ಕರ್ನಾಟಕ

karnataka

ಸಂಗೀತಾ ಫೋಟೋ ಇದ್ದ ಮಡಿಕೆ ಒಡೆದ ಕಾರ್ತಿಕ್! ಬಿಗ್‌ ಬಾಸ್ ಮನೆಮಂದಿಗೆ ಅಚ್ಚರಿ

By ETV Bharat Karnataka Team

Published : Dec 17, 2023, 7:25 PM IST

BBK10: ಇಲ್ಲಿದೆ ಬಿಗ್​ ಬಾಸ್​ 'ಸೂಪರ್​ ಸಂಡೇ ವಿತ್​ ಸುದೀಪ' ಸಂಚಿಕೆಯ ಪ್ರೋಮೋ.

Kannada bigg boss super sunday with sudeep promo
ಬಿಗ್​ ಬಾಸ್​: ಸ್ಪರ್ಧಿಗಳ ಕೋಪ ತಾಪದ ಮಡಿಕೆ ಒಡೆಯೋ ಸಮಯ!

ಕಿಚ್ಚ ಸುದೀಪ್​ ನಡೆಸಿಕೊಡುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​'. ದಿನಕ್ಕೊಂದು ಟಾಸ್ಕ್​ಗಳ ಮನರಂಜನೆಯ ಜೊತೆಗೆ ಸ್ಪರ್ಧಿಗಳ ನಡುವಿನ ಸ್ಪರ್ಧೆ​ ಕೂಡ ಹೆಚ್ಚಾಗುತ್ತಿದೆ. ಈ ವಾರದ ಶನಿವಾರದ ಕಿಚ್ಚನ ಪಂಚಾಯ್ತಿ ಮುಗಿದಿದ್ದು, ಇಂದು 'ಸೂಪರ್​ ಸಂಡೇ ವಿತ್​ ಸುದೀಪ' ಪ್ರಸಾರಗೊಳ್ಳಲಿದೆ. ಈ ಸಂಚಿಕೆಯ ಒಂದು ಇಣುಕು ನೋಟವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಈ ವಾರ ಮನೆ ಮಂದಿಗೆ ಸ್ಪೆಷಲ್​ ಟಾಸ್ಕ್​ ನೀಡಲಾಗಿತ್ತು. 'ಬಿಗ್​ ಬಾಸ್'​ ಮನೆ 'ಪ್ರಾಥಮಿಕ ಶಾಲೆ'ಯಾಗಿ ಬದಲಾಗಿತ್ತು. ಸ್ಪರ್ಧಿಗಳೆಲ್ಲಾ ಪುಟ್ಟ ಮಕ್ಕಳಂತೆ ಜಗಳವಾಡುತ್ತಾ ಕುಣಿದಾಡಿದ್ದರು. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತಾ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತಾ, ಎಲ್ಲರೂ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತಾ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟು ಮಾಡಿದ್ದರು. ಟಾಸ್ಕ್​ನ ಕೊನೆ ಕ್ಷಣ ಬಂದಂತೆ ಮನೆ ಮಂದಿಯ ನಡುವೆ ಕೊಂಚ ಅಸಮಾಧಾನ ಕೂಡ ಕಾಣಿಸಿಕೊಂಡಿತ್ತು.

ಆದರೆ, ಈ ಕಿಚ್ಚನ್ನು ಕ್ಷಣ ಮಾತ್ರದಲ್ಲಿ ತಣಿಸಿದ್ದು ಕಿಚ್ಚನ ಕೈಯಡುಗೆ. ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯ್ಯಾರೆ ರೆಡಿ ಮಾಡಿದ ಅಡುಗೆಯನ್ನು ಸುದೀಪ್ ಕಳುಹಿಸಿಕೊಟ್ಟಿದ್ದರು. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಬರೆದಿಟ್ಟಿದ್ದರು. ಈ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿತ್ತು. ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆ ಮಂದಿಯೆಲ್ಲ ಸವಿದು ಸಂಭ್ರಮಿಸಿದರು.

ಇದಾಗಿ ನಿನ್ನೆ ಶನಿವಾರದ ಕಿಚ್ಚನ ಪಂಚಾಯ್ತಿ ನಡೆಯಿತು. ಮನೆಯಲ್ಲಿ ವಾರಪೂರ್ತಿ ನಡೆದ ಟಾಸ್ಕ್​, ಮನಸ್ತಾಪ, ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಆಯಿತು. ಇಂದು 'ಸೂಪರ್​ ಸಂಡೇ ವಿತ್​ ಸುದೀಪ' ಪ್ರಸಾರಗೊಳ್ಳಲಿದೆ. 'ಕೋಪ ತಾಪದ ಮಡಿಕೆ ಒಡೆಯೋ ಸಮಯ!' ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್​ ಕನ್ನಡ ವಾಹಿನಿ ಹೊಸ ಪ್ರೋಮೋವನ್ನು ಹಂಚಿಕೊಂಡಿದೆ. ಅದರಂತೆ ಮನೆಯ ಸದಸ್ಯರೊಬ್ಬರ ಫೋಟೋವನ್ನಿಟ್ಟು ಮಡಿಕೆ ಒಡೆಯುವ ಮೂಲಕ ಸ್ಪರ್ಧಿಗಳು ತಮಗಿದ್ದ ಕೋಪವನ್ನು ಹೊರಹಾಕಿದ್ದಾರೆ.

