ಕರ್ನಾಟಕ

karnataka

ಹಮಾಸ್​ ಉಗ್ರರ ಬೆನ್ನಟ್ಟಿ ಕೊಂದು, ನಾಗರಿಕರನ್ನು ರಕ್ಷಿಸಿದ ಇಸ್ರೇಲ್​ ಸೇನೆ: ನೋಡಿ ರೋಚಕ ವಿಡಿಯೋ

By ANI

Published : Oct 26, 2023, 5:17 PM IST

ಗಾಜಾ ಪಟ್ಟಿಯ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್​, ಗಡಿ ಭಾಗದಲ್ಲಿ ತನ್ನ ನಾಗರಿಕರ ರಕ್ಷಣೆಯಲ್ಲಿ ತೊಡಗಿದೆ.

ನಾಗರಿಕರ ರಕ್ಷಿಸಿದ ಇಸ್ರೇಲ್​ ಸೇನೆ
ನಾಗರಿಕರ ರಕ್ಷಿಸಿದ ಇಸ್ರೇಲ್​ ಸೇನೆ

ಇಸ್ರೇಲ್:ಗಾಜಾ ಪಟ್ಟಿಯನ್ನು ಛಿದ್ರ ಮಾಡುತ್ತಿರುವ ಇಸ್ರೇಲ್​, ವಾಯುದಾಳಿಯ ಜೊತೆಗೆ ಭೂದಾಳಿಗೆ ಸೇನೆಯನ್ನು ಸಜ್ಜು ಮಾಡುತ್ತಿದೆ. 20ನೇ ದಿನದ ಯುದ್ಧದಲ್ಲಿ ಈವರೆಗೂ ಎರಡೂ ಕಡೆಗಳಿಂದ 7 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಇಷ್ಟಾದರೂ, ಹಠ ಬಿಡದ ಹಮಾಸ್​ ಬಂಡುಕೋರರು ಇಸ್ರೇಲ್​ ಗಡಿಗಳಲ್ಲಿ ನುಸುಳಿ ಬಂದು ಸೇನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಇದರ ವಿಡಿಯೋವೊಂದನ್ನು ಐಡಿಎಫ್​ ಹಂಚಿಕೊಂಡಿದೆ.

ದಕ್ಷಿಣ ಇಸ್ರೇಲ್​ನ ಕಿಬ್ಬುಜ್ ಬೀರಿ ಎಂಬಲ್ಲಿ ಹಮಾಸ್​ ಉಗ್ರರನ್ನು ಹೊಡೆದುರುಳಿಸಿ ನಾಗರಿಕರನ್ನು ರಕ್ಷಿಸಲಾಗಿದೆ. ಕಾರಿನಲ್ಲಿ ಬರುವ ಉಗ್ರರು ಇಸ್ರೇಲ್​ ಸೈನಿಕರನ್ನು ಕಂಡು ರಸ್ತೆ ಪಕ್ಕದಲ್ಲಿ ದಿಢೀರ್ ವಾಹನ ನಿಲ್ಲಿಸಿ ಓಟಕಿತ್ತಿದ್ದಾರೆ. ಇದನ್ನು ಕಂಡ ಸೈನಿಕರು ಗುಂಡಿನ ದಾಳಿ ನಡೆಸಿ ಇಬ್ಬರು ಉಗ್ರರನ್ನು ಬೇಟೆಯಾಡುತ್ತಾರೆ. ಬಳಿಕ ಅಲ್ಲಿಂದ ಹಲವು ನಾಗರಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಅದನ್ನು ಐಡಿಎಫ್​ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಹಮಾಸ್​ ಗುಂಪಿನವರನ್ನು ನಾಶ ಮಾಡಿ ನಮ್ಮ ಜನರನ್ನು ರಕ್ಷಣೆ ಮಾಡಿದ ನೀವೆಂದೂ ಕಂಡಿರದ ರೋಚಕ ದೃಶ್ಯವನ್ನು ವೀಕ್ಷಿಸಿ ಎಂದು ಬರೆದುಕೊಂಡಿದೆ.

ಉಗ್ರ ಕೋಠಿಗಳು ಉಡೀಸ್​:ಗಾಜಾದ ಮೇಲೆ ಪದಾತಿದಳದ ಆಕ್ರಮಣಕ್ಕೆ ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಇಸ್ರೇಲ್ ಯುದ್ಧ ಟ್ಯಾಂಕ್‌ಗಳು ಮತ್ತು ಭೂ ಸೇನಾಪಡೆಗಳು ಸಾಲು ಸಾಲಾಗಿ ಗಾಜಾ ಪಟ್ಟಿ ಕಡೆಗೆ ಬರುತ್ತಿವೆ. ಹಮಾಸ್​ ಭಯೋತ್ಪಾದಕರ ಅಡಗುತಾಣಗಳು, ಲಾಂಚ್ ಪೋಸ್ಟ್‌ಗಳನ್ನು ಧ್ವಂಸ ಮಾಡಲಾಗುತ್ತಿದೆ.

