ಕರ್ನಾಟಕ

karnataka

ETV Bharat / entertainment

ಹ್ಯಾಪಿ ಬರ್ತ್​​ಡೇ ಅಶ್ವಿನಿ ಪುನೀತ್​ ರಾಜ್​ಕುಮಾರ್: ಅಪ್ಪು​ ಜನ್ಮದಿನದಂದು ಒಟಿಟಿಗೆ ಗಂಧದಗುಡಿ ಎಂಟ್ರಿ - ashwini puneeth rajkumar

ಇದೇ 17ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಗಂಧದಗುಡಿ ರಿಲೀಸ್​ ಆಗಲಿದೆ.

gandhadagudi ott release date
ಒಟಿಟಿಗೆ ಗಂಧದಗುಡಿ ಎಂಟ್ರಿ

By

Published : Mar 14, 2023, 5:11 PM IST

Updated : Mar 14, 2023, 5:35 PM IST

ದಿವಂಗತ ನಟ ಪುನೀತ್​ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 42ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಿರ್ಮಾಪಕಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಪತಿ ಇಲ್ಲದ ನೋವಿನಲ್ಲಿಯೇ ಅಶ್ವಿನಿ ಪುನೀತ್​ ರಾಜ್​ಕುಮಾರ್ ದಿನ ಕಳೆಯುತ್ತಿದ್ದು, ಅಭಿಮಾನಿಗಳು ಅವರಿಗೆ ಶಕ್ತಿ ತುಂಬಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್ ಜನ್ಮದಿನ:ಸ್ಯಾಂಡಲ್​ವುಡ್​ ಸದ್ಯ ಯಶಸ್ಸಿನ ಹುಮ್ಮಸ್ಸಿನಲ್ಲಿ ಮುಂದೆ ಸಾಗುತ್ತಿದೆ. ಒಂದೊಳ್ಳೆ ಕಂಟೆಂಟ್​, ಅದ್ಧೂರಿ ಮೇಕಿಂಗ್​ನಲ್ಲಿ ಸಿನಿಮಾಗಳು ಮೂಡಿಬರುತ್ತಿವೆ. ಯುವ ಕಲಾವಿದರ ಸಿನಿಮಾಗಳಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಬೆಂಬಲ ನೀಡುತ್ತಿದ್ದಾರೆ. ಹೆಚ್ಚಿನ ಸಿನಿಮಾ ಸಮಾರಂಭಗಳಿಗೆ ಭಾಗಿಯಾಗುವ ಮೂಲಕ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಪತಿ ಪುನೀತ್​ ರಾಜ್​ಕುಮಾರ್ ಮಾಡುತ್ತಿದ್ದ ಸಿನಿಮಾ ಕೆಲಸ, ಸಮಾಜ ಸೇವೆಗಳನ್ನೂ ಮುಂದುವರಿಸಿಕೊಂಡು ಹೋಗುತ್ತಾ ಅಭಿಮಾನಿಗಳಿಗೆ ಬಹಳ ಹತ್ತಿರವಾಗಿದ್ದಾರೆ.

ಶೀಘ್ರದಲ್ಲೇ ಒಟಿಟಿಗೆ ಗಂಧದಗುಡಿ ಎಂಟ್ರಿ

ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ನಟನಿಗೆ ತೋರಿದ ಗೌರವ, ಪ್ರೀತಿ, ವಿಶ್ವಾಸವನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್ ಮೇಲೂ ವ್ಯಕ್ತಪಡಿಸುತ್ತಿದ್ದಾರೆ. ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಶುಭ ಕೋರುತ್ತಿದ್ದಾರೆ.

ಒಟಿಟಿಗೆ ಗಂಧದಗುಡಿ ಎಂಟ್ರಿ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಚಿತ್ರ ಗಂಧದ ಗುಡಿ ಕಳೆದ ಸಾಲಿನಲ್ಲಿ ತೆರೆಕಂಡು ಭರ್ಜರಿ ಕಲೆಕ್ಷನ್​ ಮಾಡಿತ್ತು. ಇದೀಗ ಈ ಚಿತ್ರ ಒಟಿಟಿಗೆ ಬರಲು ಸಜ್ಜಾಗಿದೆ. ಇದೇ 17ರಂದು ಅಂದ್ರೆ ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬದಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಗಂಧದ ಗುಡಿ ಪ್ರಸಾರವಾಗಲಿದೆ.

ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದ ಈ ಗಂಧದಗುಡಿ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ನಮ್ಮ ಕರುನಾಡಿನ‌ ಅರಣ್ಯ ಸಂಪತ್ತು,‌ ಪರಿಸರ ಹಾಗೂ ಪ್ರಾಣಿ ಸಂಕುಲದ ಬಗ್ಗೆ ಮಾಹಿತಿ ಒಳಗೊಂಡಿತ್ತು. ಪುನೀತ್ ರಾಜ್‍ಕುಮಾರ್ ಅಭಿನಯಿಸಿದ್ದ ಅವರ ಡ್ರೀಮ್‌ ಪಾಜೆಕ್ಟ್ ಗಂಧದ ಗುಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‌

ಪುನೀತ್​ ರಾಜ್​ಕುಮಾರ್ ದಂಪತಿ

ಪುನೀತ್ ರಾಜ್​ಕುಮಾರ್ ನಮ್ಮೊಂದಿಗಿದ್ದಿದ್ದರೆ, 48ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ''ಗಂಧದಗುಡಿ: ಜರ್ನಿ ಆಫ್‌ ಎ ಟ್ರೂ ಹೀರೋ''ಒಂದು ಉತ್ತಮ ಉಡುಗೊರೆಯಾಗಿದ್ದು, ಪುನೀತ್‌ ರಾಜ್‌ಕುಮಾರ್ ಅವರ ಸಾಹಸ ಮತ್ತು ನಿಸರ್ಗ ಹಾಗೂ ನಮ್ಮ ನೆಲದ ಬಗ್ಗೆ ಅವರಿಗೆ ಇರುವ ಪ್ರೀತಿಯನ್ನು ಇದರಲ್ಲಿ ನೋಡಬಹುದಾಗಿದೆ. ಸಾಕ್ಷ್ಯಚಿತ್ರದಲ್ಲಿ ಪವರ್ ಸ್ಟಾರ್‌ ಹಾಗೂ ಅಮೋಘವರ್ಷ ಕರ್ನಾಟಕದ ಶ್ರೀಮಂತ ವನ್ಯ ಸಂಪತ್ತು, ಸುಂದರ ತಾಣಗಳು, ಜಲಪಾತಗಳು ಮತ್ತು ದಂತಕಥೆಗಳನ್ನು ಅನಾವರಣಗೊಳಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ, ನೀರಿನ ಸಂರಕ್ಷಣೆ ಮತ್ತು ಅರಣ್ಯ ನಾಶಕ್ಕೆ ಸಂಬಂಧಿಸಿದ ಪರಿಸರ ಕಳವಳಗಳನ್ನೂ ಇಬ್ಬರೂ ಚರ್ಚಿಸಿದ್ದಾರೆ. ಈ ಚಿತ್ರದಲ್ಲಿ ತಂದೆ ಡಾ. ರಾಜ್‌ಕುಮಾರ್‌ ಜೊತೆಗೆ ಪುನೀತ್‌ ಅವರಿಗೆ ಇದ್ದ ಬಂಧವೂ ಅನಾವರಣಗೊಂಡಿದೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಭಿಪ್ರಾಯ:ಪ್ರೈಮ್ ವಿಡಿಯೋದಲ್ಲಿ ಗಂಧದಗುಡಿ ಸ್ಟ್ರೀಮಿಂಗ್‌ ಬಗ್ಗೆ ಮಾತನಾಡಿರೋ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಈ ಸಿನಿಮಾ ಅಪ್ಪು ಕನಸಿನ ಯೋಜನೆ. ಪರಿಸರ ಸಂರಕ್ಷಣೆಯ ಬಗ್ಗೆ ಏನಾದರೂ ಮಾಡಬೇಕು ಎಂಬ ಆಸೆ ಅವರಲ್ಲಿತ್ತು. ಅಪ್ಪು ಅಭಿಮಾನಿಗಳು ಮತ್ತು ಕರ್ನಾಟಕದ ಪ್ರೇಕ್ಷಕರು ಈ ಸಿನಿಮಾವನ್ನು ಬಹಳ ಮೆಚ್ಚಿದ್ದಾರೆ. ಈ ಸುಂದರ ಪಯಣವನ್ನು ಇಡೀ ವಿಶ್ವವೇ ನೋಡಬೇಕು ಎಂದು ನಾವು ಬಯಸುತ್ತೇವೆ. ಈ ಸಿನಿಮಾ ಪಯಣದಲ್ಲಿ ನಮಗೆ ನೆರವು ನೀಡಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ಈ ಹಿಂದೆ ಹಲವು ಬಾರಿ ನಾವು ಪ್ರೈಮ್ ವಿಡಿಯೋ ಜೊತೆಗೆ ಸಹಭಾಗಿತ್ವ ಸಾಧಿಸಿದ್ದೇವೆ ಮತ್ತು ನಮ್ಮ ದೀರ್ಘಕಾಲೀನ ಸಹಭಾಗಿತ್ವದ ಮೂಲಕ ಅಪ್ಪು ಸಿನಿಮಾವನ್ನು ಅವರ ಜನ್ಮದಿನೋತ್ಸವದಂದೇ ಇಡೀ ದೇಶಕ್ಕೆ ತಲುಪಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಅಮೋಘವರ್ಷ ಹೀಗಂದ್ರು..ನಿರ್ದೇಶಕ ಅಮೋಘವರ್ಷ ಹೇಳುವಂತೆ ಪ್ರೇಕ್ಷಕರಿಂದ ಗಂಧದಗುಡಿ ಅಪಾರ ಪ್ರೀತಿಯನ್ನು ಗಳಿಸಿರುವುದು ಅತ್ಯಂತ ಖುಷಿಯ ಸಂಗತಿ. ಪುನೀತ್‌ ರಾಜ್​ಕುಮಾರ್​ ಜೊತೆಗೆ ಕೆಲಸ ಮಾಡಿದ ಅದ್ಭುತ ಅನುಭವ ನನ್ನದಾಗಿದ್ದಕ್ಕೆ ನಾನು ಅದೃಷ್ಟವಂತ. ಅವರು ಜೀವನದ ಎಲ್ಲ ಸಂಗತಿಗಳ ಬಗ್ಗೆ ಅತ್ಯಂತ ಕುತೂಹಲವನ್ನು ಹೊಂದಿದ್ದರು. ಪುನೀತ್‌ ಅವರ ನಿಜವಾದ ವ್ಯಕ್ತಿತ್ವವನ್ನು ಈ ಸಿನಿಮಾ ಅನಾವರಣಗೊಳಿಸಿದೆ. ನಮ್ಮ ನಾಡಿನ ಬಗ್ಗೆ ಅವರಿಗೆ ಇರುವ ಪ್ರೀತಿ ಈ ಸಿನಿಮಾದಲ್ಲಿ ಕಾಣಿಸಿದೆ. ಅವರಿಗೆ ಇಷ್ಟವಾದ ಮತ್ತು ಕಾಳಜಿ ಇರುವ ಸಂಗತಿಗಳ ಬಗ್ಗೆ ಅವರು ಮಾತನಾಡಿದ್ದನ್ನು ಹೆಚ್ಚಿನ ಪ್ರೇಕ್ಷಕರು ವೀಕ್ಷಿಸಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಖುಷಿ ಇದೆ. ದೇಶದ ಅಪಾರ ಪ್ರೇಕ್ಷಕರಿಗೆ ಈ ಸಾಕ್ಷ್ಯಚಿತ್ರ ಪ್ರೈಮ್ ವಿಡಿಯೋದ ಮೂಲಕ ಲಭ್ಯವಾಗುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆಂದು ತಿಳಿಸಿದರು.

