ಕರ್ನಾಟಕ

karnataka

ETV Bharat / entertainment

ಕೋಣ ಏರಿ 'ಕರಾವಳಿ'ಗೆ ಬಂದ ಪ್ರಜ್ವಲ್​ ದೇವರಾಜ್​: ಕುತೂಹಲ ಹೆಚ್ಚಿಸಿದ ಫಸ್ಟ್​ ಲುಕ್​ ಪ್ರೋಮೋ

PD40 Promo: ಪ್ರಜ್ವಲ್​ ದೇವರಾಜ್​ ಅಭಿನಯದ 40ನೇ ಸಿನಿಮಾಗೆ 'ಕರಾವಳಿ' ಎಂದು ಶೀರ್ಷಿಕೆ ಇಡಲಾಗಿದ್ದು, ಫಸ್ಟ್​ ಲುಕ್​ ಪ್ರೋಮೋ ಬಿಡುಗಡೆಯಾಗಿದೆ.

By ETV Bharat Karnataka Team

Published : Dec 10, 2023, 6:07 PM IST

Prajwal devaraj 40th movie karavali first look promo released
ಪ್ರಜ್ವಲ್​ ದೇವರಾಜ್​ 40ನೇ ಸಿನಿಮಾಗೆ 'ಕರಾವಳಿ' ಶೀರ್ಷಿಕೆ: ಕುತೂಹಲ ಹೆಚ್ಚಿಸಿದ ಫಸ್ಟ್​ ಲುಕ್​ ಪ್ರೋಮೋ

ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್​ ಅಭಿನಯದ 40ನೇ ಸಿನಿಮಾಗೆ ಟೈಟಲ್​ ಫಿಕ್ಸ್​ ಆಗಿದೆ. ಚಿತ್ರತಂಡ ಶೀರ್ಷಿಕೆ ಜೊತೆಗೆ ಫಸ್ಟ್​ ಲುಕ್​ ಪೋಸ್ಟರ್​ ಮತ್ತು ಪ್ರೋಮೋವನ್ನು ಬಿಡುಗಡೆ ಮಾಡಿದೆ. ರೋಚಕ ದೃಶ್ಯಗಳ ಜೊತೆಗೆ ಸಿನಿಮಾದ ಟೈಟಲ್​ ಅನ್ನು ಘೋಷಿಸಲಾಗಿದೆ. 'ಕರಾವಳಿ' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಈ ಮೂಲಕ ಕರಾವಳಿ ಭಾಗದ ಮತ್ತೊಂದು ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರಲು ಸಜ್ಜಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಫಸ್ಟ್​ ಲುಕ್​ ಪ್ರೋಮೋ ಮೈ ನವಿರೇಳಿಸುವಂತಿದೆ.

ಪ್ರೋಮೋದಲ್ಲೇನಿದೆ?:ಕಥೆಯ ಒಂದೆಳೆಯನ್ನು ಪ್ರೋಮೋದಲ್ಲಿ ಬಿಚ್ಚಿಡಲಾಗಿದೆ. ಮನುಷ್ಯ ಮತ್ತು ಪ್ರಾಣಿ ಎಂಬ ಹಿನ್ನೆಲೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರೋಮೋದ ಹಿನ್ನೆಲೆಯಲ್ಲಿ ಕೇಳಿಸುವ ಯಕ್ಷಗಾನದ ಧ್ವನಿಯಿಂದ ಸಿನಿಮಾದ ರೋಚಕತೆ ಹೆಚ್ಚಿದೆ. ರಕ್ತಮಯವಾದ ದೃಶ್ಯಗಳು, ಅಳು, ನಗು, ಕೋಪ, ರಾತ್ರಿ ಸಮಯದಲ್ಲಿನ ಸನ್ನಿವೇಶಗಳನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಕಂಬಳದ ಕೋಣದ ಮೇಲೆ ಕುಳಿತು ಪ್ರಜ್ವಲ್​ ದೇವರಾಜ್​ ಎಂಟ್ರಿ ಕೊಡುವುದಂತೂ ಸಖತ್​ ಮಾಸ್​ ಆಗಿದೆ. ಒಟ್ಟಿನಲ್ಲಿ, ಕರಾವಳಿ ಭಾಗದ ಸಂಸ್ಕೃತಿ, ಯಕ್ಷಗಾನ, ಕಂಬಳ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ ಎಂಬುದನ್ನು ಪ್ರೋಮೋ ನೋಡಿಯೇ ಅಂದಾಜಿಸಬಹುದು.

