ಕರ್ನಾಟಕ

karnataka

ETV Bharat / entertainment

Sandalwood actors: ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳ ಕೊರತೆ.. ಪರಭಾಷೆ ಸಿನಿಮಾಗಳಲ್ಲಿ ಡಿಮ್ಯಾಂಡ್​​ ಹೆಚ್ಚಿಸಿಕೊಳ್ಳುತ್ತಿರುವ ಕನ್ನಡಿಗರಿವರು.. - ದೀಕ್ಷಿತ್​ ಶೆಟ್ಟಿ

ಕನ್ನಡ ಚಿತ್ರರಂಗದ ಭರವಸೆಯ ನಟ, ನಟಿಯರು ಪರಭಾಷೆ ಸಿನಿಮಾಗಳಲ್ಲಿ ಡಿಮ್ಯಾಂಡ್​ ಹೆಚ್ಚಿಸಿಕೊಳ್ಳುತ್ತಿದ್ದಾರೆ.

Sandalwood actors
ಸ್ಯಾಂಡಲ್​ವುಡ್​

By

Published : Jun 8, 2023, 6:42 PM IST

ಕನ್ನಡದ ಮಣ್ಣಿನಲ್ಲಿ ಹುಟ್ಟಿ ಪರಭಾಷೆಯ ಸಿನಿಮಾಗಳಲ್ಲಿ ಸ್ಯಾಂಡಲ್​ವುಡ್​ ತಾರೆಯರು ಮಿಂಚುತ್ತಿದ್ದಾರೆ. ರಜನಿಕಾಂತ್, ಪ್ರಕಾಶ್ ರೈ, ಚರಣ್ ರಾಜ್, ಕಿಶೋರ್, ಅರ್ಜುನ್ ಸರ್ಜಾ, ನಿತ್ಯಾ ಮೆನನ್ ಹೀಗೆ ಅನೇಕ ತಾರೆಯರು ಕರ್ನಾಟಕದಲ್ಲಿ ಹುಟ್ಟಿ ಪರಭಾಷೆಯ ಚಿತ್ರಗಳಿಗೆ ಫೇಮಸ್​ ಆಗಿದ್ದಾರೆ. ತಮ್ಮ ಅಭಿನಯದಿಂದ ಭಾರತದಾದ್ಯಂತ ಜನರ ಮನ ಗೆದ್ದು ಸೂಪರ್​ ಸ್ಟಾರ್​ ಎನಿಸಿಕೊಂಡಿದ್ದಾರೆ.

ಅದರಲ್ಲಿಯೂ ಕಾಲಿವುಡ್​ ನಟ ರಜನಿಕಾಂತ್ ಭಾರತದ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಅಲಂಕರಿಸಿ 72ರ ಪ್ರಾಯದಲ್ಲೂ ಒಂದರ ಮೇಲೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇವರು ಕನ್ನಡಿಗರೆನ್ನುವುದು ಕನ್ನಡಿಗರಿಗೆ ಹೆಮ್ಮೆ. ಆದರೆ, ಇಂತಹ ದಿಗ್ಗಜ ನಟರನ್ನು ಕನ್ನಡದಲ್ಲೇ ಉಳಿಸಿಕೊಳ್ಳುವ ಪ್ರಯತ್ನವನ್ನು ನಮ್ಮ ನಿರ್ದೇಶಕ, ನಿರ್ಮಾಪಕರು ಯಾಕೆ ಮಾಡಲಿಲ್ಲವೆಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತವೆ. ಕನ್ನಡದ ಭರವಸೆಯ ನಟರ ವಲಸೆ ನೋಡಿದಾಗ ನಮಗೆ ಇದೇ ಪ್ರಶ್ನೆ ಇನ್ನೊಮ್ಮೆ ಕಾಡುತ್ತಿದೆ.

