ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಿತ್ರಬ್ರಹ್ಮನೆಂದೇ ಬಿರುದು ಪಡೆದಿರುವ ಪುಟ್ಟಣ್ಣ ಅವರ ಜನ್ಮದಿನವಿಂದು. ಇಂತಹ ಮಹಾನ್ ನಿರ್ದೇಶಕನ ಹುಟ್ಟುಹಬ್ಬವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಅಧ್ಯಕ್ಷ ಭಾ.ಮಾ. ಹರೀಶ್ ನೇತೃತ್ವದಲ್ಲಿ ಆಚರಿಸಲಾಯಿತು. ಪುಟ್ಟಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು.
ಈ ವೇಳೆ ನಿರ್ಮಾಪಕರಾದ ಎಂ.ಎನ್ ಕುಮಾರ, ಚಿನ್ನೇಗೌಡ, ನಿರ್ದೇಶಕರಾದ ನಾಗಣ್ಣ, ಜೋ ಸೈಮನ್, ನಾಗೇಂದ್ರ ಅರಸ್ ಸೇರಿದಂತೆ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೇ ಕಾರ್ಯಕ್ರಮದಲ್ಲಿ ನಂಜುಂಡೇಗೌಡ, ನಾಗೇಂದ್ರ ಅರಸ್ ಸೇರಿದಂತೆ ಕೆಲ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಸನ್ಮಾನಿಸಲಾಯಿತು.
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಕಣಗಲ್ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಇದೆ. ಖ್ಯಾತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇನ್ನು, ಮಹಿಳಾ ಪ್ರಧಾನ ಚಿತ್ರಗಳು, ಪ್ರಯೋಗ ಶೀಲ ಚಿತ್ರಗಳು, ಕಮರ್ಷಿಯಲ್ ಸಿನಿಮಾಗಳು ಹೀಗೆ ಹಲವಾರು ಮಾದರಿಯ ಚಿತ್ರಗಳನ್ನು ಮಾಡಿ ಸಕ್ಸಸ್ ಆದ ನಿರ್ದೇಶಕರಿವರು. ಇವರು ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಾಟಕ ಕಂಪನಿಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ನಂತರದಲ್ಲಿ ಖ್ಯಾತ ನಿರ್ದೇಶಕ, ನಿರ್ಮಾಪಕ ಬಿ.ಆರ್ ಪಂತುಲು ಅವರ ಬಳಿ 1954ರಲ್ಲಿ ಡೈಲಾಗ್ ರೈಟರ್ ಆಗಿ ಸೇರಿಕೊಂಡರು. ಮುಂದಿನ ದಿನಗಳಲ್ಲಿ ಪದ್ಮಿನಿ ಪಿಕ್ಚರ್ಸ್ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದರು. ಕಾದಂಬರಿ ಆಧಾರಿತ ಚಿತ್ರಗಳಿಗೆ ಪುಟ್ಟಣ್ಣ ಹೆಚ್ಚು ಒತ್ತು ಕೊಟ್ಟಿದ್ದರು. ಅವರ ವೃತ್ತಿ ಜೀವನದ ಮೊದಲ ಚಿತ್ರ ಮಲಯಾಳಂನ ಸ್ಕೂಲ್ ಮಾಸ್ಟರ್ ಆಗಿತ್ತು. ಬಳಿಕ ಬೆಳ್ಳಿಮೋಡ ಎಂಬ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ ಚಿತ್ರಬ್ರಹ್ಮ ಎನಿಸಿಕೊಂಡರು.
ಇದನ್ನೂ ಓದಿ:ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದ ಹಿಂದಿ ಟೀಸರ್ ಬಿಡುಗಡೆ