ಕರ್ನಾಟಕ

karnataka

ತೈವಾನ್​ ಮೇಲೆ ದಾಳಿಗೆ ಚೀನಾ ಸಜ್ಜು?.. ವಾಯು, ನೌಕಾ ದಳದಿಂದ ಜಂಟಿ ಯುದ್ಧಾಭ್ಯಾಸ

By

Published : Aug 19, 2023, 3:38 PM IST

ಚೀನಾ- ತೈವಾನ್​ ನಡುವಿನ ಬಿಕ್ಕಟ್ಟು ತಾರಕಕ್ಕೇರಿದೆ. ಗಡಿಯಲ್ಲಿ ನಿಲ್ಲಿಸಲಾಗಿರುವ ಹಡಗು, ಯುದ್ಧ ವಿಮಾನಗಳನ್ನು ಚೀನಾ ಸನ್ನದ್ಧಗೊಳಿಸುತ್ತಿದೆ. ಸೇನಾಭ್ಯಾಸ ನಡೆಸುತ್ತಿದ್ದು ಯುದ್ಧಕ್ಕೆ ಅಣಿಯಾಗುತ್ತಿದೆ ಎಂಬ ಅನುಮಾನ ಮೂಡಿಸಿದೆ.

ತೈವಾನ್​ ಮೇಲೆ ಚೀನಾ ದಾಳಿಗೆ ಸಜ್ಜು
ತೈವಾನ್​ ಮೇಲೆ ಚೀನಾ ದಾಳಿಗೆ ಸಜ್ಜು

ಬೀಜಿಂಗ್(ಚೀನಾ) :ತೈವಾನ್​ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಡ್ರ್ಯಾಗನ್​ ರಾಷ್ಟ್ರ ಚೀನಾ, ಅಮೆರಿಕಕ್ಕೆ ಮೊನ್ನೆಯಷ್ಟೇ ಖಡಕ್​ ಸಂದೇಶ ರವಾನಿಸಿದ ಬೆನ್ನಲ್ಲೇ ಇಂದು (ಶನಿವಾರ) ಯುದ್ಧಾಭ್ಯಾಸ ಶುರು ಮಾಡಿದೆ. ವಾಯು ಮತ್ತು ನೌಕಾ ದಳಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿದ್ದು, ದ್ವೀಪರಾಷ್ಟ್ರದ ಮೇಲೆ ಆಕ್ರಮಣದ ಸನ್ನದ್ಧತೆ ಎಂದು ಬಿಂಬಿಸಲಾಗಿದೆ. ಸಾರ್ವಭೌಮ ಬಯಸುತ್ತಿರುವ ತೈವಾನ್​ಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ.

ಇತ್ತೀಚೆಗೆ ತೈವಾನ್​ ಉಪಾಧ್ಯಕ್ಷ ವಿಲಿಯಂ ಲೈ ಅವರು ಅಮೆರಿಕ ಪ್ರವಾಸದಲ್ಲಿ ದೇಶದ ಮೇಲಿನ ಆಕ್ರಮಣವನ್ನು ಖಂಡಿಸಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಚೀನಾ, ತೈವಾನ್​ ವಿಚಾರದಲ್ಲಿ ಯಾವುದೇ ರಾಷ್ಟ್ರಗಳು ಮೂಗು ತೂರಿಸಿದರೆ, ಪರಿಣಾಮ ಭೀಕರವಾಗಿರುತ್ತದೆ. ಬೆಂಕಿಯೊಂದಿಗೆ ಸರಸ ಬೇಡ ಎಂದು ನೇರವಾಗಿ ಅಮೆರಿಕಕ್ಕೆ ಸಂದೇಶ ರವಾನಿಸಿತ್ತು. ಇದರ ಬೆನ್ನಲ್ಲೇ ಈಗ ಯುದ್ಧಾಭ್ಯಾಸಕ್ಕೆ ಅಣಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಕಮಾಂಡ್‌ವೊಂದರ ವಕ್ತಾರರು, ಚೀನಾದ ಪಡೆಗಳು ಗಾಳಿ, ವಾಯುವಿನಲ್ಲಿ ಹಾರಾಟ ನಡೆಸಿ ಯಾವುದೇ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹಡಗುಗಳು, ವಿಮಾನಗಳು ಅಭ್ಯಾಸದಲ್ಲಿ ತೊಡಗಿವೆ. ನೈಜ ಯುದ್ಧ ಪರಿಸ್ಥಿತಿಗಳಲ್ಲಿ ಹೋರಾಡುವ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ಚೀನಾದ ಮಾಧ್ಯಮಗಳ ಪ್ರಕಾರ, ತೈವಾನ್​ ವಿಚಾರದಲ್ಲಿ ವಿದೇಶಿ ಶಕ್ತಿಗಳು ಪ್ರಚೋದನೆ ನೀಡುತ್ತಿವೆ. ಇದು ರಾಷ್ಟ್ರಗಳ ನಡುವಿನ ಸಮಸ್ಯೆ. ಇದರಲ್ಲಿ ಮಧ್ಯಪ್ರವೇಶ ಸಲ್ಲದು ಎಂದು ಸರ್ಕಾರ ಹೇಳಿದೆ.