ದೀಕ್ಷಿತ್​ ಶೆಟ್ಟಿ

ಕಿರುತೆರೆಯಲ್ಲಿ ನಟಿಸುತ್ತಿದ್ದ ದೀಕ್ಷಿತ್​ ಶೆಟ್ಟಿ, ದಿಯಾ ಸಿನಿಮಾ ಬಂದ ನಂತರ ಇವರ ಅಭಿನಯವನ್ನು ಜನರು ಕೊಂಚ ಹೆಚ್ಚೇ ಮೆಚ್ಚಿಕೊಂಡಿದ್ದರು. ಕುಂದಾಪುರದ ಹುಡುಗ ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಲಿದ್ದಾನೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆಗಿದ್ದೇ ಬೇರೆ. ಕನ್ನಡದಲ್ಲಿ ನೆಲೆ ನಿಲ್ಲಬೇಕಿದ್ದ ದೀಕ್ಷಿತ್ ಶೆಟ್ಟಿ ಅವರನ್ನ ಪಕ್ಕದ ಮನೆಯ ಸದಸ್ಯರು ರತ್ನಗಂಬಳಿ ಹಾಕಿ ಸ್ವಾಗತಿಸಿದರು. ಹೊಸ ಮುಖಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ನಿರ್ಮಾಣಕ್ಕೆ ಇಳಿದಿದ್ದ ನಾನಿಯಂತಹ ಬೆಳೆದು ನಿಂತ ನಟ ತಮ್ಮ ವೆಬ್ ಸರಣಿಯಲ್ಲಿ ದೀಕ್ಷಿತ್ ಶೆಟ್ಟಿಗೆ ಅವಕಾಶವನ್ನು ಕೊಟ್ಟರು. ಮೀಟ್ ಕ್ಯೂಟ್ ನಲ್ಲಿ ದೀಕ್ಷಿತ್ ಅಭಿನಯಕ್ಕೆ ಮನ ಸೋತು ಮುಂದೆ ತಮ್ಮದೇ ಕಮರ್ಷಿಯಲ್ ಸಿನಿಮಾ ದಸರಾದಲ್ಲಿಯೂ ಬಹುಮುಖ್ಯವಾದ ಪಾತ್ರವನ್ನ ಕೊಟ್ಟರು.

ದೀಕ್ಷಿತ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಲಿಲ್ಲ, ಬದಲಾಗಿ ಸಮರ್ಥವಾಗಿ ಬಳಸಿಕೊಂಡರು. ತಮ್ಮ ಅಭಿನಯದಿಂದ ತೆಲುಗರ ಹೃದಯವನ್ನೂ ಗೆದ್ದರು. ಇವತ್ತು ದೀಕ್ಷಿತ್​ಗೆ ಸ್ಯಾಂಡಲ್​ವುಡ್​ಗಿಂತ ಟಾಲಿವುಡ್​ನಲ್ಲೇ ಹೆಚ್ಚು ಬೆಲೆ ಇದೆ. ಅವಕಾಶ ಕೂಡ ಸಿಕ್ತಿದೆ. ಹಾಗಂತ ಕನ್ನಡದಲ್ಲಿ ದೀಕ್ಷಿತ್​ಗೆ ಅವಕಾಶ ಸಿಕ್ಕಿಲ್ಲ, ಸಿಗ್ತಿಲ್ಲ ಅಂತೇನಲ್ಲ. ಕೆ.ಟಿ.ಎಂ ಹಾಗೂ ಬ್ಲಿಂಕ್ ದೀಕ್ಷಿತ್ ಅಭಿನಯದ ಎರಡು ಕನ್ನಡ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಆದರೆ ಅಂದುಕೊಂಡಂತಹ ಅವಕಾಶವಾಗಲಿ, ನಿರೀಕ್ಷೆ ಮಾಡಿದ್ದ ಪಾತ್ರಗಳಾಗಿ ದೀಕ್ಷಿತ್ ಶೆಟ್ಟಿಗೆ ನಮ್ಮಲ್ಲಿ ಸಿಕ್ಕಿಲ್ಲ ಅಷ್ಟೇ.

