ಇಸ್ಲಾಮಾಬಾದ್ (ಪಾಕಿಸ್ತಾನ):ಮರಣ ದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನದ ಸಂಸತ್ ಅನುಮೋದನೆ ನೀಡಿದೆ.
‘ಐಸಿಜೆ (ಮರುಪರಿಶೀಲನೆ ಹಾಗೂ ಮರುಪರಿಗಣನೆ) ಮಸೂದೆ 2020’ನ್ನು ಪಾಕ್ ಸಂಸತ್ ಗುರುವಾರ ಅಂಗೀಕರಿಸಿತು. ಇದರಿಂದಾಗಿ, ಭಾರತದ ಕಾನ್ಸುಲರ್ ಕಚೇರಿಯ ಸಂಪರ್ಕ, ನೆರವು ಪಡೆಯಲು ಜಾಧವ್ ಅವರಿಗೆ ಸಾಧ್ಯವಾಗಲಿದೆ.
ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಹಾಗೂ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಕುಲಭೂಷಣ್ನನ್ನು ಬಂಧಿಸಲಾಗಿದೆ. 51 ವರ್ಷದ ಕುಲಭೂಷಣ್ ಜಾಧವ್ಗೆ 2017 ರ ಏಪ್ರಿಲ್ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
ಬಳಿಕ ಈ ತೀರ್ಪು ಪ್ರಶ್ನಿಸಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿತ್ತು. ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮರಣದಂಡನೆ ಪ್ರಶ್ನಿಸಿ ಭಾರತ ಪಾಕಿಸ್ತಾನ ವಿರುದ್ಧ ಐಸಿಜೆಯನ್ನು ಸಂಪರ್ಕಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಐಸಿಜೆ, ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲು ಜಾಧವ್ ಅವರಿಗೆ ಸೂಕ್ತ ಅವಕಾಶವನ್ನು ಒದಗಿಸುವಂತೆ ಸೂಚಿಸಿತ್ತು. ಅಲ್ಲದೇ ಕಾನ್ಸುಲರ್ ಕಚೇರಿಯ ನೆರವು ಒದಗಿಸಬೇಕು. ಶಿಕ್ಷೆಯ ಮರುಪರಿಶೀಲನೆ ನಡೆಸಬೇಕು ಎಂದು 2019ರ ಜುಲೈನಲ್ಲಿ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಆದೇಶಿಸಿತ್ತು.
ಮಸೂದೆಗೆ ಅನುಮೋದನೆ ದೊರೆತಿರುವ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಕಾನೂನು ಸಚಿವ ಫಾರೂಕ್ ನಾಸಿಮ್, "ಒಂದು ವೇಳೆ ಈ ಮಸೂದೆಗೆ ಅನುಮೋದನೆ ನೀಡದೇ ಇದ್ದಿದ್ದರೆ, ಭಾರತ ಈ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೋಗುತ್ತಿತ್ತು. ಐಸಿಜೆ ಯಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕೇಳಬಹುದಿತ್ತು. ಐಸಿಜೆಯಲ್ಲಿ ಪಾಕಿಸ್ತಾನದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತಿತ್ತು" ಎಂದು ಹೇಳಿದರು.
ಅಷ್ಟೇ ಅಲ್ಲ, ಪಾಕಿಸ್ತಾನ ಚುನಾವಣೆ (ತಿದ್ದುಪಡಿ) ಮಸೂದೆ ಸೇರಿದಂತೆ ಇತರ 20 ಮಸೂದೆಗಳನ್ನು ಅಲ್ಲಿನ ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿದೆ.