ಕರ್ನಾಟಕ

karnataka

ಪಾಕಿಸ್ತಾನದಲ್ಲಿ ಚರ್ಚ್‌ಗಳ ಧ್ವಂಸ - 100 ಕ್ಕೂ ಹೆಚ್ಚು ಮಂದಿ ಬಂಧನ... ಘಟನೆ ಖಂಡಿಸಿದ ಅಮೆರಿಕ, ಶಾಂತಿ ಸ್ಥಾಪನೆಗೆ ಕರೆ

By

Published : Aug 17, 2023, 6:58 AM IST

Updated : Aug 17, 2023, 7:04 AM IST

ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಚರ್ಚ್‌ಗಳನ್ನು ಧ್ವಂಸಗೊಳಿಸಿದ ಬಳಿಕ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

pakistan
ಪಾಕಿಸ್ತಾನ

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ದುರ್ಷರ್ಮಿಗಳು, ಚರ್ಚ್‌ ಧ್ವಂಸಗೊಳಿಸಿದ್ದಷ್ಟೇ ಅಲ್ಲದೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇದೀಗ ಗಲಭೆಯಲ್ಲಿ ಭಾಗಿಯಾಗಿದ್ದ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಮಧ್ಯಂತರ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

ಧರ್ಮನಿಂದನೆ ಆರೋಪದ ಮೇಲೆ ಪಾಕಿಸ್ತಾನದ ಫೈಸಲಾಬಾದ್‌ನ ಜರನ್‌ವಾಲಾ ಜಿಲ್ಲೆಯಲ್ಲಿ ಬುಧವಾರ ಹಲವಾರು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಪ್ರಾಂತೀಯ ಸರ್ಕಾರ ಆದೇಶಿಸಿದೆ ಎಂದು ಪಂಜಾಬ್ ಸರ್ಕಾರದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಹಂಗಾಮಿ ಪಂಜಾಬ್ ಮಾಹಿತಿ ಸಚಿವ ಅಮೀರ್ ಮಿರ್ ಅವರು ಮಾಹಿತಿ ನೀಡಿ, ಪ್ರದೇಶದಲ್ಲಿ ಶಾಂತಿ ಕದಡುವ ಜನರನ್ನು ಬಂಧಿಸಲಾಗಿದೆ. ಜರನ್‌ವಾಲಾದಲ್ಲಿ ನಡೆದ ಹಿಂಸಾಚಾರವು ಉದ್ದೇಶಪೂರಿತವಾಗಿದೆ. ಸಾರ್ವಜನಿಕರ ಭಾವನೆಗಳನ್ನು ಕೆರಳಿಸಿ ಶಾಂತಿ ಕದಡುವ ಯತ್ನ ನಡೆದಿದೆ. ಫೈಸಲಾಬಾದ್‌ನ ಪರಿಸ್ಥಿತಿಯು ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.

ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಘಟನೆಯ ತನಿಖೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುವವರನ್ನು ತಕ್ಷಣವೇ ಬಂಧಿಸಲಾಗುವುದು. ಚರ್ಚ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ 6,000 ಕ್ಕೂ ಹೆಚ್ಚು ಪೊಲೀಸರು ಮತ್ತು ರೇಂಜರ್ಸ್ ಸಿಬ್ಬಂದಿ ಇದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಮಧ್ಯೆ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಕ್ರಿಶ್ಚಿಯನ್ ಮುಖಂಡರು ಆರೋಪಿಸಿದ್ದಾರೆ.

