ಕರ್ನಾಟಕ

karnataka

ಕಬ್ಜ ಸಿನಿಮಾ ಪ್ರೇಕ್ಷಕರಿಗೆ ನಿಜವಾಗಿಯೂ ಹಬ್ಬ: ಉಪೇಂದ್ರ

By

Published : Feb 27, 2023, 3:55 PM IST

ನಾನು ಉಪೇಂದ್ರ ಅವರ ಅಭಿಮಾನಿ. ಅವರು ಓಂ ಮೂಲಕ ಇಡೀ ಭಾರತಕ್ಕೆ ರೌಡಿಸಂ ಮಾದರಿಯ ಸಿನಿಮಾ ಪರಿಚಯಿಸಿದವರು ಎಂದು ನಟ ಶಿವರಾಜ್​ಕುಮಾರ್ ಹೇಳಿದರು. ಇದೇ ವೇಳೆ ಉಪೇಂದ್ರ, ಶ್ರೇಯಾ ಶರಣ್ ಮಾತನಾಡಿದರು.

ಕಬ್ಜ ಸಿನಿಮಾ ಹಾಡು ಬಿಡುಗಡೆ ಕಾರ್ಯಕ್ರಮ
ಕಬ್ಜ ಸಿನಿಮಾ ಹಾಡು ಬಿಡುಗಡೆ ಕಾರ್ಯಕ್ರಮ

ಕಬ್ಜ ಹಾಡು ಬಿಡುಗಡೆ ಸಮಾರಂಭ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ ಅದು ಕನ್ನಡದ ‘ಕಬ್ಜ’. ಈಗಾಗಲೇ ಟೀಸರ್ ಹಾಗು ಎರಡು ಹಾಡುಗಳಿಂದ ಜನಮನ ಗೆದ್ದಿರುವ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹೊಸ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ ಚಿತ್ರದ ‘ಚುಮ್ ಚುಮ್ ಚಳಿ ಚಳಿ, ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಜನಸಾಗರದ ನಡುವೆ ಬಿಡುಗಡೆಯಾಗಿತ್ತು.

ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ. ರವಿ ಬಸ್ರೂರ್ ಸಂಗೀತವಿದೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಶಿಡ್ಲಘಟ್ಟದ ಜೂನಿಯರ್ ಕಾಲೇಜಿನ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಕೆ. ಸುಧಾಕರ್, ಶಿಡ್ಲಘಟ್ಟದ ಶಾಸಕ ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರ ಗೌಡ, ಹೆಚ್.ಎಂ.ರೇವಣ್ಣ, ವಿತರಕ ಆನಂದ್ ಪಂಡಿತ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.

ದೊಡ್ಡ ಪರದೆಯಲ್ಲಿ ಟೀಸರ್ ಗೀತೆಗಳನ್ನು ನೋಡಿದ ಜನರು ಸಂಭ್ರಮಿಸಿದರು. ಗುರುಕಿರಣ್ ಗಾಯನ, ರೋಬೋ ಗಣೇಶ್ ಡ್ಯಾನ್ಸ್ ಕಾರ್ಯಕ್ರಮಗಳಿಗೆ ಚಪ್ಪಾಳೆಯ ಮಳೆಗರೆದರು. ಶಿವರಾಜ್ ಕುಮಾರ್ ಮಾತನಾಡಿ, "ನಾನು ಉಪೇಂದ್ರ ಅಭಿಮಾನಿ. ಅವರು ‘ಓಂ’ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಆಧಾರಿತ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡಾ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ" ಎಂದು ಹೇಳಿ ತಂಡಕ್ಕೆ ಶುಭ ಹಾರೈಸಿ ಓಂ ಸಿನಿಮಾದ ಡೈಲಾಗ್ ಹೇಳಿದರು. ಬಳಿಕ "ಚುಮ್ ಚುಮ್" ಗೀತೆಗೆ ಹೆಜ್ಜೆ ಹಾಕಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, "ಇದು ಕಬ್ಜ ಸಿನಿಮಾದ ಹಬ್ಬ. ಈ ಹಾಡು ಬಿಡುಗಡೆ ಸಮಾರಂಭವನ್ನು ಚಂದ್ರು ಅವರಿಗೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡೋಣ ಎಂದಿದ್ದೆ. ಆದರೆ, ಅವರು ತಮ್ಮ ತವರಲ್ಲಿ ಮಾಡಿದ್ದಾರೆ. ಈ ಮೊದಲು ನಾನು "ಆರ್ ಆರ್ ಆರ್" ಚಿತ್ರದ ಆಡಿಯೋ ಲಾಂಚ್ ಮಾಡಿದ್ದೆ. ಅದು ಹಿಟ್ ಆಯ್ತು. ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಕಬ್ಜ ಗೆಲ್ಲಬೇಕು. ಇದನ್ನು ಸದಭಿರುಚಿಯ ಯುವಕರ ಸಿನಿಮಾ ಎನ್ನಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ. ಇಂದು ಎಲ್ಲೆಡೆ ಕನ್ನಡ ಸಿನಿಮಾಗಳನ್ನು ಜನರು ನೋಡಿ‌ ಮೆಚ್ಚಿಕೊಳ್ಳುತ್ತಿದ್ದಾರೆ" ಎಂದರು.