ಇದರ ವಿಡಿಯೋವನ್ನೂ ಹಂಚಿಕೊಂಡಿರುವ ಇಸ್ರೇಲ್​ ಸೇನೆ, ಮುಂದಿನ ಹಂತದ ಯುದ್ಧದ ತಯಾರಿಯಲ್ಲಿ ಐಡಿಎಫ್​ ಪಡೆಗಳು ಉತ್ತರ ಗಾಜಾದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಯುದ್ಧ ಟ್ಯಾಂಕರ್​ಗಳು ಮತ್ತು ಪದಾತಿ ದಳಗಳು ಹಲವಾರು ಭಯೋತ್ಪಾದಕ ನೆಲೆಗಳು, ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣಾ ಪೋಸ್ಟ್‌ಗಳನ್ನು ಧ್ವಂಸ ಮಾಡಿವೆ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದೆ.

ಇಸ್ರೇಲ್​ ಉಳಿವಿಗೆ ಯುದ್ಧ:ಇನ್ನು, ಇಸ್ರೇಲ್ ತನ್ನ ಅಸ್ತಿತ್ವಕ್ಕಾಗಿ ಯುದ್ಧ ಮಾಡುತ್ತಿದೆ ಎಂಬ ತಮ್ಮ ಮಾತನ್ನು ಪುನರುಚ್ಚರಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ವಿರುದ್ಧ ನಡೆಸುತ್ತಿರುವ ಈ ಯುದ್ಧದ ಗುರಿ ನಮ್ಮ ರಾಷ್ಟ್ರದ ರಕ್ಷಣೆಯಾಗಿದೆ. ಗಾಜಾದಲ್ಲಿ ಅಡಗಿರುವ ಹಮಾಸ್ ಗುಂಪನ್ನು ನಾಶಮಾಡಲು ನೆಲದ ಆಕ್ರಮಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.

ಇಸ್ರೇಲ್ ಪದಾತಿ ದಳ ನೆಲದ ಕಾರ್ಯಾಚರಣೆಗೆ ಸಿದ್ಧವಾಗುತ್ತಿದೆ. ಆದರೆ, ಯಾವಾಗ, ಹೇಗೆ ದಾಳಿ ನಡೆಯಲಿದೆ ಎಂಬುದನ್ನು ಹೇಳಲಾಗದು. ಅದರ ವ್ಯಾಪ್ತಿಯನ್ನೂ ನಾನು ಹೇಳಲಾರೆ ಎಂದಿರುವುದು ದೊಡ್ಡ ದಾಳಿಗೆ ಇಸ್ರೇಲ್​ ಪಡೆಗಳು ಸಜ್ಜಾಗಿವೆ ಎಂಬ ಸುಳಿವನ್ನು ನೀಡಿದ್ದಾರೆ.

ಇಸ್ರೇಲ್​ನ ಅಸ್ತಿತ್ವಕ್ಕಾಗಿ ಹೋರಾಟ ನಡೆಯುತ್ತಿದೆ. ಯುದ್ಧವು ಎರಡು ಪ್ರಮುಖ ಉದ್ದೇಶಗಳನ್ನು ಈಡೇರಿಸಬೇಕಿದೆ. ಒಂದು ಹಮಾಸ್ ಉಗ್ರ ಪಡೆಯ ಸಾಮರ್ಥ್ಯದ ನಾಶ, ಅವರ ಒತ್ತೆಯಲ್ಲಿರುವ ನಮ್ಮ ಜನರನ್ನು ಸುರಕ್ಷಿತವಾಗಿ ವಾಪಸ್​ ಕರೆತರುವುದಾಗಿದೆ ಎಂದು ತಿಳಿಸಿದರು.

ನೆಲದ ಆಕ್ರಮಣಕ್ಕೆ ಇಸ್ರೇಲ್​ ಜನರು, ಆಡಳಿತದ ಸರ್ವಾನುಮತವಿದೆ. ಅಕ್ಟೋಬರ್​ 7 ರಂದು 1400 ಜನರ ಸಾವಿಗೆ ಕಾರಣವಾದ ಹಮಾಸ್​ ನಿರ್ನಾಮ ಮಾಡಿ, ನಮ್ಮ ಸಹೋದರ- ಸಹೋದರಿಯರ ಸಾವಿಗೆ ಗೌರವ ತಂದುಕೊಡುತ್ತೇವೆ ಎಂದು ಗುಡುಗಿದ್ದಾರೆ.

20 ನೇ ದಿನಕ್ಕೆ ಯುದ್ಧ:ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷವು ಇಂದಿಗೆ 20 ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಅಡಗುತಾಣಗಳ ಮೇಲೆ ಇಸ್ರೇಲ್ ಸಾವಿರಾರು ಕ್ಷಿಪಣಿಗಳ ದಾಳಿಯನ್ನು ಮುಂದುವರೆಸಿದೆ. ಭೀಕರ ಯುದ್ಧದಲ್ಲಿ 7,000 ಕ್ಕಿಂತ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಇಸ್ರೇಲ್‌ನ 1,405 ಮಂದಿ ಮತ್ತು ಗಾಜಾದಲ್ಲಿ 5,791 ಜನರು ಸಾವಿಗೀಡಾಗಿದ್ದಾರೆ. ಉಗ್ರರ ಬಳಿ 200 ಕ್ಕೂ ಹೆಚ್ಚು ಇಸ್ರೇಲಿಗರು ಒತ್ತೆಯಾಳಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಗಾಜಾಪಟ್ಟಿಯಲ್ಲಿ ವೈಮಾನಿಕ ದಾಳಿ ಮುಂದುವರೆಸಿದ ಇಸ್ರೇಲ್​: ಪರಿಹಾರ ಕಾರ್ಯಕ್ಕೆ ಅಡ್ಡಿ

ABOUT THE AUTHOR

...view details