ಬೆಂಬಲಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ಹತಾಶರಾಗಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ. "ಕಳೆದ ವರ್ಷದ ಏಪ್ರಿಲ್‌ನಲ್ಲಿ ಸೇನೆಯು ತಾನು ಇನ್ನು ಮುಂದೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲ್ಲ ಮತ್ತು ಯಾವುದೇ ಪಕ್ಷದ ಪರ ವಹಿಸಿಕೊಳ್ಳಲ್ಲ ಎಂದು ಹೇಳಿದಾಗಿನಿಂದ ಇಮ್ರಾನ್ ಖಾನ್ ಅವರಿಗೆ ಸಮಸ್ಯೆಗಳು ಆರಂಭವಾಗಿವೆ" ಎಂದು ಬಿಲಾವಲ್ ಕುಟುಕಿದ್ದಾರೆ.

"ಪಾಕಿಸ್ತಾನದಲ್ಲಿ ಸೇನೆಯು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂಬುದು ಅವರ ಸಮಸ್ಯೆಯಲ್ಲ, ಆದರೆ ತಮ್ಮನ್ನು ಬೆಂಬಲಿಸಲು ಸೇನೆ ಮುಂದಾಗುತ್ತಿಲ್ಲ ಎಂಬುದೇ ಅವರ ಪ್ರಮುಖ ಸಮಸ್ಯೆಯಾಗಿದೆ. ದೇಶದ ರಾಜಕೀಯದಲ್ಲಿ ಸೇನೆಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ನಮ್ಮ ಇತಿಹಾಸದ ಅರ್ಧಕ್ಕಿಂತಲೂ ಹೆಚ್ಚು ಅವಧಿಗೆ ಮಿಲಿಟರಿ ಆಡಳಿತ ನಡೆಸಿದೆ. ನನ್ನ ಪಕ್ಷವಾದ ಪಿಪಿಪಿ ಪಾಕಿಸ್ತಾನದ ಇತಿಹಾಸದಲ್ಲಿ ಎದುರಾದ ಪ್ರತಿಯೊಂದು ಸರ್ವಾಧಿಕಾರ ಸರ್ಕಾರವನ್ನು ಪ್ರಶ್ನಿಸಿದೆ" ಎಂದು ಅವರು ತಿಳಿಸಿದರು.

ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಜ್ ಮುಷರಫ್ ಅವರ ಕೊನೆಯ ಸರ್ವಾಧಿಕಾರ ಆಡಳಿತ ಸೇರಿದಂತೆ ಪಾಕಿಸ್ತಾನದ ಪ್ರತಿಯೊಂದು ಸರ್ವಾಧಿಕಾರಿ ಆಡಳಿತಗಳನ್ನು ಇಮ್ರಾನ್ ಬೆಂಬಲಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಪ್ರತಿಯೊಬ್ಬ ನಿರಂಕುಶಾಧಿಕಾರಿಯನ್ನು ಅವರು ಬೆಂಬಲಿಸಿದ್ದಾರೆ ಎಂದು ಬಿಲಾವಲ್ ಹೇಳಿದರು. 2018 ರಲ್ಲಿ ಇಮ್ರಾನ್ ಖಾನ್ ಹೇಗೆ ಅಧಿಕಾರಕ್ಕೆ ಬಂದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಪಾಕಿಸ್ತಾನ ಸೇನೆಯ ಕೆಲ ಮಾಜಿ ಅಧಿಕಾರಿಗಳ ಸಹಾಯದಿಂದ ಚುನಾವಣಾ ಅಕ್ರಮಗಳನ್ನು ಎಸಗಿ ಇಮ್ರಾನ್ ಅವರನ್ನು ಅಧಿಕಾರಕ್ಕೆ ತರಲಾಯಿತು ಎಂಬುದು ಸ್ಥಾಪಿತ ಸತ್ಯ ಎಂದು ಅವರು ತಿಳಿಸಿದರು.

ಮೇ 9 ರಂದು ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಖಾನ್ ತನ್ನ ಬೆಂಬಲಿಗರನ್ನು ಪ್ರೋತ್ಸಾಹಿಸಿದ್ದರು. ಖಾನ್ ಅವರ ಈ ಕ್ರಮದಿಂದ ಬಹುತೇಕ ಪಾಕಿಸ್ತಾನಿಗಳು ತೀವ್ರವಾಗಿ ಮನನೊಂದಿದ್ದಾರೆ. ಅವತ್ತು ಲಾಹೋರ್‌ನಲ್ಲಿರುವ ಕಾರ್ಪ್ ಕಮಾಂಡರ್ ಹೌಸ್, ರಾವಲ್ಪಿಂಡಿಯಲ್ಲಿರುವ GHQ (ಜನರಲ್ ಹೆಡ್‌ಕ್ವಾರ್ಟರ್ಸ್) ಮತ್ತು ಅನೇಕ ಮಿಲಿಟರಿ ಕಚೇರಿಗಳ ಮೇಲೆ ದಾಳಿ ಮಾಡಲಾಗಿತ್ತು ಎಂದು ಅವರು ನುಡಿದರು. ಪಾಕಿಸ್ತಾನದ ಇತಿಹಾಸದಲ್ಲಿ ಇಂಥ ದಾಳಿಯನ್ನು ಯಾವುದೇ ರಾಜಕೀಯ ಪಕ್ಷವು ಎಂದಿಗೂ ನಡೆಸಿಲ್ಲ ಮತ್ತು ಈಗ ನಮ್ಮ ಸೇನಾ ನೆಲೆಗಳ ಮೇಲಿನ ಈ ದಾಳಿಯಲ್ಲಿ ಭಾಗಿಯಾಗಿರುವವರು ದೇಶದ ಕಾನೂನಿನ ಪ್ರಕಾರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಲಾವಲ್ ಎಚ್ಚರಿಕೆ ನೀಡಿದರು.

ಒಂದು ಪ್ರಕರಣದಲ್ಲಿ ಇಮ್ರಾನ್​ಗೆ ಜಾಮೀನು: ಹೊಸ ಕೊಲೆ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಪಾಕಿಸ್ತಾನದ ಪದಚ್ಯುತ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಇಸ್ಲಾಮಾಬಾದ್ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ. ಅಂದರೆ ಮುಂದಿನ 14 ದಿನಗಳವರೆಗೆ ಅದೇ ಆರೋಪಗಳಿಗೆ ಸಂಬಂಧಿಸಿದಂತೆ ಅವರನ್ನು ಮತ್ತೆ ಬಂಧಿಸಲಾಗುವುದಿಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ. ಖಾನ್ ಅವರನ್ನು ಮೇ 9 ರಂದು ಬಂಧಿಸಲಾಗಿತ್ತು ಮತ್ತು ಮೂರು ದಿನಗಳ ಕಾಲ ಅವರು ಕಸ್ಟಡಿಯಲ್ಲಿದ್ದರು. ಈ ಅವಧಿಯಲ್ಲಿ ಅವರ ಬೆಂಬಲಿಗರು ದೇಶಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : Ukraine Russia war: ರಷ್ಯಾ ವಿರುದ್ಧ ಪ್ರತಿದಾಳಿ ಆರಂಭಿಸಿದ ಉಕ್ರೇನ್

ABOUT THE AUTHOR

...view details