ರಿಶಿ

ಇನ್ನೂ ರಿಶಿ ಕಥೆಯೂ ಬಹುತೇಕ ದೀಕ್ಷಿತ್ ಶೆಟ್ಟಿಯಂತೆಯೇ ಇದೆ. ಕವಲು ದಾರಿ, ಆಪರೇಶನ್ ಅಲಮೇಲಮ್ಮ ಹೀಗೆ ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನ ಕೊಟ್ಟರು ರಿಶಿಗೆ ಕನ್ನಡ ಚಿತ್ರರಂಗದಲ್ಲಿ ಮನ್ನಣೆ ಸಿಕ್ಕಿಲ್ಲ. ಅಭಿನಯಕ್ಕೆ ಸಾಣೆ ಹಿಡಿಯುವ ಪಾತ್ರವೂ ರಿಶಿಯನ್ನ ಅರಸಿಕೊಂಡು ಹೋಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ರಿಶಿ ಈ ಒಂದು ದಶಕದಲ್ಲಿ ಕೇವಲ 10 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಅದರಲ್ಲಿಯೂ ನಾಲ್ಕು ಸಿನಿಮಾದಲ್ಲಿ ರಿಶಿ ನಿರ್ವಹಿಸಿರುವುದು ಕೇವಲ ಅತಿಥಿ ಪಾತ್ರವಷ್ಟೇ.

ಇಂಥಹ ರಿಶಿ ಸದ್ದು ಗದ್ದಲವಿಲ್ಲದೆ ತೆಲುಗು ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿದ್ದಾರೆ. ಶೈತಾನ್ ವೆಬ್ ಸರಣಿಯಲ್ಲಿ ಬಣ್ಣ ಹಚ್ಚಿ ಬಾಲಿ ಎಂಬ ಕ್ರೂರಿಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ಜೂನ್ 15ರಂದು ರಿಶಿಯ ಶೈತಾನ್ ವೆಬ್ ಸರಣಿ ತೆಲುಗು ಜೊತೆಯಲ್ಲಿ ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿ ಪ್ರಸಾರವಾಗಲಿದೆ.

ಸರ್ದಾರ್ ಸತ್ಯ

ಇನ್ನು ಸರ್ದಾರ್ ಸತ್ಯ ಬಗ್ಗೆ ನಿಮಗೆ ಗೊತ್ತಿರುವುದೇ. ಹೆಚ್ಚು ಕಡಿಮೆ ಒಂದೂವರೆ ದಶಕದಿಂದ ಕನ್ನಡ ಚಿತ್ರರಂಗಕ್ಕೆ ತನ್ನದೇ ಸೇವೆಯನ್ನ ನೀಡಿರುವ ಸರ್ದಾರ್ ಸತ್ಯ ಅವರನ್ನ ಕನ್ನಡ ಚಿತ್ರರಂಗ ನಾಯಕನನ್ನಾಗಿಯೂ ಬಳಸಿಕೊಳ್ಳಲಿಲ್ಲ. ಸರ್ದಾರ್ ಸತ್ಯಗೆ ಖಳನಾಯಕನ ಪಟ್ಟವನ್ನೂ ಕಟ್ಟಲಿಲ್ಲ. ಸ್ಲಂ ಬಾಲಾ, ಗುಂಡ್ರಗೋವಿ, ರಾಜಧಾನಿ, ದ್ಯಾವ್ರೇ ಹೀಗೆ ಸಿನಿಮಾದಿಂದ ಸಿನಿಮಾಗೆ ತಮ್ಮ ಸಾಮರ್ಥ್ಯದ ಪ್ರದರ್ಶನವನ್ನ ಸರ್ದಾರ್ ಸತ್ಯ ಮಾಡಿದರೂ ಹೇಳಿಕೊಳ್ಳುವ ಒಂದು ದೊಡ್ಡ ಸಿನಿಮಾ, ಒಂದು ದೊಡ್ಡ ಪಾತ್ರ ಈವರೆಗೂ ಅವರಿಗೆ ಸಿಕ್ಕಿಲ್ಲ.

