ಕರ್ನಾಟಕ

karnataka

Sushant Singh: ಸುಶಾಂತ್ ಸಿಂಗ್​ ಮೂರನೇ ಪುಣ್ಯಸ್ಮರಣೆ..​ ಸಹೋದರಿಯಿಂದ ಹೃದಯಸ್ಪರ್ಶಿ ಅಕ್ಷರ ನಮನ

By

Published : Jun 14, 2023, 1:07 PM IST

Updated : Jun 14, 2023, 8:00 PM IST

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಮೃತಪಟ್ಟು ಇಂದಿಗೆ ಮೂರು ವರ್ಷವಾಗಿದೆ. 3ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಸಹೋದರನಿಗೆ ಶ್ವೇತಾ ಹೃದಯಸ್ಪರ್ಶಿ ಅಕ್ಷರ ನಮನವನ್ನು ಸಲ್ಲಿಸಿದ್ದಾರೆ.

Sushant Sing
ಸುಶಾಂತ್ ಸಿಂಗ್

ಮೂರು ವರ್ಷಗಳ ಹಿಂದೆ ಇದೇ ದಿನದಂದು ಬಾಲಿವುಡ್​ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು.​ ನಟ ಸುಶಾಂತ್​ ಸಿಂಗ್​ ರಜಪೂತ್​ ಮೃತದೇಹ ಮುಂಬೈನ ಅವರ ನಿವಾಸದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಬಾಲಿವುಡ್​ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿತ್ತು.

ಇಂದಿಗೆ ಯುವ ನಟ ನಿಧನ ಹೊಂದಿ ಮೂರು ವರ್ಷವಾಗಿದೆ. ಸ್ನೇಹಿತರು, ಕುಟುಂಬಸ್ಥರು, ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕೂಡ ಸುಶಾಂತ್​ ಅವರ ಅಪಾರವಾಗಿ ನೆನೆಯುತ್ತಿದ್ದಾರೆ. ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಬುಧವಾರ ಸುಶಾಂತ್​ ಮೂರನೇ ಪುಣ್ಯತಿಥಿಯಂದು ಅವರಿಗೆ ಸಂತಾಪ ಸೂಚಿಸಿದ್ದಾರೆ. ಎಸ್​ಎಸ್​ಆರ್​ ಅವರ ಕೊಲೇಜ್​ ಫೋಟೋಗಳನ್ನು ಹಂಚಿಕೊಂಡು, ಹೃದಯಸ್ಪರ್ಶಿಯಾಗಿ ಕ್ಯಾಪ್ಶನ್​ ಬರೆದಿದ್ದಾರೆ.

"ಲವ್​ ಯೂ ಭಾಯ್​, ಮತ್ತು ನಿಮ್ಮ ಬುದ್ಧಿವಂತಿಕೆಗೆ ಸೆಲ್ಯೂಟ್​. ನಿಮ್ಮನ್ನು ಎಲ್ಲಾ ಕ್ಷಣದಲ್ಲೂ ಮಿಸ್​ ಮಾಡಿಕೊಳ್ಳುತ್ತೇನೆ. ಆದರೆ ನೀವು ಈಗ ನನ್ನ ಭಾಗವಾಗಿದ್ದೀರಿ ಎಂದು ನನಗೆ ತಿಳಿದಿದೆ. ನೀವು ನನ್ನ ಉಸಿರಿನಲ್ಲೇ ಬೆರೆತು ಹೋಗಿದ್ದೀರಿ. #SushantIsAlive #WeAreSushant" ಎಂದು ಸಹೋದರ ಸುಶಾಂತ್​ಗೆ ಶ್ವೇತಾ ಹೃದಯಸ್ಪರ್ಶಿ ಅಕ್ಷರ ನಮನವನ್ನು ಸಲ್ಲಿಸಿದ್ದಾರೆ.

ಎಸ್​ಎಸ್​ಆರ್​ ಅಭಿಮಾನಿಗಳು ಶ್ವೇತಾ ಸಿಂಗ್​ ಪೋಸ್ಟ್​ಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಅಭಿಮಾನಿಯೊಬ್ಬರು, "ನಾವು ಅವರನ್ನು ಜೀವಂತವಾಗಿರಿಸಿಕೊಳ್ಳುತ್ತೇವೆ. ಅವರು ಎಲ್ಲಿಯೂ ಹೋಗಿಲ್ಲ, ಯಾವಾಗಲೂ ನಮ್ಮ ಹೃದಯ ಮತ್ತು ಆತ್ಮಗಳಲ್ಲಿ ಜೀವಂತವಾಗಿರುತ್ತಾರೆ. ಅವರಲ್ಲಿದ್ದ ಉತ್ತಮ ಗುಣವೆಂದರೆ ತುಂಬಾ ಧನಾತ್ಮಕವಾಗಿರುವುದು ಮತ್ತು ಯಾರಿಗೂ ಕೆಟ್ಟದ್ದನ್ನು ಹೇಳದ ಮತ್ತು ಯೋಚಿಸದ ವ್ಯಕ್ತಿಯಾಗಿರುವುದು. ಹಾಗಾಗಿಯೇ ಅವರು ಇಂದಿಗೂ ಲಕ್ಷಾಂತರ ಅಭಿಮಾನಿಗಳ ಜೊತೆಯೇ ಇದ್ದಾರೆ" ಎಂದು ಕಮೆಂಟ್​ ಮಾಡಿದ್ದಾರೆ.

