ಕರ್ನಾಟಕ

karnataka

ಒಡಿಶಾ ರೈಲು ದುರಂತ: ಬೈಡನ್​, ಪುಟಿನ್ ಸೇರಿ ವಿಶ್ವ ನಾಯಕರಿಂದ ಸಂತಾಪ

By

Published : Jun 4, 2023, 8:05 AM IST

ಒಡಿಶಾ ರೈಲು ಅಪಘಾತದಲ್ಲಿ ಬಲಿಯಾದವರಿಗೆ ವಿಶ್ವನಾಯಕರು ಸಂತಾಪ ಸೂಚಿಸಿದ್ದಾರೆ.

Odisha Train Crash
ಒಡಿಶಾ ರೈಲು ದುರಂತ ದೃಶ್ಯ, ಬೈಡನ್ ಹಾಗೂ ಪುಟಿನ್

ವಾಷಿಂಗ್ಟನ್/ಮಾಸ್ಕೋ:ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಘಟಿಸಿದ ತ್ರಿವಳಿ ರೈಲು ಅಪಘಾತವು ಸುಮಾರು ಮೂರು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಘಟನೆಯಲ್ಲಿ ಕನಿಷ್ಠ 288 ಜನರು ಸಾವನ್ನದ್ದಾರೆ. 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ, ತೈವಾನ್ ಅಧ್ಯಕ್ಷ ತ್ಸೈ-ಇಂಗ್ ವೆನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಮತ್ತು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಸೇರಿದಂತೆ ವಿಶ್ವ ನಾಯಕರು ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿದ್ದಾರೆ.

'ಭೀಕರ ದುರಂತದ ಸುದ್ದಿ ಕೇಳಿ ಆಘಾತವಾಗಿದೆ':ಭಾರತದಲ್ಲಿಸುಮಾರು 300 ಜನರನ್ನು ಬಲಿ ತೆಗೆದುಕೊಂಡ ರೈಲು ಅಪಘಾತದ ಸುದ್ದಿಯಿಂದ ತೀವ್ರ ಆಘಾತವಾಗಿದೆ' ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಶನಿವಾರ ತಿಳಿಸಿದ್ದಾರೆ. "ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮತ್ತು ಈ ಭಯಾನಕ ಘಟನೆಯಲ್ಲಿ ಗಾಯಗೊಂಡ ಅನೇಕರಿಗಾಗಿ ನಮ್ಮ ಪ್ರಾರ್ಥನೆಗಳು. ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಎರಡು ರಾಷ್ಟ್ರಗಳನ್ನು ಒಂದುಗೂಡಿಸುವ ಕುಟುಂಬ ಮತ್ತು ಸಂಸ್ಕೃತಿಯ ಸಂಬಂಧಗಳಲ್ಲಿ ಬೇರೂರಿರುವ ಆಳವಾದ ಬಂಧಗಳನ್ನು ಹಂಚಿಕೊಳ್ಳುತ್ತದೆ. ಘಟನೆಗೆ ಅಮೆರಿಕದಾದ್ಯಂತ ಜನರು ಭಾರತದ ಜನರೊಂದಿಗೆ ಶೋಕಿಸುತ್ತಾರೆ" ಎಂದು ತಿಳಿಸಿದ್ದಾರೆ. ನಾನು ಭಾರತದಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದ ದುರಂತ ಸುದ್ದಿಯಿಂದ ಎದೆಗುಂದಿದ್ದೇನೆ ಎಂದು ಪ್ರಥಮ ಮಹಿಳೆ ಜಿಲ್ ಬೈಡನ್ ಹೇಳಿದ್ದಾರೆ.

"ಭಾರತದಲ್ಲಿರುವ ಯುಎಸ್ ಮಿಷನ್ ಪರವಾಗಿ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖದ ಸಮಯದಲ್ಲಿ ನಾವು ಭಾರತ ಮತ್ತು ಒಡಿಶಾದ ಜನರೊಂದಿಗೆ ನಿಲ್ಲುತ್ತೇವೆ" ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಟ್ವೀಟ್‌ ಮಾಡಿದ್ದಾರೆ.

