ಧರ್ಮಸ್ಥಳ (ದಕ್ಷಿಣ ಕನ್ನಡ): ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ವೀರ ಕಂಬಳ' ಎಂಬ ಸಿನಿಮಾದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವ ಫೋಟೋ ಫುಲ್ ವೈರಲ್ ಆಗಿದೆ.
ವೀರ ಕಂಬಳ ಸಿನಿಮಾ: ಸುಮಾರು 7 ವರ್ಷಗಳ ಕಾಲ ಸಂಶೋಧನೆ ನಡೆಸಿ ನಿರ್ಮಿಸಲಾಗುತ್ತಿರುವ ವೀರ ಕಂಬಳ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಕಂಬಳವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಸಿನಿಮಾ ತಯಾರಾಗುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಹಾಗೂ ತುಳು ಭಾಷೆಗಳಲ್ಲಿಯೂ ತೆರೆಗೆ ಬರಲಿದೆ. ತುಳು ಭಾಷೆಯಲ್ಲಿ 'ಬಿರ್ದ್ದ ಕಂಬಳ' ಹೆಸರಿನಲ್ಲಿ ಚಿತ್ರ ಮೂಡಿ ಬರಲಿದೆ.