ಕರ್ನಾಟಕ

karnataka

By

Published : Sep 28, 2022, 7:21 PM IST

ETV Bharat / entertainment

ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿ ಅನಾವರಣವೇ ಕಾಂತಾರ: ನಿರ್ಮಾಪಕ ವಿಜಯ್ ಕಿರಗಂದೂರ್

ನಮ್ಮ ಹೊಂಬಾಳೆ ಸಂಸ್ಥೆಯು ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ತಿಳಿಸಿದ್ದಾರೆ.

ಕಾಂತಾರ ಸಿನಿಮಾ ತಂಡ
ಕಾಂತಾರ ಸಿನಿಮಾ ತಂಡ

ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ ಇನ್ನೊಂದು ಚಿತ್ರ ಕಾಂತಾರ ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸುವ ಈ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶನ ಮಾಡಿದ್ದಾರೆ.

ನಿರ್ಮಾಪಕ ವಿಜಯ್ ಕಿರಗಂದೂರ್

ಕಾಂತಾರ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ ಎನ್ನುವ ರಿಷಬ್, ‘ನಾನು ಊರಿನಲ್ಲಿ ಇದ್ದಾಗ ಕೆಲವು ಘಟನೆಗಳನ್ನು ನೋಡಿದ್ದೆ. ಅರಣ್ಯ ಇಲಾಖೆ, ಭೂಮಿ ಒತ್ತುವರಿ ... ಹೀಗೆ ಹಲವು ವಿಷಯಗಳ ಸುತ್ತ ಈ ಚಿತ್ರ ಸುತ್ತುತ್ತದೆ. ದಕ್ಷಿಣ ಕನ್ನಡದಲ್ಲಿ ಭೂಮಿ ಎಂದರೆ ಅದು ಬರೀ ಭೂಮಿಯಲ್ಲ, ಅದೊಂದು ಸಂಸ್ಕೃತಿ. ಅಲ್ಲಿನ ದೈವ, ಕಂಬಳ, ಭೂತಕೋಲ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಈ ಎಲ್ಲದರ ಕುರಿತು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು.

ರಿಷಬ್ ಶೆಟ್ಟಿ

ಈ ಚಿತ್ರದ ವಿಶೇಷತೆಯೆಂದರೆ, ಅದು ಕಂಬಳದ ದೃಶ್ಯಗಳು. ಚಿತ್ರದಲ್ಲಿ ರಿಷಬ್ ಕೋಣ ಓಡಿಸಿದ್ದು, ಅದೇ ಚಿತ್ರದ ಹೈಲೈಟ್ ಎಂದು ಹೇಳಲಾಗುತ್ತಿದೆ. ‘ಇಲ್ಲಿ ನಾಯಕ ಎಂಥವನು ಎಂದು ತೋರಿಸುವುದಕ್ಕೆ ಕಂಬಳದ ದೃಶ್ಯವೂ ಇದೆ. ಈ ಚಿತ್ರಕ್ಕಾಗಿ ಒಂದಿಷ್ಟು ದಿನ ಅಭ್ಯಾಸ ಮಾಡಿ ಕಂಬಳದಲ್ಲಿ ಭಾಗವಹಿಸಿದೆ. ಊರಿನ ನಮ್ಮನೆ ಗದ್ದೆಯಲ್ಲೇ ಕಂಬಳದ ಚಿತ್ರೀಕರಣದ ನಡೆದಿದ್ದು. ಇಡೀ ಚಿತ್ರದ ಚಿತ್ರೀಕರಣ ನಮ್ಮ ಊರಿನ ಸುತ್ತಮುತ್ತ ಆಗಿದೆ’ ಎನ್ನುತ್ತಾರೆ ರಿಷಬ್.

ಚಿತ್ರವನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು ಮಾತನಾಡಿ, ‘ನಮ್ಮ ಹೊಂಬಾಳೆ ಸಂಸ್ಥೆಯು ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಡುವುದರ ಜೊತೆಗೆ ಒಂದೊಳ್ಳೆಯ ಸಂದೇಶವನ್ನು ಹೇಳಿದ್ದಾರೆ.

ಈ ಚಿತ್ರ ಸಹ ಹೊಂಬಾಳೆಯ ಇತರೆ ಚಿತ್ರಗಳಂತೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಮತ್ತು ಕನ್ನಡಿಗರು ಈ ಚಿತ್ರವನ್ನು ಅಪ್ಪಿಕೊಂಡು, ನಮ್ಮನ್ನು ಆಶೀರ್ವದಿಸುತ್ತಾರೆ’ ಎಂಬ ನಂಬಿಕೆ ಇದೆ ಎನ್ನುತ್ತಾರೆ.

ಕಾಂತಾರ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಚಿತ್ರವನ್ನು ರಾಜ್ಯದಲ್ಲಿ ಕೆಆರ್​ಜಿ ಸ್ಟುಡಿಯೋಸ್ ಸಂಸ್ಥೆ ವಿತರಿಸುತ್ತಿದೆ.

ಓದಿ:ದಸರಾ ಧಮಾಕ: ಮನೆಯಲ್ಲೇ ಕುಟುಂಬಸ್ಥರೊಂದಿಗೆ ನೋಡಬಹುದು ಗಾಳಿಪಟ 2 ಸಿನಿಮಾ

ABOUT THE AUTHOR

...view details