"ಈಗಾಗಲೇ ನಾವು ಎರಡು ಗೀತೆಗಳನ್ನು ಹೈದರಾಬಾದ್, ಚೆನ್ನೈನಲ್ಲಿ ಬಿಡುಗಡೆ ಮಾಡಿದ್ದು, ಈ ಹಾಡನ್ನು ನಮ್ಮೂರು ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಿದ್ದೇವೆ. ಅತಿಥಿಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಅದರಲ್ಲೂ ಗೀತಕ್ಕ ಅವರು ನಮ್ಮ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್‌ ಅನ್ನು ಬಿಡುಗಡೆ ಮಾಡಿದ್ದರು. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ವಿಶೇಷ. ದೊಡ್ಡ ಮಟ್ಟದಲ್ಲಿ ಕನ್ನಡದ ಹೆಮ್ಮೆಯ ಕಬ್ಜ ಸದ್ದು ಮಾಡುತ್ತಿದೆ. ಬಾಲಿವುಡ್‌ನಲ್ಲಿ ಸುಮಾರು 1800ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ" ಎಂದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಹೇಳಿದರು.

ಪ್ರೇಕ್ಷಕರಿಗೆ ಹಬ್ಬ- ಉಪ್ಪಿ: ಚಿತ್ರದ ನಾಯಕ, ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ, "ಆದಷ್ಟು ಬೇಗ ಶಿವಣ್ಣನ ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಈಡೇರಲಿಲ್ಲ. ಕಬ್ಜದ ಬಗ್ಗೆ ಹೇಳುವುದಾದರೆ ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ.ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ ಕಬ್ಜ ಮಾಡಲಿದ್ದಾರೆ. ಚಿತ್ರದಲ್ಲಿ ಅದ್ಭುತಗಳಿವೆ. ಪ್ರೇಕ್ಷಕರಿಗೆ ನಿಜಕ್ಕೂ ಹಬ್ಬ. ಚಂದ್ರು ಕಥೆಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಕಥೆಯೇ ಚಿತ್ರದ ಹೈಲೈಟ್" ಎಂದರು.

"ಇಡೀ ತಂಡ ಸಾಕಷ್ಟು ಶ್ರಮಿಸಿದೆ. ಕಬ್ಜದಲ್ಲಿ ನನಗೊಂದು ಒಳ್ಳೆಯ ಪಾತ್ರವಿದೆ" ಎಂದು ನಾಯಕಿ ಶ್ರೇಯಾ ಶರಣ್ ಹೇಳಿದರು. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅನೂಪ್ ರೇವಣ್ಣ ಸಹ ಸಿನಿಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಅಪ್ಪು ಹುಟ್ಟುಹಬ್ಬವಾದ ಮಾರ್ಚ್ 17ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಬಹು ನಿರೀಕ್ಷಿತ ಕಬ್ಜ ಚಿತ್ರದ 'ಚುಮುಚುಮು ಚಳಿ' ಹಾಡು ಬಿಡುಗಡೆ

ABOUT THE AUTHOR

...view details