ಕರ್ನಾಟಕ

karnataka

ಮಣಿಪುರದಲ್ಲಿ ಸಹಜ ಸ್ಥಿತಿ ಸ್ಥಾಪಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಂದ ಯತ್ನ: ಸಚಿವ ಎಸ್​.ಜೈಶಂಕರ್

By ETV Bharat Karnataka Team

Published : Sep 27, 2023, 1:23 PM IST

ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಸಹಜ ಸ್ಥಿತಿ ಮರಳಿ ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್ ಹೇಳಿದ್ದಾರೆ.

Efforts is on to find a way by which a sense of normalcy returns
Efforts is on to find a way by which a sense of normalcy returns

ನ್ಯೂಯಾರ್ಕ್: ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಹಜ ಸ್ಥಿತಿಯನ್ನು ಮರಳಿ ಸ್ಥಾಪಿಸಲು ಮಾರ್ಗಗಳನ್ನು ಕಂಡುಹಿಡಿಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. "ಮಣಿಪುರಕ್ಕೆ ವಲಸೆ ಬಂದವರಿಂದ ಎದುರಾದ ಅಭದ್ರತೆಯ ಭಾವನೆಯು ಮಣಿಪುರದ ಸಮಸ್ಯೆಗೆ ಒಂದು ಕಾರಣವಾಗಿದೆ ಎಂಬುದು ನನ್ನ ಭಾವನೆ" ಎಂದು ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ನಂತರ ಮಂಗಳವಾರ ನ್ಯೂಯಾರ್ಕ್​​ನ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್​​ನಲ್ಲಿ ನಡೆದ ಸಂವಾದದಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

"ಆದರೆ ಅದಕ್ಕೂ ಮಿಗಿಲಾಗಿ ಮಣಿಪುರದಲ್ಲಿ ಸುದೀರ್ಘ ಕಾಲದಿಂದ ನಡೆದುಕೊಂಡು ಬಂದಿರುವ ಉದ್ವಿಗ್ನತೆಯ ಸಮಸ್ಯೆಗಳಿವೆ. ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸದಂತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಯಾಗುವಂತೆ ಮಾಡಲು ಉದ್ವಿಗ್ನತೆಯ ಸಮಯದಲ್ಲಿ ದೋಚಲಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬೇಕಿದೆ. ಈ ಮೂಲಕ ರಾಜ್ಯದಲ್ಲಿ ಸಹಜ ಸ್ಥಿತಿಯನ್ನು ಮರಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನಿಸಬೇಕಿದೆ" ಎಂದು ಸಚಿವರು ಹೇಳಿದರು.

ಮಣಿಪುರದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯದ ವರದಿಗಳಿಂದ ನಾವು ಆತಂಕಿತರಾಗಿದ್ದೇವೆ ಹಾಗೂ ಈ ಘಟನೆಗಳ ಬಗ್ಗೆ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಂತೆ ವಿಶ್ವಸಂಸ್ಥೆಯ ತಜ್ಞರ ಗುಂಪು ಈ ತಿಂಗಳ ಆರಂಭದಲ್ಲಿ ಭಾರತ ಸರ್ಕಾರಕ್ಕೆ ಒತ್ತಾಯಿಸಿತ್ತು. ಲೈಂಗಿಕ ದೌರ್ಜನ್ಯ, ಕಾನೂನುಬಾಹಿರ ಹತ್ಯೆಗಳು, ಮನೆ ನಾಶ, ಬಲವಂತದ ಸ್ಥಳಾಂತರ, ಚಿತ್ರಹಿಂಸೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವುದು ಸೇರಿದಂತೆ ಮಣಿಪುರದಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗದ ವರದಿಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ ವಿಶ್ವಸಂಸ್ಥೆಯ ತಜ್ಞರ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಭಾರತ ಸರ್ಕಾರ, ಅವರ ಟೀಕೆಗಳು ಅನಗತ್ಯ, ಊಹಾತ್ಮಕವಾಗಿದ್ದು, ದಾರಿತಪ್ಪಿಸುವಂತಿವೆ ಎಂದು ಕರೆದಿತ್ತು. ಅಲ್ಲದೆ ಮಣಿಪುರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಪ್ರತಿಪಾದಿಸಿತ್ತು. ತಜ್ಞರ ಹೇಳಿಕೆಗಳನ್ನು "ಊಹೆ" ಎಂದು ತಳ್ಳಿಹಾಕಿದ ಬಗ್ಗೆ ಈ ಸಂದರ್ಭದಲ್ಲಿ ಜೈಶಂಕರ್ ಅವರಿಗೆ ಪ್ರಶ್ನಿಸಲಾಯಿತು. ಇದಕ್ಕುತ್ತರಿಸಿದ ಅವರು, "ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ. ನಮ್ಮ ವಕ್ತಾರರು ಈ ಹೇಳಿಕೆ ನೀಡಿದ್ದರು. ಆದರೆ ಆ ಹೇಳಿಕೆ ಸರಿಯೇ ಎಂದು ಕೇಳಿದರೆ.. ಹೌದು.. ಸರಿಯಿತ್ತು ಎಂಬುದು ನನ್ನ ಉತ್ತರ" ಎಂದು ಅವರು ಹೇಳಿದರು.

ಸ್ವೀಡನ್​ನ ವಿ-ಡೆಮ್ ಇನ್​ಸ್ಟಿಟ್ಯೂಟ್​ ಮತ್ತು ಯುಎಸ್ ಸರ್ಕಾರದ ಅನುದಾನಿತ ಎನ್​ಜಿಓ ಫ್ರೀಡಂ ಹೌಸ್ ಇವು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಭಾರತವನ್ನು ಟೀಕಿಸಿದ ವರದಿಗಳ ಬಗ್ಗೆಯೂ ಸಚಿವರನ್ನು ಕೇಳಲಾಯಿತು. ಇದಕ್ಕುತ್ತರಿಸಿದ ಜೈಶಂಕರ್, ಎರಡೂ ಸಂಘಟನೆಗಳ ಬೂಟಾಟಿಕೆಯನ್ನು ಖಂಡಿಸುವುದಾಗಿ ಹೇಳಿ, "ವಿಶ್ವದ ಸ್ವಯಂ ಘೋಷಿತ ರಕ್ಷಕರು ಎಂದು ಕರೆದುಕೊಳ್ಳುವ ಅವರ ಮಾತುಗಳಿಗೆ ಭಾರತದಲ್ಲಿ ಯಾರೂ ಮಹತ್ವ ನೀಡುತ್ತಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಅವರಿಗೆ ತುಂಬಾ ಕಷ್ಟವಾಗುತ್ತಿದೆ" ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ : ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ? ಪತ್ತೆ ಕಾರ್ಯಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆವಿಷ್ಕರಿಸಿದ ವಿಜ್ಞಾನಿಗಳು

ABOUT THE AUTHOR

...view details