ಕರ್ನಾಟಕ

karnataka

By

Published : Feb 21, 2023, 7:33 AM IST

Updated : Feb 21, 2023, 2:37 PM IST

ETV Bharat / entertainment

ಸೆಲ್ಫಿ ನಿರಾಕರಿಸಿದ್ದಕ್ಕೆ ಸೋನು ನಿಗಮ್​ ಮೇಲೆ ಹಲ್ಲೆ: ದೂರು ನೀಡಿದ ಗಾಯಕ

ಲೈವ್ ಕನ್ಸರ್ಟ್ ವೇಳೆ ಸೆಲ್ಫಿಗಾಗಿ ಸೋನು ನಿಗಮ್​ ಮೇಲೆ ಹಲ್ಲೆ - ದೂರು ದಾಖಲಿಸಿದ ಗಾಯಕ - ಮುಂಬೈನಲ್ಲಿ ಘಟನೆ

Sonu Nigam
ಸೆಲ್ಫಿಗಾಗಿ ಸೋನು ನಿಗಮ್​ ಮೇಲೆ ಹಲ್ಲೆ

ಸೆಲ್ಫಿ ನಿರಾಕರಿಸಿದ್ದಕ್ಕೆ ಸೋನು ನಿಗಮ್​ ಮೇಲೆ ಹಲ್ಲೆ

ಮುಂಬೈ (ಮಹಾರಾಷ್ಟ್ರ): ಸೆಲೆಬ್ರೆಟಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಬಹಳಷ್ಟು ಜನರು ಇಷ್ಟಪಡುತ್ತಾರೆ. ಇತ್ತೀಚೆಗಷ್ಟೇ ಕ್ರಿಕೆಟಿಗ ಪೃಥ್ವಿ ಶಾ ಅವರ ಮೇಲೂ ಫೋಟೋಗೆ ಅನುಮತಿಸಿಲ್ಲ ಎಂಬ ಕಾರಣಕ್ಕೆ ಹಲ್ಲೆ ಆಗಿತ್ತು. ಈಗ ಇದೇ ರೀತಿಯ ಘಟನೆ ಮುಂಬೈನಲ್ಲಿ ನಡೆದಿದ್ದು, ಗಾಯಕ ಸೋನು ನಿಗಮ್ ಅವರ ಮೇಲೆ ಫೋಟೋಕ್ಕೆ ಅನುಮತಿ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳಿಂದ ಹಲ್ಲೆಯಾಗಿದೆ. ಈ ಬಗ್ಗೆ ಸೋನು ನಿಗಮ್​ ದೂರು ದಾಖಲಿಸಿದ್ದಾರೆ.

ಸೋಮವಾರ ರಾತ್ರಿ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಗಾಯಕ ಸೋನು ನಿಗಮ್ ಅವರ ಲೈವ್ ಕನ್ಸರ್ಟ್ ಸಂದರ್ಭದಲ್ಲಿ ಈ ಘಟನೆ ಆಗಿದೆ. ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಸೋನು ನಿಗಮ್ ನೀಡಿದ ದೂರಿನ ಪ್ರಕಾರ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), 341 (ತಪ್ಪು ಸಂಯಮ), ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ನಂತರ ಮಾತನಾಡಿದ ಡಿಸಿಪಿ ಹೇಮರಾಜ್‌ಸಿಂಗ್ ರಜಪೂತ್, "ಸ್ವಪ್ನಿಲ್ ಫಾಟರ್‌ಪೇಕರ್ ಎಂಬಾತ ಲೈವ್ ಕನ್ಸರ್ಟ್ ಮುಗಿಸಿ ವೇದಿಕೆಯಿಂದ ಬರುತ್ತಿದ್ದ ಸೋನು ನಿಗಮ್ ಅವರನ್ನು ತಡೆದಿದ್ದಾನೆ. ಆಗ ಸೋನು ನಿಗಮ್ ಅವರ ಅಂಗರಕ್ಷಕರು ಸ್ವಪ್ನಿಲ್ ಅವರನ್ನು ತಡೆಯಲೆತ್ನಿಸಿದ್ದಾರೆ. ಈ ವೇಳೆ ಸ್ವಪ್ನಿಲ್ ಕಡೆಯವರು ಮತ್ತು ಸೋನು ನಿಗಮ್​ ಅಂಗರಕ್ಷಕರ ನಡುವೆ ತಳ್ಳಾಟ ಆಗಿದೆ. ಇದರಲ್ಲಿ ಸೋನು ನಿಗಮ್​ ಕಡೆಯ ಒಬ್ಬರಿಗೆ ಗಾಯವಾಗಿದೆ. ಗಾಯಾಳು ಹೆಸರು ರಬ್ಬಾನಿ" ಎಂದು ತಿಳಿಸಿದ್ದಾರೆ.

ಸೋನು ನಿಗಮ್​ ಅವರ ದೂರಿನ ಪ್ರಕಾರ, ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಹಲ್ಲೆ ನಡೆದಿದೆ. ಘಟನೆಯ ನಂತರ ಗಾಯಕ ಸೋನು ನಿಗಮ್ ಚೆಂಬೂರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸೆಲ್ಫಿ ವಿಚಾರದಲ್ಲಿ ಗಲಾಟೆ: ಕ್ರಿಕೆಟಿಗ ಪೃಥ್ವಿ ಶಾ, ಸ್ನೇಹಿತನ ಕಾರಿನ ಮೇಲೆ ದಾಳಿ

ಮೂಲಗಳ ಮಾಹಿತಿಯ ಪ್ರಕಾರ, ಆರೋಪಿ ಸ್ಥಳೀಯ ಶಾಸಕರೊಬ್ಬರ ಪುತ್ರ. ಆರೋಪಿ ಸೆಲ್ಫಿಗಾಗಿ ಗಾಯಕನ ಬಳಿಗೆ ಹೋದಾಗ ಅವನ ಮತ್ತು ಸೋನು ನಿಗಮ್ ಅವರ ಅಂಗರಕ್ಷಕರ ನಡುವೆ ಜಗಳ ಆರಂಭವಾಗಿದೆ.

ಘಟನೆಯನ್ನು ನೆನಪಿಸಿಕೊಂಡ ಗಾಯಕ ಸೋನು ನಿಗಮ್, "ಸಂಗೀತ ಕಾರ್ಯಕ್ರಮದ ನಂತರ ನಾನು ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದಿದ್ದರು. ನಂತರ ಅವರು ನನ್ನನ್ನು ರಕ್ಷಿಸಲು ಬಂದ ನನ್ನ ಅಂಗರಕ್ಷಕ ಹರಿ ಮತ್ತು ರಬ್ಬಾನಿ ಅವರನ್ನು ತಳ್ಳಿದ್ದಾರೆ, ನಂತರ ನಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ದೂರು ನೀಡಿದ್ದೇನೆ. ಜನರು ಬಲವಂತವಾಗಿ ಸೆಲ್ಫಿ ಅಥವಾ ಫೋಟೋಗಳನ್ನು ಪಡೆಯಲು ಪ್ರಯತ್ನಿಸಿದಾಗ, ಗಲಾಟೆ, ಗದ್ದಲಗಳ ಪರಿಣಾಮದ ಬಗ್ಗೆ ಯೋಚಿಸಬೇಕು ಎಂದು ನಾನು ದೂರು ದಾಖಲಿಸಿದ್ದೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು

Last Updated : Feb 21, 2023, 2:37 PM IST

ABOUT THE AUTHOR

...view details