ಕರ್ನಾಟಕ

karnataka

By

Published : Feb 26, 2022, 7:04 PM IST

Updated : Feb 26, 2022, 7:21 PM IST

ETV Bharat / international

'ವಿಶ್ವಸಂಸ್ಥೆಯಲ್ಲಿ ನಮಗೆ ಬೆಂಬಲ ನೀಡಿ'.. ಪ್ರಧಾನಿ ಮೋದಿ ಬಳಿ ಮನವಿ ಮಾಡಿದ ಉಕ್ರೇನ್​ ಅಧ್ಯಕ್ಷ

ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಉಕ್ರೇನ್​ ಇದೀಗ ಭಾರತದ ಬಳಿ ಮನವಿ ಮಾಡಿದ್ದು, ವಿಶ್ವಸಂಸ್ಥೆಯಲ್ಲಿ ನಮಗೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.

Ukraine President speaks to PM Modi
Ukraine President speaks to PM Modi

ಕೀವ್​(ಉಕ್ರೇನ್​​): ಉಕ್ರೇನ್‌ ವಿರುದ್ಧ ಸಮರ ಸಾರಿರುವ ರಷ್ಯಾ ಈಗಾಗಲೇ ಬಹುತೇಕ ಎಲ್ಲ ನಗರಗಳ ಮೇಲೆ ದಾಳಿ ನಡೆಸಿದ್ದು, ಪರಿಣಾಮ ನೂರಾರು ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಕಂಗೆಟ್ಟಿರುವ ಉಕ್ರೇನ್​ ಅಧ್ಯಕ್ಷರು ಇದೀಗ ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ವಿಶ್ವಸಂಸ್ಥೆಯಲ್ಲಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ವಿಚಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನಕ್ಕೆ ಭಾರತ ಶನಿವಾರ ಗೈರು ಹಾಜರಾಗಿದೆ. ಇದರ ಬೆನ್ನಲ್ಲೇ ಉಕ್ರೇನ್​​ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಇದೀಗ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದಾರೆ. ಈ ವೇಳೆ ರಷ್ಯಾ ಮಿಲಿಟರಿ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ತಮಗೆ ರಾಜಕೀಯವಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಉಕ್ರೇನ್​ ಅಧ್ಯಕ್ಷರು ಟ್ವೀಟ್ ಕೂಡಾ ಮಾಡಿದ್ದಾರೆ.

ಇದನ್ನೂ ಓದಿರಿ:ರಷ್ಯಾ ದಾಳಿ ಮಧ್ಯೆ ಆಶ್ರಯತಾಣದಲ್ಲಿ ಮಗುವಿಗೆ ಜನ್ಮ ನೀಡಿದ ಉಕ್ರೇನ್​ ಮಹಿಳೆ!

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ರಷ್ಯಾದ ಆಕ್ರಮಣಾಕಾರಿ ನೀತಿಯನ್ನು ಖಂಡಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದಲ್ಲಿ ಮತ ಚಲಾಯಿಸುವುದರಿಂದ ಭಾರತ ದೂರ ಉಳಿದಿದ್ದು, ಭಾರತದ ನಿರ್ಣಯಕ್ಕೆ ರಷ್ಯಾ ಮೆಚ್ಚುಗೆ ವ್ಯಕ್ತಪಡಸಿದೆ. ಈ ನಡುವೆ ರಷ್ಯಾದ 1 ಲಕ್ಷ ಸೈನಿಕರು ಉಕ್ರೇನ್​​ನ ವಿವಿಧ ನಗರಗಳಿಗೆ ನುಗ್ಗಿದ್ದಾರೆ ಎಂದು ಅಧ್ಯಕ್ಷ ಜೆಲೆನ್ಸ್ಕಿ ಹೇಳಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?:ಉಕ್ರೇನ್​​ ಅಧ್ಯಕ್ಷರು ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಭಾಷಣೆ ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಉಕ್ರೇನ್​​ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಅಲ್ಲಿನ ಅಧ್ಯಕ್ಷರು ಪ್ರಧಾನಿಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಪ್ರಧಾನಿ ದುಃಖ ವ್ಯಕ್ತಪಡಿಸಿದ್ದಾರೆಂದು ತಿಳಿಸಿದೆ.

ಉಕ್ರೇನ್​​ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರ ಸುರಕ್ಷತೆ ವಿಚಾರದಲ್ಲಿ ಭಾರತ ನಿಗಾ ವಹಿಸಿದ್ದು, ಉಕ್ರೇನ್​​ನಿಂದ ಭಾರತೀಯ ನಾಗರಿಕರನ್ನ ಸುರಕ್ಷಿತವಾಗಿ ಕರೆತರಲು ಉಕ್ರೇನ್​ ಅಧಿಕಾರಿಗಳ ಸಹಾಯ ಕೋರಿದ್ದಾರೆಂದು ಪಿಎಂಒ ತಿಳಿಸಿದೆ. ಜೊತೆಗೆ ಹಿಂಸಾಚಾರವನ್ನ ತಕ್ಷಣ ನಿಲ್ಲಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನಮೋ ಮನವಿ ಮಾಡಿದ್ದಾರೆಂದು ವರದಿಯಾಗಿದೆ.

Last Updated : Feb 26, 2022, 7:21 PM IST

ABOUT THE AUTHOR

...view details