ಕರ್ನಾಟಕ

karnataka

By ETV Bharat Karnataka Team

Published : Nov 9, 2023, 10:16 AM IST

ETV Bharat / entertainment

ಇಂದು 'ಆಟೋರಾಜ' ಶಂಕರ್‌ ನಾಗ್‌ ಜನ್ಮದಿನ: ಅಭಿಮಾನಿಗಳ ಮನದಾಳದಲ್ಲಿ ಶಂಕ್ರಣ್ಣ ಸದಾ ಜೀವಂತ

ಕನ್ನಡದ ಪ್ರಸಿದ್ಧ ನಟ 'ಆಟೋರಾಜ' ದಿ.ಶಂಕರ್ ನಾಗ್ ಅವರಿಗಿಂದು 69ನೇ ವರ್ಷದ ಹುಟ್ಟುಹಬ್ಬ.

actor shankar nag
ಶಂಕರ್ ನಾಗ್ ಜನ್ಮದಿನ

'ಶಂಕರ್ ನಾಗ್'. ಅಮೋಘ ಅಭಿನಯ, ಅಪಾರ ಅಭಿಮಾನಿಗಳು, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದ ಹೆಸರು ಈ 'ಆಟೋರಾಜ'. ಇಂದು ದಿ.ಶಂಕರ್​ ನಾಗ್​ ಅವರ 69ನೇ ಜನ್ಮದಿನವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.

ಶಂಕರ್​​ ನಾಗ್​ ಇಹಲೋಕ ತ್ಯಜಿಸಿ ಹಲವು ವರ್ಷಗಳೇ ಕಳೆದಿವೆ. ಅವರು ಅಭಿನಯಿಸಿದ ಸಿನಿಮಾಗಳು, ನಿರ್ದೇಶಿಸಿದ ಚಿತ್ರಗಳು ಹಾಗೂ ಕರಾಟೆ ಕಿಂಗ್​​ಗಿದ್ದ ದೂರದೃಷ್ಟಿ, ಕನ್ನಡ ಚಿತ್ರರಂಗವನ್ನು ಮುಗಿಲೆತ್ತರ ಬೆಳೆಸುವ ಕನಸೆಲ್ಲವನ್ನೂ ಈಗಲೂ ಅಭಿಮಾನಿಗಳ ಸ್ಮರಿಸುತ್ತಾರೆ. ಬಣ್ಣದ ಲೋಕದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಮಿಂಚಿ ಮರೆಯಾದ 'ಆಟೋರಾಜ'ನಿಗೆ ಹ್ಯಾಪಿ ಬರ್ತ್‌ಡೇ.

ಶಂಕರ್​ನಾಗ್ ಅಪರೂಪದ ಫೋಟೋ

ಶಂಕರ್ ನಾಗ್ ಮೂಲ ಹೆಸರು ನಾಗರಕಟ್ಟೆ ಶಂಕರ್. 1954ರಲ್ಲಿ ನವೆಂಬರ್​ 9ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದ ಇವರು, ಬಾಲ್ಯದಲ್ಲೇ ಪಾದರಸದಂತೆ ಚುರುಕಾಗಿದ್ದರಂತೆ. ತಂದೆ, ತಾಯಿ ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್​​ ನಾಗ್ ಅವರೊಂದಿಗೆ ನಾಟಕಗಳನ್ನು ನೋಡಲು ತೆರಳುತ್ತಿದ್ದ ಶಂಕರ್​​ ನಾಗ್, ಅಣ್ಣನ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾದರು. ಅಣ್ಣ, ತಮ್ಮ ಇಬ್ಬರೂ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದರೂ ಸಹ ರಂಗಭೂಮಿ ಬಿಟ್ಟಿರಲಿಲ್ಲ.

ಶಂಕರ್ ನಾಗ್ ತಮ್ಮ ಸ್ನೇಹಿತರೊಂದಿಗೆ ವಿದೇಶಕ್ಕೆ ಹೋಗಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತ ಹೊಂದಿದ್ದರು. ಇದರ ಹೊರತಾಗಿ ತನ್ನನ್ನು ಕನ್ನಡ ಚಿತ್ರರಂಗ ಕೈಬೀಸಿ ಕರೆಯುತ್ತೆ ಅಂತ ಅಂದುಕೊಂಡಿರಲಿಲ್ಲ. ಕನ್ನಡದ ಪ್ರಸಿದ್ಧ ನಟ ಹಾಗೂ ನಿರ್ದೇಶಕ, ಸಾಹಿತಿ ಗಿರೀಶ್ ಕಾರ್ನಾಡ್​ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್ ನಾಗ್ ಅವರಿಗೆ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಚಿತ್ರದಲ್ಲೇ ಗಮನ ಸೆಳೆದ ಶಂಕರ್ ​ನಾಗ್​ ಮುಂದಿನ ದಿನಗಳಲ್ಲಿ ಒಂದರ ಹಿಂದೊಂದರಂತೆ ಸಿನಿಮಾಗಳು ಸಿಕ್ಕವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕೂ ಇಳಿದ ಶಂಕರ್​ ನಾಗ್, ನಂತರದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಿಸಿದರು.