ಅಜನೀಶ್‌ ಲೋಕನಾಥ್‌ ಪ್ರತಿಕ್ರಿಯೆ...ಸಿನಿಮಾದ ಡಿಜಿಟಲ್‌ ಪ್ರೀಮಿಯರ್‌ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಬಿ. ಅಜನೀಶ್‌ ಲೋಕನಾಥ್‌, ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಸಂಗೀತ ನಿರ್ದೇಶಕನಾಗಿ ಗಂಧದಗುಡಿ ನನ್ನ ಮೊದಲ ಅನುಭವವಾಗಿದೆ. ಈ ವಿಶೇಷ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿರುವುದು ನನಗೆ ಅದೃಷ್ಟದ ಸಂಗತಿ. ಇದಕ್ಕೆ ಸಂಗೀತ ಸಂಯೋಜನೆ ಮಾಡುವುದು ಅತ್ಯಂತ ವಿಶಿಷ್ಟವಾಗಿತ್ತು. ಸಿನಿಮಾದಲ್ಲಿ ಪ್ರದರ್ಶಿತವಾದ ಪರಿಸರಕ್ಕೆ ಹೊಸ ಅನುಭವವನ್ನು ಕಟ್ಟಿಕೊಡಲು ಹಲವು ಜಾನಪದ ಟ್ಯೂನ್‌ಗಳನ್ನು ನಾನು ಅಳವಡಿಸಿದ್ದೇನೆ. ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮ್‌ ಆಗುವ ಮೂಲಕ ಇನ್ನಷ್ಟು ಜನರನ್ನು ಈ ಅನುಭವ ತಲುಪಲಿದೆ ಎಂದರು.

