ವಾಷಿಂಗ್ಟನ್ (ಅಮೆರಿಕ) : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಕೊಲೆ ಮಾಡಲು ಮತ್ತು ಅಧಿಕಾರ ಪಡೆಯುವ ಉದ್ದೇಶದಿಂದಲೇ ಭಾರತೀಯ ಮೂಲದ ಯುವಕ ಬಾಡಿಗೆ ಟ್ರಕ್ ಅನ್ನು ವೈಟ್ ಹೌಸ್ ತಡೆಗೋಡೆಗೆ ಅಪ್ಪಳಿಸಿದ್ದ ಎಂದು ಮಾಧ್ಯಮಗಳು ಹೇಳಿವೆ. 19 ವರ್ಷದ ಭಾರತೀಯ ಮೂಲದ ಯುವಕ ಸಾಯಿ ವರ್ಷಿತ್ ಕಂದುಲ ಎಂಬಾತ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಟ್ರಕ್ ಒಂದನ್ನು ಲಫಾಯೆಟ್ ಪಾರ್ಕ್ ಬದಿಯ ಉತ್ತರ ಭಾಗದ ಭದ್ರತಾ ತಡೆಗೋಡೆಗೆ ಹಾಯಿಸಿದ್ದ. ಘಟನೆಯ ನಂತರ ಸ್ಥಳದಲ್ಲಿದ್ದ ಜನ ಆತಂಕದಿಂದ ಓಡಿ ಪಾರಾಗಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೈಟ್ ಹೌಸ್ ಗೇಟ್ನಿಂದ ಸಾಕಷ್ಟು ದೂರದಲ್ಲಿ ಈ ಘಟನೆ ನಡೆದಿದ್ದರೂ ಸುರಕ್ಷತಾ ಕ್ರಮವಾಗಿ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಬೇಕಾಯಿತು. ಅಲ್ಲದೆ ಹತ್ತಿರದ ಹೇ ಆ್ಯಡಮ್ಸ್ ಹೆಸರಿನ ಹೊಟೇಲ್ನಲ್ಲಿದ್ದ ಎಲ್ಲರನ್ನೂ ಖಾಲಿ ಮಾಡಿಸಲಾಗಿತ್ತು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಮಿಸ್ಸೋರಿ ಚೆಸ್ಟರ್ಫೀಲ್ಡ್ ನಿವಾಸಿಯಾದ ಕಂದುಲಾ ಅಪಘಾತ ನಡೆಸುವ ಮುನ್ನ ಸೇಂಟ್ ಲೂಯಿಸ್ನಿಂದ ಒನ್ ವೇ ಟಿಕೆಟ್ನಲ್ಲಿ ಡಲ್ಲಾಸ್ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಬಂದಿದ್ದ. ಹಾಗೆ ಬಂದ ತಕ್ಷಣವೇ ಬಾಡಿಗೆಗೆ ಟ್ರಕ್ ಪಡೆದು ದುಷ್ಕೃತ್ಯ ಎಸಗಿದ್ದ.
ಆರೋಪಿಯು ವಾಹನವನ್ನು ಶ್ವೇತಭವನದ ಹೊರಗಿನ ಕಾಲುದಾರಿಯ ಮೇಲೆ, ಉತ್ತರ ಭಾಗದ ಲೋಹದ ತಡೆಗೋಡೆಗೆ ಹಾಯಿಸಿದ್ದ. ಕಂದುಲಾ ಆರಂಭದಲ್ಲಿ ಟ್ರಕ್ ಅನ್ನು ಹಿಮ್ಮುಖವಾಗಿ ಚಲಿಸಿದ್ದ. ಯುನೈಟೆಡ್ ಸ್ಟೇಟ್ಸ್ ಪಾರ್ಕ್ ಪೊಲೀಸ್ ಅಧಿಕಾರಿಗಳು ಆತನನ್ನು ಬಂಧಿಸುವಷ್ಟರಲ್ಲಿ ಎರಡನೇ ಬಾರಿ ತಡೆಗೋಡೆಗೆ ಅಪ್ಪಳಿಸಿದ್ದ. ಕಂದುಲಾ ಈ ಅಪಘಾತ ಎಸಗಲು ಆರು ತಿಂಗಳಿನಿಂದ ಪ್ಲ್ಯಾನ್ ಮಾಡಿದ್ದ ಹಾಗೂ ಇಡೀ ಯೋಜನೆಯನ್ನು ಹಸಿರು ಬಣ್ಣದ ಪುಸ್ತಕವೊಂದರಲ್ಲಿ ಬರೆದಿದ್ದ ಎಂಬ ಅಂಶವನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.