'ಆಟೋರಾಜ'ನ ಅಪರೂಪದ ಫೋಟೋ

ಆರ್​.ಕೆ.ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ಮಿಸಿದ ಶಂಕರ್ ​​ನಾಗ್, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. 1987ರಲ್ಲಿ ದೂರದರ್ಶನದಲ್ಲಿ ಹಿಂದಿ ಹಾಗೂ ಇಂಗ್ಲೀಷ್​​ನಲ್ಲಿ ಇದು ಪ್ರಸಾರವಾಯಿತು. ಕನ್ನಡಕ್ಕೂ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಯಿತು. ಕನ್ನಡ ಕಲಾವಿದರೇ ನಟಿಸಿದ್ದ ಈ ಧಾರಾವಾಹಿಯನ್ನು ಕರ್ನಾಟಕದ ಶಿವಮೊಗ್ಗ, ಆಗುಂಬೆ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ:'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್​ ದೇವರಕೊಂಡ ಪ್ರತಿಕ್ರಿಯೆ

ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಅವರನ್ನು ಪ್ರೀತಿಸಿ ವರಿಸಿದ ಶಂಕರ್ ​ನಾಗ್, ಪತ್ನಿಯೊಂದಿಗೆ ಸೇರಿ 'ಸಂಕೇತ್' ಎಂಬ ಹವ್ಯಾಸಿ ರಂಗಭೂಮಿ ತಂಡ ಕಟ್ಟಿ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಈ ದಂಪತಿಗೆ ಕಾವ್ಯ ಎಂಬ ಪುತ್ರಿ ಇದ್ದಾರೆ. ಶಂಕರ್​ ನಾಗ್ ನಿಧನದ ನಂತರ ಅರುಂಧತಿ ನಾಗ್ 'ರಂಗಶಂಕರ' ಎಂಬ ರಂಗಮಂದಿರ ಸ್ಥಾಪಿಸಿದರು.

'ಆಟೋರಾಜ' ಚಿತ್ರದ ಮೂಲಕ ಶಂಕರ್​ ನಾಗ್​ ಆಟೋ ಚಾಲಕರ ಮೆಚ್ಚಿನ ನಟರಾದರು. ಇಂದಿಗೂ ಕೂಡಾ ಬಹುತೇಕ ಆಟೋಗಳಲ್ಲಿ ಶಂಕರ್ ​​ನಾಗ್ ಫೋಟೋಗಳನ್ನು ಕಾಣಬಹುದು. ಶಂಕರ್​ ನಾಗ್ ಅಭಿನಯದ ಕೊನೆಯ ಚಿತ್ರ ನಿಗೂಢ ರಹಸ್ಯ.

ಇದನ್ನೂ ಓದಿ:ಮೊಣಕಾಲು ಶಸ್ತ್ರಚಿಕಿತ್ಸೆ: ಇಟಲಿಯಿಂದ ಹೈದರಾಬಾದ್​ಗೆ ಮರಳಿದ ಸಲಾರ್ ನಟ ಪ್ರಭಾಸ್

ಕನ್ನಡ ಚಿತ್ರರಂಗದ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸು ಕಂಡಿದ್ದ ಶಂಕರ್ ​ನಾಗ್ ಅದನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲೇ ನಿಧನರಾದರು. 1990ರ ಸೆಪ್ಟೆಂಬರ್​ 30ರಂದು ದಾವಣಗೆರೆ ಸಮೀಪ ಕಾರು ಅಪಘಾತಕ್ಕೀಡಾಗಿ ಅವರು ಅಸುನೀಗಿದರು. ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ ಇಂದು ಇಲ್ಲ. ಆದರೆ ಅಪಾರ ಸಂಖ್ಯೆಯ ಕಲಾಭಿಮಾನಿಗಳು, ಆಟೋ ಚಾಲಕರ ಹೃದಯದಲ್ಲಿ ಅಜರಾಮರರು.

ABOUT THE AUTHOR

...view details