ಕರ್ನಾಟಕ

karnataka

By ETV Bharat Karnataka Team

Published : Dec 12, 2023, 2:26 PM IST

ETV Bharat / international

ಡೇರಾ ಇಸ್ಮಾಯಿಲ್ ಖಾನ್ ಪೊಲೀಸ್ ಠಾಣೆಯ ಮೇಲೆ ಉಗ್ರರ ದಾಳಿ; ಮೂವರು ಪೊಲೀಸ್​ ಸಾವು, 16 ಮಂದಿಗೆ ಗಾಯ

Attack on Dera Ismail Khan Police Station: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ದಾಳಿಯಲ್ಲಿ ಮೂವರು ಪೊಲೀಸರು ಮೃತಪಟ್ಟಿದ್ದು, 16 ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.

pakistan
ಪಾಕಿಸ್ತಾನ

ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ):ಸರಣಿ ಆತ್ಮಹತ್ಯಾ ದಾಳಿಯಿಂದ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ತತ್ತರಿಸಿದೆ. ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದ್ರಾಬಾನ್ ಪ್ರದೇಶದ ಸ್ಥಳೀಯ ಪೊಲೀಸ್ ಠಾಣೆಯ ಮೇಲೆ ಭಯೋತ್ಪಾದಕರ ಗುಂಪೊಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಈ ಆತ್ಮಾಹುತಿ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ.

ದಾಳಿಕೋರರು ಭದ್ರತಾ ಆವರಣವನ್ನು ಪ್ರವೇಶಿಸಿದ ನಂತರ ಪ್ರಬಲವಾದ ಸ್ಫೋಟ ಸಂಭವಿಸಿದೆ. ಈ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಳಿಕ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸುತ್ತಾ ಪೊಲೀಸ್​ ಠಾಣೆಯ ಆವರಣಕ್ಕೆ ನುಗ್ಗಲು ಯತ್ನಿಸಿದ್ದರು. ತಕ್ಷಣವೇ ಸಕ್ರಿಯಗೊಂಡ ಭದ್ರತಾ ಪಡೆಗಳು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದರು. ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಪಾಕಿಸ್ತಾನ ಭದ್ರತಾ ಪಡೆ ಹೊಡೆದುರುಳಿಸಿದ್ದು, 16ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇನ್ನು ಉಗ್ರರು ನಡೆಸಿದ ದಾಳಿಯಿಂದಾಗಿ ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದಿದೆ. ಗಾಯಾಳುಗಳನ್ನು ಡಿಐ ಖಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾರಬನ್ ತೆಹಸಿಲ್ ಅನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿದೆ. ಘಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕ ದಾಳಿಯ ನಂತರ ತೆಹಸಿಲ್ ಡ್ರಾಬನ್‌ನಲ್ಲಿನ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಡೇರಾ ಇಸ್ಮಾಯಿಲ್ ಖಾನ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಅಕ್ಟೋಬರ್‌ನಲ್ಲಿ, ಕೆಪಿಯ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಮೇಲೆ ಭಯೋತ್ಪಾದಕರು ಹ್ಯಾಂಡ್ ಗ್ರೆನೇಡ್ ಮತ್ತು ರಾಕೆಟ್‌ಗಳನ್ನು ಬಳಸಿದ್ದರು. ಡೇರಾ ಇಸ್ಮಾಯಿಲ್ ಖಾನ್ ಅವರ ಹತಲಾ ಪೊಲೀಸ್ ಠಾಣೆ ಮೇಲೆ ಎರಡು ಕಡೆಯಿಂದ ದಾಳಿ ನಡೆಸಲಾಗಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಆದರೆ, ಪೊಲೀಸರು ದಾಳಿಯನ್ನು ಹಿಮ್ಮೆಟ್ಟಿಸಿದರು.

ಕಳೆದ ನವೆಂಬರ್‌ನಲ್ಲಿಯೂ ಪಾಕಿಸ್ತಾನದ ಮಿಯಾನ್‌ವಾಲಿ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಗೆ ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಒಂಬತ್ತು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ನುಗ್ಗಿದ್ದರು. ಎರಡೂ ಕಡೆಯಿಂದ ಭಾರಿ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ವಾಯುನೆಲೆಯೊಳಗೆ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಸೇನೆ ಕಾರ್ಯಾಚರಣೆ ನಡೆಸಿ ಎಲ್ಲಾ 9 ಉಗ್ರರನ್ನು ಹೊಡೆದುರುಳಿಸಿತ್ತು.

ಇದನ್ನೂ ಓದಿ :ತೈಲ ಸಂಸ್ಕರಣ ಸ್ಥಳದಲ್ಲಿ ಭಾರಿ ಸ್ಫೋಟ, 18 ಶೇಖರಣಾ ಘಟಕಗಳು ಬೆಂಕಿಗಾಹುತಿ

ABOUT THE AUTHOR

...view details