ಮೈಸೂರು: ನಗರದ ಎನ್ಟಿಎಂ ಶಾಲೆ ಉಳಿಸಲು ಒಕ್ಕೂಟದ ಕಾರ್ಯಕರ್ತರು ನಡೆಸುತ್ತಿರುವ ನಿರಂತರ ಹೋರಾಟವನ್ನು ಚಲನಚಿತ್ರ ನಟಿ ರಚಿತಾ ರಾಮ್ ಬೆಂಬಲಿಸಿದ್ದಾರೆ. ಪ್ರತಿ ಮಂಗಳವಾರ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ ಕರಪತ್ರ ಹಂಚಿ ಚಳುವಳಿ ನಡೆಸುತ್ತಿರುವ ಒಕ್ಕೂಟದ ಸದಸ್ಯರು ಇಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕರಪತ್ರ ಚಳುವಳಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಚಿತಾ ರಾಮ್ ಅವರಿಗೂ ಸಹ ಕಾರ್ಯಕರ್ತರು ಕರಪತ್ರ ನೀಡಿದರು. ಅದನ್ನು ಓದಿದ ರಚಿತಾ ರಾಮ್, ಒಂದು ಕನ್ನಡ ಶಾಲೆಯ ಉಳಿವಿಗಾಗಿ ನಿರಂತರ ಹೋರಾಟ ನಡೆಯುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರಲ್ಲದೇ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ತಮ್ಮ ಚಳುವಳಿಗೆ ಪೂರಕವಾಗಿ ನಿಂತು ರಾಜ್ಯ ಮಟ್ಟದ ಶೋಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಈ ವಿಷಯ ಪ್ರಸ್ತಾಪಿಸುವ ಮೂಲಕ ಬೆಂಬಲ ನೀಡುವಂತೆ ಒಕ್ಕೂಟದ ಸಂಚಾಲಕರಾದ ಎಂ. ಮೋಹನ್ ಕುಮಾರ್ ಗೌಡ ಮನವಿ ಮಾಡಿಕೊಂಡರು. ರಚಿತಾ ರಾಮ್ ಸ್ಪಂದಿಸಿ, ಪೂರಕ ಬೆಂಬಲ ನೀಡುವುದಾಗಿ ತಿಳಿಸಿದರು. ಇಂದಿನ ಪ್ರತಿಭಟನೆ ಹಾಗೂ ಕರಪತ್ರ ಚಳುವಳಿಯಲ್ಲಿ ಒಕ್ಕೂಟದ ಸದಸ್ಯರಾದ ಹೆಚ್.ಸಿ. ಗೋವಿಂದರಾಜು, ಎಂ.ಎನ್. ಸ್ವಾಮಿಗೌಡ, ಹೆಚ್. ಸ್ವಾಮಿ, ಜೆ. ಉಮೇಶ್, ಎಲ್ಐಸಿ ಸಿದ್ದಪ್ಪ, ಟಿ. ರವಿಗೌಡ, ಟಿ. ರವೀಂದ್ರ, ಉಮೇಶ್, ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಕಿಚ್ಚ ಸುದೀಪ್