ಮಾರ್ಷಲ್ ಪ್ಲಾನ್ ಅಥವಾ 'ಯುರೋಪಿಯನ್ ರಿಕವರಿ ಪ್ರೋಗ್ರಾಂ' ಎಂದು ಕರೆಯಲ್ಪಡುವ ಯೋಜನೆಯು ಯುಎಸ್ನ ಕಾರ್ಯಕ್ರಮವಾಗಿದ್ದು, ಎರಡನೇ ಮಹಾಯುದ್ಧದ ವಿನಾಶದ ಬಳಿಕ ಪಶ್ಚಿಮ ಯುರೋಪಿಗೆ ನೆರವು ನೀಡಿ ಯುರೋಪ್ ಪುನರ್ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
1948 ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ಯುರೋಪಿಯನ್ ಖಂಡದ ಪುನರ್ನಿರ್ಮಾಣ ಪ್ರಯತ್ನಗಳಿಗೆ ಹಣಕಾಸು ಸಹಾಯ ಮಾಡಲು 15 ಬಿಲಿಯನ್ಗಿಂತ ಹೆಚ್ಚಿನ ಹಣವನ್ನು ಒದಗಿಸಿತ್ತು.
ಆಗಿನ ಯುಎಸ್ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಸಿ. ಮಾರ್ಷಲ್ ಅವರ 'ಮೆದುಳಿನ ಕೂಸು' ಎಂಬುದಾಗಿ ಈ ಯೋಜನೆಯನ್ನು ಹೆಸರಿಸಲಾಯಿತು. ಯುದ್ಧದ ಸಮಯದಲ್ಲಿ ಹೆಚ್ಚು ಹಾನಿಗೊಳಗಾದ ನಗರಗಳು, ಕೈಗಾರಿಕೆಗಳು ಮತ್ತು ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ಹಾಗೂ ಯುರೋಪಿಯನ್ ನೆರೆಹೊರೆಯವರ ನಡುವಿನ ವ್ಯಾಪಾರ ಅಡೆ - ತಡೆಗಳನ್ನು ತೆಗೆದುಹಾಕಲು ಸುಮಾರು ನಾಲ್ಕು ವರ್ಷಗಳ ಯೋಜನೆಯಾಗಿ ಇದನ್ನು ರಚಿಸಲಾಯಿತು. ಹಾಗೆಯೇ ಆ ದೇಶಗಳು ಮತ್ತು ಅಮೆರಿಕ ನಡುವೆ ಉತ್ತೇಜಕ ವಾಣಿಜ್ಯವಾಗಿ ಕೂಡಾ ಮಾರ್ಪಾಡು ಮಾಡಲಾಯಿತು.
ಮಾರ್ಷಲ್ ಯೋಜನೆಯ ಅನುಷ್ಠಾನವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಅದರ ಯುರೋಪಿಯನ್ ಮಿತ್ರ ರಾಷ್ಟ್ರಗಳು ಹಾಗೂ ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರಕ್ಕೆ ಅಡಿಗಲ್ಲು ಎಂದು ಉಲ್ಲೇಖಿಸಲ್ಪಟ್ಟಿದೆ. ಇದು ಮಧ್ಯ ಮತ್ತು ಪೂರ್ವ ಯುರೋಪಿನ ಹೆಚ್ಚಿನ ಭಾಗವನ್ನು ಪರಿಣಾಮಕಾರಿಯಾಗಿ ಹಿಡಿತದಲ್ಲಿಟ್ಟುಕೊಂಡು, ತನ್ನ ಗಣರಾಜ್ಯಗಳನ್ನು ಕಮ್ಯುನಿಸ್ಟ್ ರಾಷ್ಟ್ರಗಳಾಗಿ ಸ್ಥಾಪಿಸಿತು.
