ಲಾಹೋರ್(ಪಾಕಿಸ್ತಾನ):ಅಮಾಯಕರ ಹತ್ಯೆಗಳಿಗೆ ಸಂಚು ರೂಪಿಸಿ ಭಯೋತ್ಪಾದನೆ ಹುಟ್ಟುಹಾಕಿದ ಪಾಕಿಸ್ತಾನದ ಭಯೋತ್ಪಾದಕರು ಈಗ ತಾವೇ ಕಂಡಕಂಡಲ್ಲಿ ಕೊಲೆಯಾಗುತ್ತಿದ್ದಾರೆ. ಕೆಲವು ಅಪರಿಚಿತರು ಒಬ್ಬರ ಹಿಂದೊಬ್ಬರಂತೆ ಅವರನ್ನು ಕೊಂದು ಹಾಕುತ್ತಿರುವುದರಿಂದ ಅನೇಕರು ರಹಸ್ಯ ಸ್ಥಳಗಳಲ್ಲೇ ಅಡಗಿ ಕುಳಿತಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಅಕ್ರಮ್ ಖಾನ್ ಘಾಜಿಯನ್ನು ಕೆಲವು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದರು. ಕಳೆದ 20 ತಿಂಗಳಲ್ಲಿ ಹತ್ಯೆಗೀಡಾದ 19ನೇ ಭಯೋತ್ಪಾದಕ ಈತ.
2018-2020ರ ನಡುವೆ ಅಕ್ರಮ್ ಖಾನ್ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಅಗತ್ಯ ನೇಮಕಾತಿಗಳನ್ನು ಮಾಡುತ್ತಿದ್ದ. ಕಳೆದೆರಡು ವರ್ಷಗಳಿಂದ ಕಾಶ್ಮೀರ ಕಣಿವೆಯಲ್ಲಿ ನುಸುಳುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಭಾರತದ ವಿರುದ್ಧ ದ್ವೇಷದ ಪಾಠಗಳನ್ನು ಕಲಿಸುತ್ತಿದ್ದನು. ಗುರುವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜಾರ್ ಜಿಲ್ಲೆಯಲ್ಲಿ ಬೈಕ್ನಲ್ಲಿ ಬಂದಿದ್ದ ಇಬ್ಬರು ಅಕ್ರಮ್ ಖಾನ್ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗಿದೆ. ಈ ವಿಷಯ ಹೊರಬರದಂತೆ ತಡೆಯಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹೇಳಿದೆ ಎನ್ನಲಾಗ್ತಿದೆ.
ಈ ಹತ್ಯೆಯಿಂದ ಎಚ್ಚೆತ್ತ ಪಾಕಿಸ್ತಾನದ ಸಂಸ್ಥೆಗಳು ತನಿಖೆಗಿಳಿದಿವೆ. ಸ್ಥಳೀಯ ಪ್ರತಿಸ್ಪರ್ಧಿಗಳು, ಇತರ ಭಯೋತ್ಪಾದಕ ಗುಂಪುಗಳ ಪಾತ್ರ ಮತ್ತು ಲಷ್ಕರ್ ಆಂತರಿಕ ವಿಭಾಗಗಳಂತಹ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಲಷ್ಕರ್ನ ಉನ್ನತ ಕಮಾಂಡರ್ಗಳು ಹತ್ಯೆಯಾಗುತ್ತಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲ್ಕೋಟ್ನಲ್ಲಿರುವ ಮಸೀದಿಯ ಹೊರಗೆ ಹಿರಿಯ ಲಷ್ಕರ್ ಕಮಾಂಡರ್ ರಿಯಾಜ್ ಅಹ್ಮದ್ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನಿಯಂತ್ರಣದಲ್ಲಿ ಲಷ್ಕರ್ ಸಂಘಟನೆ ಕೆಲಸ ಮಾಡುತ್ತಿದೆ. ಈ ವಾರ ಹತ್ಯೆಗೀಡಾದ ಶಾಹಿದ್ ಖ್ವಾಜಾ ಕೂಡ ಲಷ್ಕರ್ ಭಯೋತ್ಪಾದಕನಾಗಿದ್ದ. 2018ರಲ್ಲಿ ಭಾರತದ ಸುಂಜ್ವಾನ್ ಸೇನಾ ಶಿಬಿರದ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಕೂಡಾ ಈತನೇ ಆಗಿದ್ದಾನೆ.