ಕರ್ನಾಟಕ

karnataka

By

Published : May 5, 2023, 1:13 PM IST

ETV Bharat / international

ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ: ಖಲಿಸ್ತಾನಿಗಳಿಂದ ಕೃತ್ಯದ ಶಂಕೆ

ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರೆದಿದೆ. ಈಗ ಮತ್ತೊಮ್ಮೆ ಖಲಿಸ್ತಾನ್ ಪರವಾಗಿರುವ ಮತಾಂಧರು ಸಿಡ್ನಿಯ ದೇವಾಲಯವೊಂದನ್ನು ವಿರೂಪಗೊಳಿಸಿದ್ದಾರೆ.

Hindu temple vandalized allegedly by pro Khalistani supporters in Australias Sydney
Hindu temple vandalized allegedly by pro Khalistani supporters in Australias Sydney

ಹೈದರಾಬಾದ್: ಆಸ್ಟ್ರೇಲಿಯದಲ್ಲಿ ಖಲಿಸ್ತಾನ್ ಪರ ಗುಂಪಿಗೆ ಸೇರಿದ ಮತಾಂಧ ವ್ಯಕ್ತಿಗಳು ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ದೇವಾಲಯವನ್ನು ಸಿಖ್ ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಸಿಡ್ನಿಯ ರೋಸ್‌ಹಿಲ್ ಉಪನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿನ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ದಾಳಿ ನಡೆದಿದೆ.

ದೇವಸ್ಥಾನದ ಮುಂಭಾಗದ ಗೋಡೆಯನ್ನು ಧ್ವಂಸಗೊಳಿಸಿದ್ದು, 'ಮೋದಿ (ಪಿಎಂ) ಭಯೋತ್ಪಾದಕ ಎಂದು ಘೋಷಿಸಿ' ಎಂಬ ಬರಹವನ್ನು ಗೀಚಲಾಗಿದ್ದು, ಗೇಟ್‌ನಲ್ಲಿ ಖಲಿಸ್ತಾನಿ ಧ್ವಜವನ್ನು ನೇತುಹಾಕಲಾಗಿತ್ತು ಎಂದು ಶುಕ್ರವಾರ ಮುಂಜಾನೆ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ಹಂಚಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿಗಳು ಹೇಳಿವೆ. ದೇವಸ್ಥಾನದ ಆಡಳಿತ ಮಂಡಳಿಯು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದು, ಘಟನೆಯ ಕುರಿತು ತನಿಖೆ ಆರಂಭವಾಗಿದೆ.

ಈ ವರ್ಷದ ಆರಂಭದಿಂದಲೂ ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಖಲಿಸ್ತಾನ್ ಪರ ಬೆಂಬಲಿಗರು ಇಂಥ ದಾಳಿಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷದ ಜ 12 ರಂದು ಖಲಿಸ್ತಾನ್ ಪರ ಬೆಂಬಲಿಗರು ಭಾರತ ವಿರೋಧಿ ಗೀಚುಬರಹದ ಮೂಲಕ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಧ್ವಂಸಗೊಳಿಸಿದ್ದನ್ನು ಸ್ಮರಿಸಬಹುದು.

ಕಳೆದ ಫೆ 18 ರಂದು ಮಹಾಶಿವರಾತ್ರಿಯನ್ನು ಶಾಂತಿಯುತವಾಗಿ ಆಚರಿಸಲು ಬಯಸಿದರೆ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಬೇಕೆಂದು ಆಡಳಿತ ಮಂಡಳಿಯ ಕೆಲವರಿಗೆ ಕರೆ ಮಾಡಿ ಬೆದರಿಸಲಾಗಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ. ದೇಶದಲ್ಲಿನ ದೇವಾಲಯಗಳ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿರುವ ಬಗ್ಗೆ ಆಸ್ಟ್ರೇಲಿಯಾದಲ್ಲಿ ವಾಸಿಸುವ ಹಿಂದೂಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಯುಕೆಯಲ್ಲೂ ಖಲಿಸ್ತಾನಿಗಳ ಗಲಭೆ: ಖಲಿಸ್ತಾನ್ ಬೆಂಬಲಿಗರ ಗುಂಪು ಯುಕೆಯಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಮಾ.20 ರಂದು ಪ್ರತಿಭಟನೆ ನಡೆಸಿದ್ದರು. ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಈತನ ಚಿತ್ರವಿದ್ದ ಧ್ವಜಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಅವರು ಘೋಷಣೆಗಳನ್ನು ಕೂಗಿದ್ದರು. ಫ್ರೀ ಅಮೃತಪಾಲ್ ಸಿಂಗ್, ವೀ ವಾಂಟ್ ಜಸ್ಟಿಸ್, ವಿ ಸ್ಟ್ಯಾಂಡ್ ವಿತ್ ಅಮೃತಪಾಲ್ ಸಿಂಗ್ ಎಂದೆಲ್ಲ ಬರೆದ ಪೋಸ್ಟರ್​ಗಳನ್ನು ಹಿಡಿದಿದ್ದ ಅವರು ಅಮೃತ್ ಪಾಲ್ ಸಿಂಗ್ ಪರವಾಗಿ ಪ್ರತಿಭಟನೆ ನಡೆಸಿದ್ದರು.

ಹೈಕಮಿಷನ್ ಕಟ್ಟಡದ ಮೇಲಿರುವ ಭಾರತದ ಧ್ವಜವನ್ನು ತೆಗೆಯಲು ಖಲಿಸ್ತಾನ್ ಬೆಂಬಲಿಗನೊಬ್ಬ ಗೋಡೆಗಳ ಮೂಲಕ ಕಟ್ಟಡದ ಮೇಲೆ ಏರುತ್ತಿರುವ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ್ದ ಪೊಲೀಸರು ಖಲಿಸ್ತಾನಿಗಳನ್ನು ಚದುರಿಸಿದ್ದರು. ಭಾರತ ಸರ್ಕಾರಕ್ಕೆ ಶೇಮ್ ಶೇಮ್ ಎಂದು ಅವರು ಘೋಷಣೆಗಳನ್ನು ಕೂಗಿದ್ದರು. ಭಾರತೀಯ ಹೈಕಮಿಷನ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯದ ನಂತರ, ಭಾರತದಲ್ಲಿನ ಯುಕೆ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಘಟನೆಗಳನ್ನು ಖಂಡಿಸಿ ಟ್ವೀಟ್ ಮಾಡಿದ್ದರು. "ಭಾರತೀಯ ಹೈಕಮಿಷನ್‌ನ ಸಿಬ್ಬಂದಿಯ ವಿರುದ್ಧ ಇಂದು ನಡೆದ ಅವಮಾನಕರ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ." ಎಂದು ಅವರು ಹೇಳಿದ್ದರು.

ಇದನ್ನೂ ಓದಿ : ಭಯೋತ್ಪಾದನೆಯನ್ನು ನಿಲ್ಲಿಸಲೇಬೇಕು: ಪಾಕ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ವಾಗ್ದಾಳಿ

ABOUT THE AUTHOR

...view details