ಕರ್ನಾಟಕ

karnataka

By

Published : Apr 2, 2021, 5:15 PM IST

ETV Bharat / international

ಮೆತ್ತಗಾದ್ರಾ ಪಾಕ್ ಪಿಎಂ ಇಮ್ರಾನ್​.. ಭಾರತದ ಜತೆ ಮತ್ತೆ ಸಖ್ಯೆ ಬೆಳೆಸಲು ಉನ್ನತಮಟ್ಟದ ಸಭೆ

370ನೇ ವಿಧಿ ರದ್ಧತಿ ಮತ್ತು ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದನ್ನು ವಿರೋಧಿಸಿ ಪಾಕಿಸ್ತಾನವು 2019ರ ಆಗಸ್ಟ್‌ನಲ್ಲಿ ಏಕಪಕ್ಷೀಯವಾಗಿ ಭಾರತದೊಂದಿಗೆ ಸಂಬಂಧ ಕಡಿದುಕೊಂಡಿತ್ತು..

Imran Khan
Imran Khan

ಇಸ್ಲಾಮಾಬಾದ್ :ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮತ್ತು ವಿದೇಶಾಂಗ ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಭಾರತದೊಂದಿಗೆ ಪಾಕಿಸ್ತಾನದ ಸ್ನೇಹ-ಸಂಬಂಧ ಮರು ಪರಿಶೀಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಬೆಳವಣಿಗೆಗಳ ನಂತರ ಖಾನ್ ಉಭಯ ದೇಶಗಳ ನಡುವಿನ ಸಂಬಂಧದ ಪ್ರಸ್ತುತ ಸ್ಥಿತಿಯ ಬಗ್ಗೆ ಸಭೆಯಲ್ಲಿ ಸಮಗ್ರ ವಿಮರ್ಶೆ ನಡೆಸಿ ತಮ್ಮ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಜಿಯೋ ನ್ಯೂಸ್ ಮೂಲಗಳ ಬಗ್ಗೆ ಉಲ್ಲೇಖಿಸದೆ ವರದಿ ಮಾಡಿದೆ.

ಆಮದಿಗೆ ನಕಾರ :ನೆಲ ಮತ್ತು ಸಮುದ್ರ ಮಾರ್ಗಗಳ ಮೂಲಕ ಭಾರತದಿಂದ ಸಕ್ಕರೆ, ಹತ್ತಿ ಮತ್ತು ಹತ್ತಿ ನೂಲುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿಯ (ಇಸಿಸಿ) ನಿರ್ಧಾರವನ್ನು ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ನಿರಾಕರಿಸಿದ ಒಂದು ದಿನದ ನಂತರ ಈ ಸಭೆ ನಡೆದಿದೆ. ಇಸಿಸಿ ನಿರ್ಧಾರವನ್ನು ಜಾರಿಗೆ ತಂದಿದ್ದರೆ, ಅದು ಎರಡು ವರ್ಷಗಳ ನಂತರ ಉಭಯ ದೇಶಗಳ ನಡುವಿನ ವ್ಯಾಪಾರ ಪುನಾರಂಭಿಸಲು ಕಾರಣವಾಗುತ್ತಿತ್ತು.

ಹಳಸಿದ ಸ್ನೇಹ-ಸಂಬಂಧ :370ನೇ ವಿಧಿ ರದ್ಧತಿ ಮತ್ತು ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದನ್ನು ವಿರೋಧಿಸಿ ಪಾಕಿಸ್ತಾನವು 2019ರ ಆಗಸ್ಟ್‌ನಲ್ಲಿ ಏಕಪಕ್ಷೀಯವಾಗಿ ಭಾರತದೊಂದಿಗೆ ಸಂಬಂಧ ಕಡಿದುಕೊಂಡಿತ್ತು.

ಇದನ್ನೂ ಓದಿ: ಮಾರ್ಚ್​ನಲ್ಲಿ ಬಜಾಜ್ ಆಟೋ ಮಾರಾಟ ಶೇ 52ರಷ್ಟು ಬೆಳವಣಿಗೆ: ಆದ್ರೂ ಮೈನಸ್​ನಿಂದ ಮೇಲೆದ್ದಿಲ್ಲ!

ಇತ್ತೀಚಿನ ವಾರಗಳಲ್ಲಿ ಪಾಕಿಸ್ತಾನದ ನಾಯಕತ್ವವು ಭಾರತದ ವಿರುದ್ಧ ಮಾತಿನ ದಾಳಿ ತಗ್ಗಿಸಿದೆ. ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಬಯಕೆ ಸೂಚಿಸುವ ಹೇಳಿಕೆಗಳನ್ನು ನೀಡುತ್ತಿವೆ.

ಸ್ಥಿರ ಸಂಬಂಧಕ್ಕೆ ಬಜ್ವಾ ಕರೆ :ಕಳೆದ ತಿಂಗಳು ಪಾಕ್ನ ಸೇನಾ ಮುಖ್ಯಸ್ಥ ಜಾವೇದ್ ಕಮರ್ ಬಜ್ವಾ ಅವರು 'ಭೂತಕಾಲವನ್ನು ಹೂತು ಮುಂದೆ ಸಾಗುವ ಸಮಯ ಬಂದಿದೆ' ಎಂದು ಹೇಳಿದ್ದರು. ಪೂರ್ವ ಮತ್ತು ಪಶ್ಚಿಮ ಏಷ್ಯಾದ ನಡುವಿನ ಸಂಪರ್ಕ ಖಾತ್ರಿಪಡಿಸಿಕೊಳ್ಳುವ ಮೂಲಕ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾಮರ್ಥ್ಯವನ್ನು ತೆರೆದಿಡುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಥಿರ ಸಂಬಂಧಕ್ಕೆ ಕರೆ ಕೊಟ್ಟರು. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲು ಭಾರತ ಮೊದಲ ಹೆಜ್ಜೆ ಇಡಬೇಕಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

2 ವರ್ಷಗಳ ಬಳಿಕ ಪಿಐಸಿ ಸಭೆ :ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನವು ಶಾಶ್ವತ ಸಿಂಧೂ ಆಯೋಗದ(ಪಿಐಸಿ) ವಾರ್ಷಿಕ ಸಭೆಯನ್ನು ಎರಡೂವರೆ ವರ್ಷಗಳ ಬಳಿಕ ನಡೆಸಿದವು. 1960ರ ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಡಿ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕ್‌ನ ನಿಯೋಗ ದೆಹಲಿಗೆ ಆಗಮಿಸಿತ್ತು. ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರೋದಾಗಿ ಭಾರತ ಮತ್ತು ಪಾಕಿಸ್ತಾನ ಫೆಬ್ರವರಿಯಲ್ಲಿ ಘೋಷಿಸಿದ್ದವು.

ABOUT THE AUTHOR

...view details