ಕರ್ನಾಟಕ

karnataka

By

Published : Nov 9, 2021, 6:11 PM IST

ETV Bharat / international

ಇಸ್ಲಾಂ ತೀವ್ರವಾದಿಗಳಿಂದ ಧ್ವಂಸಗೊಂಡ ಹಿಂದೂ ದೇಗುಲ ಉದ್ಘಾಟಿಸಿದ ಪಾಕ್ ಮುಖ್ಯ ನ್ಯಾಯಮೂರ್ತಿ

ಪಾಕಿಸ್ತಾನ ಸಂವಿಧಾನದ ಪ್ರಕಾರ, ಬೇರೆಲ್ಲ ಧರ್ಮದ ಜನರಂತೆಯೇ ಹಿಂದೂಗಳಿಗೂ ಕೂಡಾ ಸಮಾನ ಹಕ್ಕುಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ತಿಳಿಸಿದ್ದಾರೆ.

pakistans-chief-justice
ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್

ಪೇಶಾವರ: ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪುನರ್​ ನಿರ್ಮಾಣ ಮಾಡಲಾದ ಶ್ರೀ ಪರಮಹಂಸ ಜಿ ಮಹಾರಾಜ್ ದೇವಾಲಯವನ್ನು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಉದ್ಘಾಟಿಸಿದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಇದು ಭವಿಷ್ಯದಲ್ಲಿಯೂ ಮುಂದುವರೆಯುತ್ತದೆ ಎಂದು ಹೇಳಿರುವುದಾಗಿ 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.

ದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಸುಪ್ರೀಂಕೋರ್ಟ್ ಖಚಿತಪಡಿಸುತ್ತದೆ. ಇನ್ನೊಂದು ಸಮುದಾಯಕ್ಕೆ ಸೇರಿದ ಧಾರ್ಮಿಕ ಪೂಜಾ ಸ್ಥಳವನ್ನು ನಾಶಮಾಡಲು ಅಥವಾ ಹಾನಿ ಮಾಡಲು ಯಾರಿಗೂ ಅಧಿಕಾರವಿಲ್ಲ. ಪಾಕಿಸ್ತಾನದ ಸಂವಿಧಾನದ ಪ್ರಕಾರ, ಬೇರೆಲ್ಲ ಧರ್ಮದ ಜನರಂತೆಯೇ ಹಿಂದೂಗಳಿಗೂ ಕೂಡಾ ಸಮಾನ ಹಕ್ಕುಗಳಿವೆ ಎಂದರು.

ದೇಗುಲ ಧ್ವಂಸದ ಕುರಿತು ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಂಡಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪಾಕಿಸ್ತಾನ ಹಿಂದೂ ಕೌನ್ಸಿಲ್ ಪೋಷಕ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಡಾ. ರಮೇಶ್ ಕುಮಾರ್ ವಂಕ್ವಾನಿ ಅವರು ತಿಳಿಸಿದ್ದಾರೆ.

ಏನಾಗಿತ್ತು?

ಕಳೆದ ವರ್ಷ ಈ ಹಿಂದೂ ದೇವಾಲಯದ ನವೀಕರಣವನ್ನು ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ (ಜೆಯುಐ-ಎಫ್) ಪಕ್ಷದ ಬೆಂಬಲಿಗರು ವಿರೋಧಿಸಿದ್ದರು. ಅಲ್ಲದೇ, ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 350ಕ್ಕೂ ಅಧಿಕ ಕಿಡಿಗೇಡಿಗಳ ವಿರುದ್ಧ ಕೇಸ್​ ದಾಖಲಿಸಲಾಗಿತ್ತು. ಅಲ್ಲದೇ, ಧ್ವಂಸಗೊಂಡಿರುವ ಮಂದಿರವನ್ನು ಪುನರ್‌ ನಿರ್ಮಾಣ ಮಾಡುವ ಬಗ್ಗೆ ಸ್ಥಳೀಯ ಆಡಳಿತ ಭರವಸೆ ನೀಡಿತ್ತು.

ಪಾಕಿಸ್ತಾನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್‌ ಅಹ್ಮದ್‌ ಅವರು ದೇಗುಲ ನಾಶವನ್ನು 'ದುರಂತ' ಘಟನೆ ಎಂದು ಬಣ್ಣಿಸಿದ್ದರು. ಅಲ್ಲದೇ, ದೇಗುಲವನ್ನು ಧ್ವಂಸಗೊಳಿಸಿದ ಅಪರಾಧಿಗಳಿಂದ 33 ಮಿಲಿಯನ್ (ಯುಎಸ್‌ಡಿ 1,94,161) ವಸೂಲಿ ಮಾಡಲು ಅಕ್ಟೋಬರ್ 2021 ರಲ್ಲಿ ಖೈಬರ್ ಪಖ್ತುಂಕ್ವಾ ಪ್ರಾಂತೀಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಈ ಪ್ರಕರಣವು ಪಾಕಿಸ್ತಾನದಲ್ಲಿ 1992ರ ನಂತರ ನಡೆದ ಅತಿದೊಡ್ಡ ದೇಗುಲದ ಮೇಲಿನ ದಾಳಿಯಾಗಿತ್ತು. ಧಾರ್ಮಿಕ ಮೂಲಭೂತವಾದಿಗಳು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ದೇಗುಲವನ್ನು ಧ್ವಂಸಗೊಳಿಸಿದ್ದರು. ಈ ದೇವಾಲಯವನ್ನು 1920ಕ್ಕಿಂತಲೂ ಮೊದಲು ನಿರ್ಮಿಸಲಾಗಿತ್ತು.

ಸ್ಥಳೀಯ ಹಿಂದೂ ಕುಟುಂಬಗಳು ದೇವಾಲಯವನ್ನು ನಿರ್ವಹಿಸುತ್ತಿವೆ. ಹೀಗಾಗಿ, ಇದು ಆಡಳಿತಾತ್ಮಕವಾಗಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸರ್ಕಾರದ ಅಡಿಯಲ್ಲಿ ಬರುತ್ತದೆ.

ಒಂದು ಅಂದಾಜಿನ ಪ್ರಕಾರ, ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಇತ್ತೀಚೆಗೆ ಹಲವು ದೇವಾಲಯಗಳ ಮೇಲೆ ದಾಳಿ ನಡೆಯುತ್ತಿವೆ.

ಇದನ್ನೂ ಓದಿ:ಧ್ವಂಸಗೊಂಡು ಮತ್ತೆ ತಲೆಎತ್ತಿ ನಿಂತ ದೇಗುಲದಲ್ಲಿ ಸಂಭ್ರಮದ ದೀಪಾವಳಿಗೆ ಪಾಕ್‌ ಹಿಂದೂ ಸಮುದಾಯ ನಿರ್ಧಾರ

ABOUT THE AUTHOR

...view details