ಸರ್ದಾರ್ ಸತ್ಯ ಅವರಲ್ಲಿನ ಪ್ರತಿಭೆಯನ್ನ ಬಳಸಿಕೊಳ್ಳಲು ತಮಿಳುನಾಡಿನ ವೆಟ್ರಿಮಾರನ್ ಬರಬೇಕಾಯಿತು. ವಿಡುದಲೈ ಭಾಗ 1 ಸತ್ಯಗೆ ಬೇಕಿದ್ದ ಹೆಸರನ್ನು ತಂದುಕೊಟ್ಟಿತು. ಸದ್ಯಕ್ಕೆ ಸರ್ದಾರ್ ಸತ್ಯ ವಿಡುದಲೈ ಭಾಗ 2ರಲ್ಲಿ ನಟಿಸ್ತಿದ್ದಾರೆ. ಮುಂದೆ ಕಾಲಿವುಡ್​ನಲ್ಲಿ ಹಲವು ಪಾತ್ರ ಇವರನ್ನ ಹುಡುಕಿಕೊಂಡು ಹೋಗುವ ಸಾಧ್ಯತೆಯೂ ಸದ್ಯಕ್ಕೆ ದಟ್ಟವಾಗಿದೆ.

ಜಯರಾಂ ಕಾರ್ತಿಕ್

ಕನ್ನಡದ ಇನ್ನೊಬ್ಬ ಪ್ರತಿಭಾವಂತ ನಟ ಜೆಕೆ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಮೊನ್ನೆಯಷ್ಟೇ ಜಯರಾಂ ಕಾರ್ತಿಕ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೆಂದು ಬಹಿರಂಗವಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ತಮ್ಮನ್ನ ತುಳಿಯುವ ಪ್ರಯತ್ನ ಮೊದಲಿಂದ ನಡೆಯುತ್ತಾನೇ ಬಂದಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ಕಿಶೋರ್ ಹಾಗೂ ಪವಿತ್ರಾ ಲೊಕೇಶ್ ಇಬ್ಬರ ಬೇರು ಕನ್ನಡದಲ್ಲಿಯೇ ಇದ್ದರು ಇಬ್ಬರೂ ಬೇರೆ ಭಾಷೆಯಲ್ಲಿಯೇ ಬ್ಯುಸಿಯಾಗಿದ್ದಾರೆ. ಪವಿತ್ರಾ ಲೊಕೇಶ್ ಕನ್ನಡಕ್ಕಿಂತ ಹೆಚ್ಚೆಚ್ಚು ತೆಲುಗು ಸಿನಿಮಾಗಳಲ್ಲಿ ಅಭಿನಯಿಸ್ತಿದ್ದಾರೆ. ಮೊನ್ನೆಯಷ್ಟೇ ಇವರು ಅಭಿನಯಿಸಿದ್ದ ಮಳ್ಳಿ ಪೆಳ್ಳಿ ಸಿನಿಮಾ ತೆರೆಗೆ ಬಂದಿದೆ.