1947ರ ಉತ್ತರಾರ್ಧದಲ್ಲಿ ನಡೆದ ಯುರೋಪಿಯನ್ ರಾಜ್ಯಗಳ ಸಭೆಯ ಬಳಿಕ ಮಾರ್ಷಲ್ ಯೋಜನೆಯಡಿ ಸಮನ್ವಯಗೊಂಡ ರಾಜ್ಯಗಳ ಪುನರ್ ರ್ನಿರ್ಮಾಣವನ್ನು ರೂಪಿಸಲಾಯಿತು.
ಗಮನಾರ್ಹ ಎಂಬಂತೆ, ಸೋವಿಯತ್ ಒಕ್ಕೂಟ ಮತ್ತು ಅದರ ಉಪ ರಾಜ್ಯಗಳಿಗೂ ಕೂಡಾ ಈ ಆಹ್ವಾನಗಳನ್ನು ವಿಸ್ತರಿಸಲಾಯಿತು. ಆದರೆ, ತಮ್ಮ ರಾಷ್ಟ್ರೀಯ ವ್ಯವಹಾರಗಳಲ್ಲಿ ಯು.ಎಸ್ ಮೂಗುತೂರಿಸುತ್ತಿದೆ ಎಂದು ಮನಗಂಡ ಸೋವಿಯತ್ ಅಂಜಿಕೆಯಿಂದಲೇ ಆಹ್ವಾನವನ್ನು ತಿರಸ್ಕರಿಸಿತ್ತು .
ಅಧ್ಯಕ್ಷ ಹ್ಯಾರಿ ಟ್ರೂಮನ್ ಏಪ್ರಿಲ್ 3, 1948 ರಂದು ಮಾರ್ಷಲ್ ಯೋಜನೆಗೆ ಸಹಿ ಹಾಕಿದರು. ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಪಶ್ಚಿಮ ಜರ್ಮನಿ ಹಾಗೂ ನಾರ್ವೆ ಸೇರಿದಂತೆ 16 ಯುರೋಪಿಯನ್ ರಾಷ್ಟ್ರಗಳಿಗೆ ಯೋಜನೆಯಡಿ ನೆರವು ವಿತರಿಸಲಾಯಿತು.
ವಿಶ್ವ ಯುದ್ಧದ ಅಂತ್ಯದ ಬಳಿಕ ಯುರೋಪ್ ಧ್ವಂಸವಾಗಿತ್ತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಬೆಲ್ಜಿಯಂನ ಕೆಲವು ಪ್ರಮುಖ ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರಗಳು ಸೇರಿದಂತೆ ಅನೇಕ ನಗರಗಳು ನಾಶವಾಗಿ ಹೋದವು. ಕೃಷಿ ಮತ್ತು ಇತರ ಆಹಾರ ಉತ್ಪಾದನೆಯು ಹೋರಾಟದ ಕಾರಣದಿಂದ ಸ್ಥಗಿತಗೊಂಡು ಕ್ರಮೇಣ ಖಂಡದ ಕೆಲವು ಪ್ರದೇಶಗಳು ಬರಗಾಲದ ಅಂಚಿಗೆ ಸರಿಯಿತು, ಎಂದು ಮಾರ್ಷಲ್ಗೆ ನೀಡಿದ ವರದಿಗಳು ಸೂಚಿಸಿವೆ.
ಅಷ್ಟೇ ಅಲ್ಲದೆ ಈ ಪ್ರದೇಶದ ಸಾರಿಗೆಯ ಮೂಲ ಸೌಕರ್ಯಗಳಾದ ರೈಲ್ವೆಗಳು, ರಸ್ತೆಗಳು, ಸೇತುವೆಗಳು ಹಾಗೂ ಬಂದರುಗಳು ವೈಮಾನಿಕ ದಾಳಿಯ ಸಮಯದಲ್ಲಿ ಅಪಾರ ಹಾನಿಗೊಳಗಾದವು. ಅನೇಕ ದೇಶಗಳ ಹಡಗು, ನೌಕೆಗಳು ಮುಳುಗಿ ಸಮುದ್ರರಾಜನ ಒಡಲು ಸೇರಿಕೊಂಡವು.