ಸಂತಾಪ ಸೂಚಿಸಿದ ಪುಟಿನ್:ರಷ್ಯಾ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಲಿಗ್ರಾಂ ಮೂಲಕ ಸಂತಾಪ ತಿಳಿಸಿದ್ದಾರೆ. "ಒಡಿಶಾದ ರೈಲು ದುರಂತದಲ್ಲಿ ಮೃತರಾದವರಿಗೆ ನಮ್ಮ ಸಂತಾಪಗಳು. ಘಟನೆಯಲ್ಲಿ ತಮ್ಮ ಸಂಬಂಧಿಕರು ಮತ್ತು ಆತ್ಮೀಯರನ್ನು ಕಳೆದುಕೊಂಡವರ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ ಮತ್ತು ಗಾಯಗೊಂಡ ಪ್ರತಿಯೊಬ್ಬರೂ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ದಣಿವರಿಯದ ಕೆಲಸಕ್ಕೆ ಅಭಿನಂದನೆ:ಬ್ರಿಟನ್​ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು "ಬದುಕುಳಿದವರಿಗೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ದಣಿವರಿಯದೇ ಕೆಲಸ ಮಾಡುವವರಿಗೆ ತಮ್ಮ ಬೆಂಬಲ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಪ್ರಧಾನಿ ಮೋದಿ ಮತ್ತು ಒಡಿಶಾದ ದುರಂತ ಘಟನೆಗಳಿಂದ ಪ್ರಭಾವಿತರಾದ ಎಲ್ಲರೊಂದಿಗೂ ಇವೆ. ಮೃತರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪಗಳು" ಎಂದು ಸುನಕ್ ಟ್ವೀಟ್ ಮಾಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಸಂತಾಪ: ರೈಲು ಅಪಘಾತದ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಪ್ರತ್ಯೇಕ ಸಂತಾಪ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂತಾಪ ಸೂಚಿಸಿದಜಪಾನ್ ಪ್ರಧಾನಿ:ರೈಲು ಅಪಘಾತದ ನಂತರ ಜಪಾನ್ ಪ್ರಧಾನಿ ಕಿಶಿಡಾ ಅವರು ಪ್ರಧಾನಿ ಮೋದಿ ಅವರಿಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. "ಒಡಿಶಾ ರಾಜ್ಯದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವ ಸುದ್ದಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಜಪಾನ್ ಸರ್ಕಾರ ಮತ್ತು ಅದರ ಜನರ ಪರವಾಗಿ ನಾನು ಅವರಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಕಿಶಿಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಕೂಡ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. "ಒಡಿಶಾ ರಾಜ್ಯದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಸುದ್ದಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಾನು ಸಂತ್ರಸ್ತರ ಆತ್ಮಕ್ಕಾಗಿ ಪ್ರಾರ್ಥಿಸುತ್ತೇನೆ ಮತ್ತು ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ" ಹಯಾಶಿ ಆಶಿಸಿದ್ದಾರೆ.

ಕೆನಡಾದವರು ಭಾರತದೊಂದಿಗೆ ನಿಂತಿದ್ದಾರೆ:ಈ ಸಂಕಷ್ಟದ ಸಮಯದಲ್ಲಿ ಕೆನಡಿಯನ್ನರು ಭಾರತದ ಜನರೊಂದಿಗೆ ನಿಂತಿದ್ದಾರೆ ಎಂದು ಕೆನಡಾ ಪ್ರಧಾನಿ ಟ್ರುಡೊ ಹೇಳಿದ್ದಾರೆ. "ಭಾರತದ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಚಿತ್ರಗಳು ಮತ್ತು ವರದಿಗಳು ನನ್ನ ಹೃದಯವನ್ನು ಛಿದ್ರಗೊಳಿಸಿವೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾನು ನನ್ನ ಆಳವಾದ ಸಂತಾಪ" ಎಂದು ಟ್ರೂಡೊ ಟ್ವೀಟ್ ಮಾಡಿದ್ದಾರೆ.

ಘಟನೆ ತೀವ್ರ ದುಃಖ ತಂದಿದೆ:"ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ನೂರಾರು ಜೀವಗಳನ್ನು ಕಳೆದುಕೊಂಡಿರುವುದು ನನಗೆ ದುಃಖ ತಂದಿದೆ. ಈ ದುಃಖದ ಸಮಯದಲ್ಲಿ ಪ್ರಧಾನಮಂತ್ರಿ ಮೋದಿ ಸರ್ಕಾರ ಮತ್ತು ಮೃತ ಕುಟುಂಬಗಳಿಗೆ ನಾನು ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಟ್ವೀಟ್ ಮಾಡಿದ್ದಾರೆ.

ಪಾಕ್ ಪ್ರಧಾನಿ ಸಂತಾಪ: "ಭಾರತದಲ್ಲಿ ರೈಲು ಅಪಘಾತದಲ್ಲಿ ನೂರಾರು ಜೀವಗಳನ್ನು ಕಳೆದುಕೊಂಡಿರುವ ಬಗ್ಗೆ ತೀವ್ರ ದುಃಖವಾಗಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್ ಮಾಡಿದ್ದಾರೆ. "ಒಡಿಶಾದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಸುದ್ದಿ ಕೇಳಿ ದುಃಖವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಟ್ವೀಟ್ ಮಾಡಿದ್ದಾರೆ.