ಇನ್ನೂ ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ನಟ ಕಿಶೋರ್ ಸಕ್ರೀಯರಾಗಿದ್ದಾರೆ. ಪರಭಾಷೆಯಲ್ಲಿ ನಮ್ಮಲ್ಲಿನ ಕಲಾವಿದರಿಗೆ ಸಿಗುವ ಬೆಲೆ ಹಾಗೂ ಮನ್ನಣೆಗೆ ಇನ್ನೊಂದು ಉದಾಹರಣೆ ಅನ್ನುವಂತೆ ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ನಟರಂಗ ಅವರ ಪುತ್ರಿ ಧ್ವನಿ, ಮಲಯಾಳಂ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದಾರೆ. ಬಿಯಾಂಡ್ ದಿ ಕ್ಲೌಡ್ಸ್ ಚಿತ್ರದ ಮೂಲಕ ಆಗ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ಧ್ವನಿ ಅವರು ಫಹಾದ್ ಫಾಸಿಲ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಎಲ್ಲರ ಮನಸನ್ನೂ ಗೆದಿದ್ದಾರೆ.

ಶ್ರೀಲೀಲಾ

ವಿಪರ್ಯಾಸವೆಂದರೆ, ನಮ್ಮಲ್ಲಿನ ಪ್ರತಿಭೆ ನಮ್ಮವರ ಕಣ್ಣಿಗೆ ಕಾಣಲಿಲ್ಲ. ಕೇವಲ ಇವರಷ್ಟೇ ಅಲ್ಲ, ಶ್ರೀಲೀಲಾ, ನಭಾ ನಟೇಶ್ ಕೂಡ ಕನ್ನಡದಿಂದ ತೆಲುಗಿಗೆ ವಲಸೆ ಹೋಗಿದ್ದಾರೆ. ಶ್ರೀಲೀಲಾ ಕನ್ನಡಕ್ಕಿಂತ ತೆಲುಗು ಚಿತ್ರರಂಗದಲ್ಲಿಯೇ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಸ್ಪಲ್ಪ ಮೇಲಿನ ಸ್ಥಾನವನ್ನು ಹೈದ್ರಾಬಾದ್​ನಲ್ಲಿ ಅಲಂಕರಿಸಿದ್ದಾರೆ. ನಭಾ ನಟೇಶ್ ಕೂ ಅವರದ್ದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ನಭಾ ನಟೇಶ್​
ಆಶಿಕಾ ರಂಗನಾಥ್​

ಆಶಿಕಾ ರಂಗನಾಥ್ ಕೂಡ ಅಕ್ಕ ಪಕ್ಕದ ರಾಜ್ಯಗಳಲ್ಲಿ ಮನೆ ಮಾಡುವ ಕನಸನ್ನು ಕಾಣ್ತಿದ್ದಾರೆ. ಅಜಾನುಬಾಹು ವ್ಯಕ್ತಿ ಬಾಲಾಜಿ ಮನೋಹರ್ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ರೇಮೋ ಸಿನಿಮಾದ ನಾಯಕ ಇಶಾನ್ ತೆಲುಗು ವೆಬ್ ಸರಣಿಯಲ್ಲಿ ನಟಿಸ್ತಿದ್ದಾರೆ. ಒಟ್ಟಿನಲ್ಲಿ ಇಂದು ಕನ್ನಡದ ಅನೇಕ ನಟ ಹಾಗೂ ನಟಿಯರು, ಕನ್ನಡ ಚಿತ್ರರಂಗಕ್ಕಿಂತ ಬೇರೆ ಕಡೆ ಬ್ಯುಸಿಯಾಗ್ತಿದ್ದಾರೆ. ನಿಜಕ್ಕೂ ಪ್ರತಿಭಾವಂತರಾದ ಇವರನ್ನೆಲ್ಲ ಕನ್ನಡ ಚಿತ್ರರಂಗ ಸಮರ್ಥವಾಗಿ ಬಳಸಿಕೊಳ್ತಿಲ್ಲವಾ ಅಥವಾ ಇವರಿಗೆ ಹೊಂದುವಂತಹ ಪಾತ್ರಗಳು ಕನ್ನಡದಲ್ಲಿ ತಯಾರಾಗುತ್ತಿಲ್ವಾ?! ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ:ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಧೂಮಂ' ಟ್ರೇಲರ್​ ರಿಲೀಸ್​

ABOUT THE AUTHOR

...view details