ಕರ್ನಾಟಕ

karnataka

ಸಂತೋಷ್ ಅಭಿನಯದ 'ಸತ್ಯಂ' ಸಿನಿಮಾಗೆ ಸಚಿವ ಶಿವರಾಜ್ ತಂಗಡಗಿ ಸಾಥ್​

By ETV Bharat Karnataka Team

Published : Dec 20, 2023, 2:23 PM IST

'ಕರಿಯ 2' ಖ್ಯಾತಿಯ ಸಂತೋಷ್ ಅಭಿನಯದ 'ಸತ್ಯಂ' ಚಿತ್ರತಂಡಕ್ಕೆ ಸಚಿವ ಶಿವರಾಜ್ ತಂಗಡಗಿ ಸಾಥ್​ ನೀಡಿದ್ದಾರೆ.

Minister Shivaraj Tangadagi supports 'Sathyam' movie
'ಸತ್ಯಂ' ಸಿನಿಮಾಗೆ ಸಚಿವ ಶಿವರಾಜ್ ತಂಗಡಗಿ ಸಾಥ್​

ಕರಿಯ 2 ಸಿನಿಮಾ ಖ್ಯಾತಿಯ ಸಂತೋಷ್ ಅಭಿನಯದ ಮುಂದಿನ ಬಹುನಿರಿಕ್ಷಿತ ಚಿತ್ರ 'ಸತ್ಯಂ'. ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರೋ 'ಸತ್ಯಂ' ಚಿತ್ರದ ಆಡಿಯೋವನ್ನು ಗಂಗಾವತಿಯ ಜಗಜೀವನ ರಾಮ್ ಸರ್ಕಲ್​ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಸಚಿವರಾದ ಶಿವರಾಜ್ ತಂಗಡಗಿ ಈ ಸತ್ಯಂ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ‌.

'ಸತ್ಯಂ' ಸಿನಿಮಾ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಬಾಂಧವ್ಯದ ಕಥೆ ಇಟ್ಟುಕೊಂಡು ಉತ್ತರ ಕರ್ನಾಟಕದವರೇ ಆದ ನಿರ್ಮಾಪಕರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ಭಾಗದವರಾದ ಇವರನ್ನು ನಾವೆಲ್ಲಾ ಸೇರಿ ಗೆಲ್ಲಿಸಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗುವಂತಾಗಲಿ ಎಂದು ತಿಳಿಸಿದರು.

ಸತ್ಯಂ ಚಿತ್ರವನ್ನ ನಿರ್ದೇಶನ ಮಾಡಿರೋ ಅಶೋಕ್ ಕಡಬ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ, ನಮ್ಮ ಜನರ ಸಮ್ಮುಖದಲ್ಲಿ ಆಡಿಯೋ ಬಿಡುಗಡೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಉತ್ತರ ಕರ್ನಾಟಕದ ಹೆಚ್ಚು ಜನರು ಕನ್ನಡ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಹಾಗಾಗಿ ನಿಮ್ಮ ಬಳಿ ಬಂದಿದ್ದೇವೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ನೀವೆಲ್ಲ ಸೇರಿ ಸಿನಿಮಾವನ್ನು ಗೆಲ್ಲಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಹಳೇ ಕಾಲಘಟ್ಟಗಳಲ್ಲಿ ನಡೆಯೋ ಕಥೆ ಸತ್ಯಂ ಚಿತ್ರದಲ್ಲಿದ್ದು, ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ. ತಾತನಾಗಿ ಹಿರಿಯ ನಟ ಸುಮನ್, ಮೊಮ್ಮಗನ ಪಾತ್ರದಲ್ಲಿ ಸಂತೋಷ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರಂಜಿನಿ ರಾಘವನ್ ನಟಿಸಿದ್ದಾರೆ.

ಇದನ್ನೂ ಓದಿ:Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?

ರವಿ ಬಸ್ರೂರು ಅವರ ಸಂಗೀತ ಸಂಯೋಜನೆ, ಸಿನಿಟೆಕ್ ಸೂರಿ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ. ಕೆ.ವಿ.ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಾಳ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ. ಎ2 ಮ್ಯೂಸಿಕ್ ಆಡಿಯೋ ಹಕ್ಕನ್ನು ಪಡೆದಿದೆ. ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ಮಹಾಂತೇಶ್ ವಿ.ಕೆ ನಿರ್ಮಾಣ ಮಾಡಿರುವ ಈ ಸತ್ಯಂ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿದೆ. ಜನವರಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ‌ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇನ್ನೂ, ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಆಸ್ಪತ್ರೆ ಆರಂಭಿಸಲಿರುವ ನಟಿ ಶ್ರೀಲೀಲಾ? ಅಧಿಕೃತ ಹೇಳಿಕೆ ನಿರೀಕ್ಷೆ!

ABOUT THE AUTHOR

...view details