ಚರ್ಚ್ ಆಫ್ ಪಾಕಿಸ್ತಾನದ ಅಧ್ಯಕ್ಷ ಬಿಷಪ್ ಆಜಾದ್ ಮಾರ್ಷಲ್, 'ಪವಿತ್ರ ಕುರಾನ್ ಉಲ್ಲಂಘಿಸಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಹೊರಿಸಿ ಬೈಬಲ್‌ಗಳನ್ನು ಅಪವಿತ್ರಗೊಳಿಸಲಾಗಿದೆ. ಕ್ರೈಸ್ತರಿಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಲಾಗುತ್ತಿದೆ. ಘಟನೆಯಿಂದ ಬಿಷಪ್‌ಗಳು, ಪಾದ್ರಿಗಳು ಹಾಗೂ ಕ್ರೈಸ್ತ ಧರ್ಮ ಅನುಯಾಯಿಗಳು ತೀವ್ರವಾಗಿ ನೊಂದಿದ್ದೇವೆ. ಪಾಕಿಸ್ತಾನದ ಫೈಸಲಾಬಾದ್‌ ಜಿಲ್ಲೆಯ ಜರನ್‌ವಾಲಾದಲ್ಲಿ ಇದ್ದ ಚರ್ಚ್‌ ಅನ್ನು ದಾಳಿಕೋರರು ಧ್ವಂಸಗೊಳಿಸಿ ಬೆಂಕಿ ಇಟ್ಟಿದ್ದಾರೆ' ಎಂದು ಅವರು ಎಕ್ಸ್‌ ಆಪ್​ನಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ :ಧರ್ಮನಿಂದನೆ ಆರೋಪ: ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ವ್ಯಕ್ತಿಯ ಹತ್ಯೆ

ಇನ್ನು ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಕಿರುಕುಳ ಮತ್ತು ಉದ್ದೇಶಿತ ಸರಣಿ ದಾಳಿಗಳಿಗೆ ಒಳಗಾಗಿದ್ದಾರೆ. ಪಾಕಿಸ್ತಾನದ ಹ್ಯೂಮನ್ ರೈಟ್ಸ್ ಫೋಕಸ್ (ಮಾನವ ಹಕ್ಕುಗಳ ವೇದಿಕೆ) ಅಧ್ಯಕ್ಷ ನವೀದ್ ವಾಲ್ಟರ್ ನೀಡಿದ ಮಾಹಿತಿ ಪ್ರಕಾರ, 1947 ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ನಂತರ ಮುಸ್ಲಿಮರೇತರ ಧಾರ್ಮಿಕ ಅಲ್ಪಸಂಖ್ಯಾತರು 23 ಪ್ರತಿಶತದಷ್ಟಿದ್ದರು. ಆದರೆ ಈಗ ಶೇ 3ಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ.

ಅಮೆರಿಕ ಖಂಡನೆ:ಚರ್ಚ್‌ಗಳ ಮೇಲಿನ ಉದ್ದೇಶಿತ ದಾಳಿಯ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಯಾವುದೇ ಕಾರಣ ಇಟ್ಟುಕೊಂಡು ಹಿಂಸಾಚಾರ ಮಾಡುವುದು ಅಥವಾ ಬೆದರಿಕೆ ಹಾಕುವುದು ಎಂದಿಗೂ ಸ್ವೀಕಾರಾರ್ಹ ಕ್ರಮವಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ಹೇಳಿದ್ದು, ಘಟನೆಯನ್ನು ಖಂಡಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದು, ಈ ಆರೋಪಗಳ ಬಗ್ಗೆ ತನಿಖೆ ಸೂಕ್ತ ತನಿಖೆ ನಡೆಸಬೇಕು. ಶಾಂತಿಯುತ ಅಭಿವ್ಯಕ್ತಿ ಸ್ವಾತಂತ್ರ್ಯ ಬೆಂಬಲಿಸಲು ಪಾಕಿಸ್ತಾನಕ್ಕೆ ಅಮೆರಿಕ ಒತ್ತಾಯಿಸಿದೆ. ಧರ್ಮನಿಂದನೆಯ ಆರೋಪದ ಮೇಲೆ ಪಾಕಿಸ್ತಾನದ ಫೈಸಲಾಬಾದ್‌ನ ಜರನ್‌ವಾಲಾ ಜಿಲ್ಲೆಯಲ್ಲಿ ಬುಧವಾರ ಅನೇಕ ಚರ್ಚ್‌ಗಳನ್ನು ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಹೇಳಿಕೆ ನೀಡಿದೆ ಎಂದು ಪಾಕ್​ ಪ್ರಮುಖ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ :ಧರ್ಮ ನಿಂದಿಸಿದ ಅರಣ್ಯಾಧಿಕಾರಿ ಬಂಧಿಸಲು ಆಗ್ರಹ : ಠಾಣೆಯೆದುರು ಭಜನೆ ಮೂಲಕ ಪ್ರತಿಭಟನೆ

Last Updated : Aug 17, 2023, 7:04 AM IST

ABOUT THE AUTHOR

...view details