ಗುರುದತ್ ಗಾಣಿಗ ನಿರ್ದೇಶನ:ಪ್ರಜ್ವಲ್ ದೇವರಾಜ್ ಅಭಿನಯದ ಈ ಸಿನಿಮಾಗೆ 'ಅಂಬಿ ನಿಂಗ್​ ವಯಸಾಯ್ತೋ' ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಗುರುದತ್ ನಿರ್ದೇಶನದ ಎರಡನೇ ಸಿನಿಮಾ. ಮೊದಲ ಚಿತ್ರ 'ಅಂಬಿ ನಿಂಗ್​ ವಯಸಾಯ್ತೋ' 2018 ರಲ್ಲಿ ಬಿಡುಗಡೆಯಾಗಿತ್ತು. ಬಳಿಕ ಗುರುದತ್ ಯಾವುದೇ ಸಿನಿಮಾ ಮಾಡಿರಲಿಲ್ಲ. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ ಅಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದರು. ಇದೀಗ ತಮ್ಮ ಎರಡನೇ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ತೆರೆ ಹಿಂದಿನ ರೂವಾರಿಗಳು: ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್​ಗಳು ಹಾಗೆಯೇ ಪ್ರೋಮೋ ನೋಡಿದರೆ, 'ಕರಾವಳಿ' ಭಾಗದ ಹೆಮ್ಮೆ ಕಂಬಳದ ಕುರಿತಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಗೊತ್ತಾಗುತ್ತದೆ. ಚಿತ್ರವನ್ನು ಗುರುದತ್​ ಗಾಣಿಗ ಅವರು ನಿರ್ದೇಶಿಸುವುದರ ಜೊತೆಗೆ ವಿಕೆ ಫಿಲ್ಮ್ಸ್​ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್​ ಬಂಡಿಯಪ್ಪ ಕಥೆ, ಅಭಿಮನ್ಯು ಸದಾನಂದ ಛಾಯಾಗ್ರಹಣ ನಿರ್ದೇಶನ, ಸಚಿನ್​ ಬಸ್ರೂರ್​ ಸಂಗೀತ, ಪ್ರವೀಣ್​ ಕಲ್​ ಸಂಕಲನ ಚಿತ್ರಕ್ಕಿರಲಿದೆ.

ಕರಾವಳಿ ಭಾಗದ ಕಥೆ ಆಗಿರುವುದರಿಂದ ಮಂಗಳೂರು ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ಈವರೆಗೂ ಕಾಣದ ಹೊಸ ಲುಕ್​ನಲ್ಲಿ ಪ್ರಜ್ವಲ್​ ದೇವರಾಜ್​ ಮಿಂಚಲಿದ್ದಾರೆ. ಇಂತಹದ್ದೊಂದು ಸುಂದರ ಕಥೆಗೆ ನಾಯಕಿ ಯಾರಾಗ್ತಾರೆ? ಅನ್ನೋದು ಅಭಿಮಾನಿಗಳಲ್ಲಿರುವ ಸದ್ಯದ ಪ್ರಶ್ನೆ. ಇದಕ್ಕೆ ಶೀಘ್ರದಲ್ಲೇ ಚಿತ್ರತಂಡ ಉತ್ತರಿಸುವ ನಿರೀಕ್ಷೆಯಿದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆಯಾ ಅಥವಾ ಮತ್ತೂ ಒಂದು ವರುಷ ಆಗಬಹುದೇ? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ:ಮಾಡೆಲ್ ಸೋನಾ ಬೇಬಿ ಜೊತೆ ಸಖತ್ ಹೆಜ್ಜೆ ಹಾಕಿದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

ABOUT THE AUTHOR

...view details