ಕರ್ನಾಟಕ

karnataka

'ಶತ್ರುಗಳ ಶಿರಚ್ಛೇದದ ಹೊರತು ಬೇರೆ ಚಿಕಿತ್ಸೆ ಇಲ್ಲ': ಹಮಾಸ್​ ಉಗ್ರರ ಟಿಪ್ಪಣಿ ಬಿಡುಗಡೆ ಮಾಡಿದ ಇಸ್ರೇಲ್​

By ANI

Published : Oct 25, 2023, 10:47 PM IST

ಇಸ್ರೇಲ್​ ಮೇಲೆ ದಾಳಿಯನ್ನು ತೀವ್ರಗೊಳಿಸಲು ಹಮಾಸ್​ ತನ್ನ ಉಗ್ರರಿಗೆ ಟಿಪ್ಪಣಿ ಬರೆದಿದ್ದು, ಇದನ್ನು ಇಸ್ರೇಲ್ ಸೇನೆ ಬಹಿರಂಗಪಡಿಸಿದೆ.

ಹಮಾಸ್​ ಉಗ್ರ ಟಿಪ್ಪಣಿ ಬಿಡುಗಡೆ ಮಾಡಿದ ಇಸ್ರೇಲ್​
ಹಮಾಸ್​ ಉಗ್ರ ಟಿಪ್ಪಣಿ ಬಿಡುಗಡೆ ಮಾಡಿದ ಇಸ್ರೇಲ್​

ಟೆಲ್ ಅವಿವ್ (ಇಸ್ರೇಲ್):ಗಾಜಾ ಪಟ್ಟಿಯ ಮೇಲೆ ಇಸ್ರೇಲ್​ ವಾಯುದಾಳಿ ಮುಂದುವರಿಸಿದೆ. ಯುದ್ಧ ಆರಂಭವಾಗಿ ಬುಧವಾರಕ್ಕೆ 19 ದಿನಗಳಾಗಿದೆ. 6,500ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಈ ಮಧ್ಯೆ ಹಮಾಸ್​ ಉಗ್ರರಿಗೆ ಸೇರಿದ ಟಿಪ್ಪಣಿಯೊಂದು ಹೊರಬಿದ್ದಿದೆ. ಅದರಲ್ಲಿ 'ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಬೇಕು, ಅದಕ್ಕಾಗಿ ಸಜ್ಜಾಗಿ' ಎಂದು ಕರೆ ನೀಡಲಾಗಿದೆ. ಇದು ಉಗ್ರರ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತದೆ ಎಂದು ಇಸ್ರೇಲ್​ ಹೇಳಿದೆ.

ಉಗ್ರರ ಬರಹವುಳ್ಳ ಚೀಟಿಯನ್ನು ಐಡಿಎಫ್​ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಯೋತ್ಪಾದಕ ಗುಂಪಾದ ಹಮಾಸ್ ತನ್ನ ಉದ್ದೇಶಗಳ ಬಗ್ಗೆ ಬಹಳ ಸ್ಪಷ್ಟವಾಗಿದೆ. ಯುದ್ಧ ಮುಗಿಸುವ ಯಾವುದೇ ಇರಾದೆಯನ್ನು ಅದು ಹೊಂದಿಲ್ಲ ಎಂದು ತೋರಿಸುತ್ತದೆ. ರಕ್ತಪಿಪಾಸುಗಳಿಗೆ ಕೊನೆಯೇ ಇಲ್ಲವಾಗಿದೆ ಎಂದು ಹೇಳಿದೆ.

ಚೀಟಿಯಲ್ಲಿನ ಬರಹ ಹೀಗಿದೆ:ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬುಧವಾರ ಹಮಾಸ್‌ನ ಉಗ್ರನಿಂದ ಪಡೆದ ಟಿಪ್ಪಣಿಯಲ್ಲಿ, "ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ಹರಿತಗೊಳಿಸಬೇಕು. ಅಲ್ಲಾಹುವಿನ ಮುಂದೆ ನಿಮ್ಮ ಉದ್ದೇಶಗಳು ಪರಿಶುದ್ಧವಾಗಿರಬೇಕು. ಶತ್ರುವಿನ ತಲೆ ಕಡಿದು, ಹೃದಯ ಮತ್ತು ಯಕೃತ್ತುಗಳನ್ನು ಕಿತ್ತು, ಹರಿದು ಹಾಕುವುದನ್ನು ಹೊರತುಪಡಿಸಿ ಯಾವುದೇ ಚಿಕಿತ್ಸೆ ಇಲ್ಲದ ರೋಗವಿದು ಎಂದು ತಿಳಿಯಿರಿ" ಎಂದು ಬರೆಯಲಾಗಿದೆ. ಇದನ್ನು ಹಮಾಸ್​ ತನ್ನವರಿಗೆ ಕಳುಹಿಸಿದೆ ಎಂದು ಇಸ್ರೇಲ್​ ಸೇನೆ ಹೇಳಿದೆ.