ತೈವಾನ್​ ಖಂಡನೆ:ಚೀನಾದ ಮಿಲಿಟರಿ ಅಭ್ಯಾಸವನ್ನು ತೈವಾನ್​ ಖಂಡಿಸಿದೆ. ಇದು ಪ್ರಚೋದನಕಾರಿ ನಡೆ ಎಂದು ಟೀಕಿಸಿದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಪಡೆಗಳನ್ನು ಸಜ್ಜುಗೊಳಿಸುವುದಾಗಿ ತಿರುಗೇಟು ನೀಡಿದೆ.

ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಚೀನಾ ತನ್ನ ವಿಮಾನ ಮತ್ತು ಹಡಗುಗಳನ್ನು ನಮ್ಮ ಗಡಿ ಪ್ರದೇಶಗಳಿಗೆ ಕಳುಹಿಸಿ ಪ್ರಾದೇಶಿಕ ಭದ್ರತೆಗೆ ಧಕ್ಕೆ ತಂದಿದೆ. ಇದೀಗ ಮಿಲಿಟರಿ ಅಭ್ಯಾಸ ನಡೆಸುತ್ತಿರುವುದು ತೈವಾನ್ ಜಲಸಂಧಿಯ ಶಾಂತಿ ಮತ್ತು ಸ್ಥಿರತೆಗೆ ಕುಂದುಂಟು ತರಲಿದೆ. ಇದು ಚೀನಾದ ಮನಸ್ಥಿತಿ ಮತ್ತು ವಿಸ್ತರಣಾ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದೆ.

ಜಲಸಂಧಿಯಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವ ಕಾರಣ ದೇಶದ ಜನರು ದೇಶದ ಉಳಿವಿಗಾಗಿ ಪಣ ತೊಡಬೇಕು. ಸರ್ಕಾರದ ನಿರ್ಧಾರಗಳಿಗೆ ಬೆಂಬಲ ನೀಡಬೇಕು. ಏಕತೆಯನ್ನು ಮೆರೆಯಬೇಕಿದೆ ಎಂದು ಕರೆ ನೀಡಿದೆ. ಸೇನೆ ಮತ್ತು ನಾಗರಿಕರು ಕಾರ್ಯಾಚರಣೆಗಳಿಗೆ ಬಲ ನೀಡಿ ಜಂಟಿಯಾಗಿ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಒಟ್ಟಾಗಿ ಹೋರಾಡಬೇಕಿದೆ ಎಂದಿದೆ.

ಇದನ್ನೂ ಓದಿ:'ತೈವಾನ್ ಕುರಿತು ಪ್ರಶ್ನಿಸಿದರೆ, ಬೆಂಕಿಯೊಂದಿಗೆ ಆಟವಾಡಿದಂತೆ': ಚೀನಾ ರಕ್ಷಣಾ ಸಚಿವರಿಂದ ಅಮೆರಿಕಕ್ಕೆ ಎಚ್ಚರಿಕೆ

ABOUT THE AUTHOR

...view details