ಸುಶಾಂತ್​ ಸಿನಿ ಪಯಣ:ದೆಹಲಿಯಲ್ಲಿ ಇಂಜಿನಿಯರ್​ ಓದುತ್ತಿರುವಾಗಲೇ ಸುಶಾಂತ್​ ಮುಂಬೈನ ಬದಿರಾ ಬಬ್ಬಾರ್​ ನಾಟಕ ಕ್ಷೇತ್ರಕ್ಕೆ ಸೇರಿಕೊಂಡರು. ನಂತರದಲ್ಲಿ ಡ್ಯಾನ್ಸ್​ ಅಕಾಡೆಮಿ ಒಂದರಲ್ಲಿ ಬಾಲಿವುಡ್​ ನಂ.1 ನಟಿಯಾಗಿದ್ದ ಐಶ್ವರ್ಯಾ ರೈ ಜೊತೆ ಫಿಲ್ಮ್​ಫೇರ್​ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುವ ಅವಕಾಶವನ್ನು ಪಡೆದರು. ಬಳಿಕ ಅದೃಷ್ಣ ಎಂಬಂತೆ ಏಕ್ತಾ ಕಪೂರ್​ ನಿರ್ದೇಶನದ ಪವಿತ್ರ ರಿಷ್ತಾ ಧಾರಾವಾಹಿ ಮೂಲಕ ಭಾರತದ ತುಂಬೆಲ್ಲಾ ಕಿರುತೆರೆಯ ನೆಚ್ಚಿನ ನಟರಾದರು.

2013 ರಲ್ಲಿ 'ಕೋಯಿ ಪೋ ಚೆ' ಚಿತ್ರದೊಂದಿಗೆ ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟರು. ಆಮೇಲೆ ಅಮೀರ್​ ಖಾನ್​ ಅಭಿನಯದ ರಾಜ್​ಕುಮಾರ್​ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರದಲ್ಲಿ ಸರ್ಫರಾಜ್​ ಪಾತ್ರ ಸುಶಾಂತ್​ಗೆ ಅವಕಾಶಗಳ ಬಾಗಿಲು ತೆರೆದುಕೊಟ್ಟಿತು. ಅದಾದ ನಂತರ ಎಂಎಸ್​ ಧೋನಿ ಬಯೋಪಿಕ್​ ಸಿನಿಮಾದ ಮೂಲಕ ದೇಶವ್ಯಾಪಿಯಾಗಿ ಅಭಿಮಾನಿಗಳನ್ನು ಸಂಪಾದಿಸಿದ ಯುತ್​ ಐಕಾನ್​ ಆದರು.

ಅಲ್ಲದೇ ಈ ಸಿನಿಮಾ ಸುಶಾಂತ್​ ಸ್ಟಾರ್​ ಗಿರಿಯನ್ನೇ ಬದಲಾಯಿಸಿಬಿಟ್ಟಿತು. ನಂತರದಲ್ಲಿ ಕೇದಾರ್​ನಾಥ್​, ಚಿಚ್ಚೋರೆ ಬಾಕ್ಸ್​ಆಫೀಸ್​ನಲ್ಲಿ ಸೌಂಡ್​ ಮಾಡುವುದರೊಂದಿಗೆ ಸುಶಾಂತ್​ ನಟನಾ ಕೌಶಲ್ಯವನ್ನು ಜಗತ್ತಿಗೆ ತೋರಿಸಿದ ಚಿತ್ರಗಳಾದವು. ಹೀಗೆ ಸುಮಾರು 15 ಸಿನಿಮಾಗಳಲ್ಲಿ ಸುಶಾಂತ್​ ನಟಿಸಿದ್ದರು. ಅವರ ಕೊನೆಯ ಚಿತ್ರವೇ ದಿಲ್​ ಬೆಚಾರ.

ಗುರುವಿಲ್ಲದೇ ಗುರಿ ತಲುಪಿದ ಸುಶಾಂತ್​ ಸಿಂಗ್​ಗೆ ಅನೇಕ ಸಾಧನೆ ಮಾಡುವ ತುಡಿತವಿತ್ತು. ಆದರೆ ವಿಧಿ ಅವರ ಕನಸಿನ ವಿರುದ್ಧವಾಗಿಯೇ ಆಟವಾಡಿತು. ಆದರೆ, ಸುಶಾಂತ್ ನಿಧನರಾಗಿ ಮೂರು ವರ್ಷವಾದರೂ, ಅವರ ಸಾವಿಗೆ ನಿಖರವಾಗಿ ಕಾರಣವೇನು ಎಂಬ ರಹಸ್ಯ ಬಯಲಾಗಿಲ್ಲ.

ಇದನ್ನೂ ಓದಿ:ಶುರುವಾಯಿತು 'ಆದಿಪುರುಷ್'​ ಸಿನಿಮಾ ಕ್ರೇಜ್​: ಪ್ರಮುಖ ನಗರಗಳಲ್ಲಿ 2 ಸಾವಿರ ರೂಗೆ ಟಿಕೆಟ್​ ಮಾರಾಟ

Last Updated : Jun 14, 2023, 8:00 PM IST

ABOUT THE AUTHOR

...view details