ವಿಶ್ವಸಂಸ್ಥೆ ವಿರುದ್ಧ ಇಸ್ರೇಲ್​ ಕಿಡಿ:ಅಕ್ಟೋಬರ್ 7ರಂದು ಹಮಾಸ್​ ಉಗ್ರರು ದಾಳಿ ಮಾಡಿದ್ದು ದೊಡ್ಡದಲ್ಲ. ಬದಲಿಗೆ ಗಾಜಾದ ಮೇಲೆ ಇಸ್ರೇಲ್​ ಸೇನೆ ನಡೆಸುತ್ತಿರುವ ದಾಳಿ ಮಾರಣಾಂತಿಕವಾಗಿದೆ. ಇದು ಅಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ವಿಶ್ವಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿತ್ತು. ಯುಎನ್​ ಜನರಲ್ ಸೆಕ್ರೆಟರಿ ಆಂಟೋನಿಯೊ ಗುಟೆರೆಸ್ ಮತ್ತು ಅಂಡರ್ ಸೆಕ್ರೆಟರಿ ಜನರಲ್ ಮಾರ್ಟಿನ್ ಗ್ರಿಫಿತ್ಸ್‌ ಈ ಬಗ್ಗೆ ಹೇಳಿಕೆ ನೀಡಿದ್ದರು.

ವಿಶ್ವಸಂಸ್ಥೆಯ ಹೇಳಿಕೆಯನ್ನು ಇಸ್ರೇಲ್​ ಖಂಡಿಸಿದೆ. ವಿಶ್ವಸಂಸ್ಥೆ ಯಾವುದೇ ಅಧಿಕಾರಿಗಳಿಗೆ ವೀಸಾ ನೀಡುವುದಿಲ್ಲ ಎಂದು ಘೋಷಿಸಿದೆ. ಯುಎನ್​ ಮಾನವೀಯ ವ್ಯವಹಾರಗಳ ವಿಭಾಗದ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್‌ಗೆ ವೀಸಾವನ್ನು ನಿರಾಕರಿಸಲಾಗಿದೆ. ಇದು ಅವರಿಗೆ ತಕ್ಕ ಪಾಠವಾಗಲಿದೆ ಎಂದು ಇಸ್ರೇಲ್​ ಹೇಳಿದೆ.

ವಿಶ್ವಸಂಸ್ಥೆ ಕಾರ್ಯದರ್ಶಿ ಗುಟೆರೆಸ್ ಅವರು ತಕ್ಷಣ ರಾಜೀನಾಮೆ ನೀಡಬೇಕು. ಹಮಾಸ್​ ದಾಳಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಪ್ಯಾಲೆಸ್ಟೈನ್​ ಜನರು 56 ವರ್ಷಗಳಿಂದ ಆಕ್ರಮಣಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ. ಇಸ್ರೇಲ್​ ಮೇಲಿನ ಆಕ್ರಮಣವನ್ನು ಅವರು ಕಡೆಗಣಿಸಿದ್ದು, ವಿಶ್ವಸಂಸ್ಥೆಯನ್ನು ಮುನ್ನಡೆಸಲು ಅವರು ಅನರ್ಹರು ಎಂದು ಟೀಕಿಸಿದೆ.

ಇದನ್ನೂ ಓದಿ:ಗಾಜಾದಲ್ಲಿ ಸಾಂಕ್ರಾಮಿಕ ರೋಗ ಭೀತಿ: ಪ್ಯಾಲೆಸ್ಟೈನ್ ಆರೋಗ್ಯ ಸಚಿವರಿಂದ ಎಚ್ಚರಿಕೆ

ABOUT THE AUTHOR

...view details