ಇದನ್ನೂ ಓದಿ:ಆಸ್ಕರ್​​ ಗೆದ್ದ ನಾಟು ನಾಟು: ಗೀತೆ ರಚನೆಕಾರ ಚಂದ್ರಬೋಸ್ ಎಕ್ಸ್​ಕ್ಲೂಸಿವ್ ಸಂದರ್ಶನ ಇಲ್ಲಿದೆ

ಥಿಯೇಟರ್‌ಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆದ ಈ ಚಿತ್ರದಲ್ಲಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಾರ್ಚ್‌ 17 ರಿಂದ ಅಂದ್ರೆ ಪವರ್ ಸ್ಟಾರ್ ಜನ್ಮದಿನದಂದು ಈ ಸಿನಿಮಾ ಅಮೆಜಾನ್ ಪ್ರೈಮ್​​ನಲ್ಲಿ ಪ್ರಸಾರ ಆಗಲಿದೆ. ಈ ಮೂಲಕ ಎಲ್ಲರೂ ತಮ್ಮ ಮನೆಯಲ್ಲಿ ಕುಟುಂಬ ಸಮೇತ ಈ ಚಿತ್ರವನ್ನು ನೋಡಬಹುದಾಗಿದೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್ ಟ್ವೀಟ್:ವಿಶ್ವದ ಪ್ರತಿಷ್ಟಿತ ಪ್ರಶಸ್ತಿಯನ್ನು ಭಾರತದ ಮನೋರಂಜನಾ ಕ್ಷೇತ್ರ ಪಡೆದುಕೊಂಡು ದೇಶದ ಕೀರ್ತಿ ಹೆಚ್ಚಿಸಿದೆ. ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ, ಹಾಗೆಯೇ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನಲ್ಲಿ ಮೂಡಿಬಂದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದು, ಎರಡೂ ತಂಡಗಳಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅಭಿನಂದನೆ ತಿಳಿಸಿದ್ದಾರೆ. ''ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ' ವಿಭಾಗದಲ್ಲಿ ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಚಿತ್ರಕ್ಕೆ ಲಭಿಸಿರುವುದು ಇತಿಹಾಸ ಹಾಗೂ ಹೆಮ್ಮಯ ವಿಷಯ. ಚಿತ್ರ ನಿರ್ಮಾಣದ ಪ್ರತಿಯೊಬ್ಬ ಸದಸ್ಯರಿಗೂ ಶುಭಹಾರೈಕೆಗಳು'' ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಎಸ್​​ಆರ್​ಕೆ ಅಪ್ಪುಗೆ ನಿರೀಕ್ಷೆಯಲ್ಲಿ ಗುನೀತ್ ಮೊಂಗಾ.. ಪಠಾಣ್​ ನಟನಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ

ಮತ್ತೊಂದು ಟ್ವೀಟ್​ನಲ್ಲಿ, ''ಯಶಸ್ಸಿನ ಹಾದಿಯನ್ನು ತನ್ನದಾಗಿಸಿಕೊಂಡ ಆರ್ ಆರ್ ಆರ್ ಚಿತ್ರದ ಹಳ್ಳಿ ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಗಳಿಸಿ ಭಾರತದ ಕೀರ್ತಿಯನ್ನು ಎತ್ತಿಹಿಡಿದಿದೆ. ಚಿತ್ರತಂಡಕ್ಕೆ ಶುಭಹಾರೈಕೆಗಳು'' ಎಂದು ಟ್ವೀಟ್ ಮಾಡಿದ್ದಾರೆ.

Last Updated : Mar 14, 2023, 5:35 PM IST

ABOUT THE AUTHOR

...view details