'ನೀವು ಒಬ್ಬರನ್ನು ಆಯ್ಕೆ ಮಾಡಿ, ಯಾವ ವಿಚಾರದ ಮೇಲೆ ನಿಮಗೆ ಅವರ ಮೇಲೆ ಕೋಪ ಇದೆ ಎಂಬುದನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಿ ಆ ಮಡಕೆಯನ್ನು ಒಡೆಯಬಹುದು' ಎಂದು ಸುದೀಪ್​ ಆಜ್ಞೆ ನೀಡಿದ್ದಾರೆ. ಅದರಂತೆ ಮೈಕಲ್​, ಪ್ರತಾಪ್​ ಫೋಟೋ ಇಟ್ಟು ಮಡಿಕೆ ಒಡೆದಿದ್ದಾರೆ. ಪವಿ ಅವರು ತುಕಾಲಿ ಸಂತೋಷ್​ ಅವರ ಮೇಲಿನ ಕೋಪವನ್ನು ಮಡಿಕೆ ಮೇಲೆ ತೋರಿಸಿದ್ದಾರೆ. ಸದಾ ಹೊಡೆದಾಡಿಕೊಳ್ಳುವ ವಿನಯ್​ ಮತ್ತು ಸಂಗೀತಾ ಇಲ್ಲೂ ಅದೇ ಕೋಪವನ್ನು ತೋರಿಸಿದ್ದಾರೆ.

ಮತ್ತೊಂದೆಡೆ, ಕಾರ್ತಿಕ್​ ತಮ್ಮ ಸ್ನೇಹಿತೆ ಸಂಗೀತಾ ಅವರ ಫೋಟೋವನ್ನಿಟ್ಟು ಮಡಿಕೆ ಹೊಡೆದಿದ್ದಾರೆ. 'ನಾನು ಮತ್ತು ವಿನಯ್​ ಯಾವಾಗಲೂ ಒಂದೇ ರೀತಿ ಇದ್ದೆವು. ಬಕೆಟ್​ ಹಿಡಿಯೋದೆಲ್ಲ ನನಗೆ ಗೊತ್ತಿಲ್ಲ. ಈ ರೀತಿಯ ಸ್ಟೇಟ್​ಮೆಂಟ್​ ಪಾಸ್​ ಮಾಡುವುದು ನಿಜಕ್ಕೂ ಒಳ್ಳೆಯದಲ್ಲ. ಕೆಲವೊಬ್ರು ಹೇಳಿದ್ರು, ಸಂಗೀತಾನ ಕಾರ್ತಿಕ್​ನಿಂದ ಮೈನಸ್ ಮಾಡಿದ್ರೆ ಕಾರ್ತಿಕ್​ ಶೂನ್ಯ ಅಂತ. ಮೈನಸ್​ ಮಾಡಿದ್ದೇನೆ. ಝೀರೋ ಅಂತ ಪ್ರೂವ್​ ಮಾಡಿ' ಎಂದು ಕೋಪದಲ್ಲಿ ಮಡಿಕೆ ಹೊಡೆದು ಹಾಕಿದ್ದಾರೆ. ಇದು ಸಂಗೀತಾ ಸೇರಿದಂತೆ ಮನೆ ಮಂದಿಗೆಲ್ಲಾ ಆಶ್ಚರ್ಯ ತಂದಿದೆ.

ಹಾಗಿದ್ರೆ ಇಲ್ಲಿಗೆ ಕೊನೆಯಾಗುತ್ತಾ ಸಂಗೀತಾ- ಕಾರ್ತಿಕ್​ ಗೆಳೆತನ? ಪ್ರೆಂಡ್ಶಿಪ್​ ಬಗ್ಗೆ ಪಾಠ ಮಾಡೋ ಸುದೀಪ್ ಈ ಬಗ್ಗೆ ಏನ್​ ಹೇಳ್ತಾರೆ? ಮನೆ ಮಂದಿಗೆ ಈ ಬಗ್ಗೆ ಇರೋ ಅಭಿಪ್ರಾಯವೇನು? ಈ ವಾರ ಮನೆಯಿಂದ ಔಟ್​ ಆಗುತ್ತಿರುವ ಸ್ಪರ್ಧಿ ಯಾರು? ಎಂದೆಲ್ಲಾ ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ:ಹಸಿವಿನಿಂದ ಕಂಗೆಟ್ಟ ಬಿಗ್‌ ಬಾಸ್‌ ಮನೆಮಂದಿಗೆ ಸಿಕ್ತು ಕಿಚ್ಚನ ಕೈಯಡುಗೆ: ವಿಡಿಯೋ ನೋಡಿ

ABOUT THE AUTHOR

...view details