ಸಂತ್ರಸ್ತರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ: "ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಮತ್ತು ಗಾಯಗೊಂಡವರ ಕುಟುಂಬಗಳೊಂದಿಗೆ ಇವೆ. ಸಂತ್ರಸ್ತರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಈ ದುಃಖದ ಸಮಯದಲ್ಲಿ ಶ್ರೀಲಂಕಾ ಭಾರತದೊಂದಿಗೆ ನಿಂತಿದೆ" ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಟ್ವೀಟ್ ಮಾಡಿದ್ದಾರೆ.

"ಒಡಿಶಾದಲ್ಲಿ ದುರಂತ ರೈಲು ಅಪಘಾತದ ಬೆಳವಣಿಗೆಗಳನ್ನು ನಾವು ಕೇಳುತ್ತಿದ್ದಂತೆ ನರೇಂದ್ರ ಮೋದಿ ಮತ್ತು ಭಾರತದ ಜನರಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ಪ್ರೀತಿಪಾತ್ರರು ನಷ್ಟ ಮತ್ತು ಭಯಾನಕತೆಯನ್ನು ಎದುರಿಸಲು ಭಗವಂತ ಶಕ್ತಿ ನೀಡಲಿ. ನಿಮ್ಮ ನೋವನ್ನು ನಾವು ಹಂಚಿಕೊಳ್ಳುತ್ತೇವೆ ಮತ್ತು ಗಾಯಾಳುಗಳಿಗಾಗಿ ಪ್ರಾರ್ಥಿಸುತ್ತೇವೆ" ಎಂದು ಭೂತಾನ್‌ನ ಪ್ರಧಾನಿ ಲೋಟೆ ತ್ಶೆರಿಂಗ್ ಟ್ವೀಟ್ ಮಾಡಿದ್ದಾರೆ

ಇಟಲಿಯ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಆಂಟೋನಿಯೊ ತಜಾನಿ ಕೂಡ ರೈಲು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಬಾಲಾಸೋರ್‌ನಲ್ಲಿ ಇಂದು ಸಂಭವಿಸಿದ ದುರಂತ ರೈಲು ಅಪಘಾತಕ್ಕಾಗಿ ಇಟಲಿ ಸರ್ಕಾರವು # ಭಾರತಕ್ಕೆ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಸಂತ್ರಸ್ತರಿಗೆ ಮತ್ತು ಗಾಯಗೊಂಡವರಿಗೆ ಪ್ರಾರ್ಥನೆ, ಇನ್ನೂ ಸಿಕ್ಕಿಬಿದ್ದವರನ್ನು ರಕ್ಷಿಸಲಾಗುವುದು ಎಂದು ನಾನು ಭಾವಿಸುತ್ತೇನೆ" ಎಂದು ತಜಾನಿ ಟ್ವೀಟ್ ಮಾಡಿದ್ದಾರೆ.

ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಕೂಡ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. "ಭಾರತದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಹಾನಿಗೊಳಗಾದ ಪ್ರತಿಯೊಬ್ಬರಿಗೂ ತೈವಾನ್ ಪ್ರಾರ್ಥಿಸುತ್ತಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಒಡಿಶಾದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಇದು ಅನೇಕರಿಗೆ ಜೀವಹಾನಿ ಮತ್ತು ಗಾಯಗಳಿಗೆ ಕಾರಣವಾಯಿತು. ಸಂತ್ರಸ್ತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

3ನೇ ಅತಿ ದೊಡ್ಡ ರೈಲು ದುರಂತ:ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ತ್ರಿವಳಿ ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಈ ಎರಡು ರೈಲುಗಳ 17 ಬೋಗಿಗಳು ಹಳಿತಪ್ಪಿ ತೀವ್ರವಾಗಿ ಹಾನಿಗೀಡಾಗಿವೆ. ಕನಿಷ್ಠ 288 ಮಂದಿ ಸಾವನ್ನಪ್ಪಿ, 1,175 ಮಂದಿ ಗಾಯಗೊಂಡಿದ್ದಾರೆ. 793 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಇದು ದೇಶದ ಇತಿಹಾಸದಲ್ಲಿ 3ನೇ ಮತ್ತು ಈ ಶತಮಾನದ ಅತಿ ದೊಡ್ಡ ರೈಲು ದುರಂತವಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ ಹಚ್ಚಲು ಮತ್ತು ಸಿಲುಕಿರುವವರನ್ನು ರಕ್ಷಿಸಲು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಒಡಿಶಾ ರೈಲು ದುರಂತಕ್ಕೆ ಕಾರಣವೇನು.. ಹೊರಬಿತ್ತು ಪ್ರಾಥಮಿಕ ತನಿಖಾ ಮಾಹಿತಿ

ABOUT THE AUTHOR

...view details