ಕರ್ನಾಟಕ

karnataka

ಭಾಗಶಃ ಕದನವಿರಾಮ ಪ್ರಸ್ತಾಪಿಸಿದ ಇಸ್ರೇಲ್; ಒತ್ತೆಯಾಳು ಬಿಡಲ್ಲ ಎಂದ ಹಮಾಸ್

By ETV Bharat Karnataka Team

Published : Dec 28, 2023, 4:56 PM IST

ಹಮಾಸ್​ನಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಇಸ್ರೇಲ್ ಹೊಸ ಕದನವಿರಾಮದ ಒಪ್ಪಂದವನ್ನು ಪ್ರಸ್ತಾಪಿಸಿದೆ.

Israel offers new prisoner exchange deal: report
Israel offers new prisoner exchange deal: report

ನವದೆಹಲಿ: ಕೈದಿಗಳು ಹಾಗೂ ಒತ್ತೆಯಾಳುಗಳ ವಿನಿಮಯಕ್ಕಾಗಿ ಇಸ್ರೇಲ್ ಹೊಸ ಒಪ್ಪಂದವೊಂದನ್ನು ಕತಾರ್ ಮುಂದಿಟ್ಟಿದೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ. ಹೊಸ ಪ್ರಸ್ತಾವನೆಯನ್ನು ಅಮೆರಿಕದ ಮೂಲಕ ಕತಾರ್​ಗೆ ತಲುಪಿಸಲಾಗಿದೆ ಎಂದು ಇಸ್ರೇಲ್​ನ ಮಾಧ್ಯಮ ವರದಿಗಳು ತಿಳಿಸಿವೆ. ಪ್ರಸ್ತಾಪಿತ ಹೊಸ ಒಪ್ಪಂದದಲ್ಲಿ ಇಸ್ರೇಲ್ ಗಾಜಾದ ಜನನಿಬಿಡ ಪ್ರದೇಶಗಳಿಂದ ಮೊದಲಿಗೆ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಮತ್ತು ಗಾಜಾಗೆ ಹೆಚ್ಚುವರಿ ನೆರವು ಸಾಮಗ್ರಿ ಹರಿದು ಬರಲು ಬಿಡುವ ಅಂಶಗಳು ಸೇರಿವೆ.

"ಎರಡನೇ ಹಂತದಲ್ಲಿ ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿರುವ ಇಸ್ರೇಲ್​ನ ಮಹಿಳಾ ಸೈನಿಕರು, ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಮೃತ ಇಸ್ರೇಲಿಗಳ ಶವಗಳನ್ನು ಹಸ್ತಾಂತರಿಸಬೇಕು" ಎಂದು ಇಸ್ರೇಲ್ ಷರತ್ತುಗಳನ್ನು ಮುಂದಿಟ್ಟಿದೆ.

ಆದರೆ ಸಂಪೂರ್ಣ ಕದನ ವಿರಾಮವಾಗದೆ ಯಾವುದೇ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪುವುದಿಲ್ಲ ಎಂದು ಹಮಾಸ್ ಪದೇ ಪದೆ ಹೇಳಿರುವುದು ಗಮನಾರ್ಹ. ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಒಂದು ವಾರದ ಕದನ ವಿರಾಮದ ಸಮಯದಲ್ಲಿ, ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. 129 ಒತ್ತೆಯಾಳುಗಳು ಇನ್ನೂ ಹಮಾಸ್ ವಶದಲ್ಲಿದ್ದಾರೆ. ಉಳಿದ 129 ಒತ್ತೆಯಾಳುಗಳಲ್ಲಿ ಕನಿಷ್ಠ 20 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸರ್ಕಾರ ಶಂಕಿಸಿದೆ.

ಇಸ್ರೇಲ್​ಗೆ ವಿಶ್ವಸಂಸ್ಥೆ ಒತ್ತಾಯ: ಆಕ್ರಮಿತ ವೆಸ್ಟ್​ ಬ್ಯಾಂಕ್ ಪ್ರದೇಶದಲ್ಲಿ ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗುತ್ತಿದೆ ಎಂದು ಹೇಳಿರುವ ವಿಶ್ವಸಂಸ್ಥೆ, ಅಕ್ರಮವಾಗಿ ಪ್ಯಾಲೆಸ್ಟೈನಿಯರ ಹತ್ಯೆ ಮಾಡುವುದನ್ನು ಇಸ್ರೇಲ್ ನಿಲ್ಲಿಸಬೇಕೆಂದು ಒತ್ತಾಯಿಸಿದೆ.

ಹಸಿವಿನ ಸಂಕಷ್ಟ ತೀವ್ರ: ಯುದ್ಧ ಪೀಡಿತ ಪ್ಯಾಲೆಸ್ಟೈನ್​ ಪ್ರದೇಶದಾದ್ಯಂತ ಹಸಿವಿನ ಬಾಧೆ ತೀವ್ರವಾಗಿರುವುದನ್ನು ಉಲ್ಲೇಖಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಗಾಜಾದ ಜನತೆ ಗಂಭೀರ ಅಪಾಯದಲ್ಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಗಾಜಾ ಜನತೆ ಎದುರಿಸುತ್ತಿರುವ ಗಂಭೀರ ಅಪಾಯವನ್ನು ನಿವಾರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಹಸಿವಿನಿಂದ ಬಳಲುತ್ತಿರುವ ಜನ ವಿಶ್ವಸಂಸ್ಥೆಯ ವಾಹನಗಳನ್ನು ನಿಲ್ಲಿಸಿ ಆಹಾರಕ್ಕಾಗಿ ಅಂಗಲಾಚಿದರು ಎಂದು ಡಬ್ಲ್ಯುಎಚ್ಒ ಹೇಳಿದೆ. ಜನ ಎಷ್ಟು ತೀವ್ರವಾಗಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದರೆ ಅವರನ್ನು ದಾಟಿ ನಾವು ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ಕೂಡ ಕಷ್ಟವಾಗುತ್ತಿದೆ ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಗೂಢಚಾರರ ಪತ್ತೆಗೆ ಎಐ ತಂತ್ರಜ್ಞಾನ ತಯಾರಿಸಿದ ಚೀನಾ

ABOUT THE AUTHOR

...view details