ಕರ್ನಾಟಕ

karnataka

By

Published : Jan 13, 2023, 2:19 PM IST

Updated : Jan 13, 2023, 2:33 PM IST

ETV Bharat / entertainment

ಬುರ್ದುಗೋಳಿ ಕೊರಗಜ್ಜ-ಗುಳಿಗಜ್ಜ ಕ್ಷೇತ್ರಕ್ಕೆ 'ಕರಿ ಹೈದ ಕರಿಯಜ್ಜ' ಚಿತ್ರತಂಡ ಭೇಟಿ, ಹರಕೆ ಸಲ್ಲಿಕೆ

'ಕರಿ ಹೈದ ಕರಿಯಜ್ಜ' ಚಿತ್ರತಂಡವು ಬುರ್ದುಗೋಳಿ ಕೊರಗಜ್ಜ-ಗುಳಿಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ.

Kari Haida Kariyajja
'ಕರಿ ಹೈದ ಕರಿಯಜ್ಜ' ಚಿತ್ರತಂಡ

ಬುರ್ದುಗೋಳಿ ಕೊರಗಜ್ಜ-ಗುಳಿಗಜ್ಜ ಕ್ಷೇತ್ರಕ್ಕೆ 'ಕರಿ ಹೈದ ಕರಿಯಜ್ಜ' ಚಿತ್ರತಂಡ ಭೇಟಿ

ಉಳ್ಳಾಲ(ದಕ್ಷಿಣ ಕನ್ನಡ): ಕೊರಗಜ್ಜನ ಕುರಿತಾದ ಬಹುಭಾಷಾ ಚಿತ್ರ 'ಕರಿ ಹೈದ ಕರಿಯಜ್ಜ' ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಚಿತ್ರ ತಂಡವು ಭೇಟಿ ನೀಡಿ ಗುಳಿಗನಿಗೆ ಹರಕೆಯ ಹುಂಜವನ್ನು ಸಮರ್ಪಿಸಿದ್ದಾರೆ. ನಿರ್ದೇಶಕ ಸುಧೀರ್​ ರಾಜ್​ ಉರ್ವ ಅವರ ಸಲಹೆಯಂತೆ ಬುರ್ದುಗೋಳಿ ಕ್ಷೇತ್ರದ ಗುಳಿಗಜ್ಜನಿಗೆ ಹುಂಜ ಮತ್ತು ಮಂಗಳೂರಿನ‌ ನಂದಿಗುಡ್ಡೆಯ ಕೊರಗಜ್ಜನ ಕ್ಷೇತ್ರದಲ್ಲಿ ಕೋಲ ಸೇವೆ ನೀಡುತ್ತೇನೆಂದು 'ಕರಿ ಹೈದ ಕರಿಯಜ್ಜ' ಚಿತ್ರದ ಯಶಸ್ಸಿಗಾಗಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರು ಹರಕೆ ಹೊತ್ತಿದ್ದರಂತೆ. ಅದರಂತೆ ಬುರ್ದುಗೋಳಿ ಕ್ಷೇತ್ರಕ್ಕೆ ಹುಂಜವನ್ನು ಹರಕೆ ನೀಡಿದ್ದು ಗುಳಿಗ-ಕೊರಗಜ್ಜನ ಉದ್ಭವ ಶಿಲೆ ಸಮ್ಮುಖದಲ್ಲಿ ಚಿತ್ರತಂಡದವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ತೊಂಭತ್ತರ ದಶಕದ ಜನಪ್ರಿಯ ನಟಿಯರಾದ ಭವ್ಯ ಮತ್ತು ಶೃತಿ ಅವರು ಕೊರಗಜ್ಜ-ಗುಳಿಗಜ್ಜನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಂದು ನಟಿ ಭವ್ಯ ಅವರ ಜನುಮ ದಿನವಿದ್ದು, ಈ ಸಂದರ್ಭದಲ್ಲಿ ಕೊರಗಜ್ಜನ ಕ್ಚೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿರುವುದು ನಿಜಕ್ಕೂ ನನಗೆ ಸಿಕ್ಕಿದ ಸೌಭಾಗ್ಯ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಸಂಕ್ರಾಂತಿ ಹಬ್ಬದ ದಿನ ಸೆಟ್ಟೇರಲಿದೆ ಸನ್ನಿದಾನ ಪಿ ಒ.. ವಿಶೇಷ ಪಾತ್ರದಲ್ಲಿ ತಮಿಳಿನ ಹಾಸ್ಯ ನಟ ಯೋಗಿ ಬಾಬು, ಪ್ರಮೋದ್ ಶೆಟ್ಟಿ

ಶೀಘ್ರವೇ ಚಿತ್ರ ಬಿಡುಗಡೆ: 'ಕರಿ ಹೈದ ಕರಿಯಜ್ಜ' ಚಿತ್ರೀಕರಣವು ಶೇ.99 ರಷ್ಟು ಪೂರ್ಣಗೊಂಡಿದ್ದು, ಎಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ತುಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರವು ಮೂಡಿ ಬರಲಿದೆ. ದಕ್ಷಿಣ ಕನ್ನಡದ ಬಂಗಾಡಿ, ಮಡಂತ್ಯಾರ್, ಸೋಮೇಶ್ವರ, ಉಳ್ಳಾಲ ಪ್ರದೇಶಗಳಲ್ಲಿ ಶೂಟಿಂಗ್​ ನಡೆಸಲಾಗಿದ್ದು, ಕೊರಗಜ್ಜನ 800 ವರ್ಷಗಳ ಐತಿಹ್ಯದ ಕಥೆಯನ್ನೇ ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ ಅವರು ಈ ವೇಳೆ ತಿಳಿಸಿದ್ದಾರೆ.

ಬಳಿಕ ಚಿತ್ರತಂಡವು ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರಕ್ಕೆ ಹರಕೆಯ ಕೋಲ ನೀಡಲು ತೆರಳಿದರು. ಈ ವೇಳೆ ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಕಲ್ಲಾಪು, ಭಂಡಾರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಮುಖರಾದ ಪ್ರಶಾಂತ್ ಗಟ್ಟಿ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್.ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

ಪವಾಡಗಳೇ ನಡೆಯಿತು!: ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿದ್ದ ಶೂಟಿಂಗ್ ಸೆಟ್​ಗೆ ಹರೇಕಳದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಷೋಲೈಟ್ ಅಡ್ಡಿಯುಂಟು ಮಾಡುತ್ತಿತ್ತು. ಕಲಾವಿದರೆಲ್ಲರೂ ಮೇಕಪ್ ಮಾಡಿ, ದೋಣಿಗಳ ಮೂಲಕ ಶೂಟಿಂಗ್ ನಡೆಸುವಾಗ ಅಡಚಣೆಗಳೇ ಜಾಸ್ತಿಯಾಗಿತ್ತು. ಅಂದು ಶೂಟಿಂಗ್ ನಿಲ್ಲುತ್ತಿದ್ದಲ್ಲಿ ನಮಗೆ ಲಕ್ಷಾಂತರ ನಷ್ಟ ಸಂಭವಿಸುವುದರಲ್ಲಿತ್ತು. ಆದರೆ ಕೊರಗಜ್ಜನನ್ನು ಸ್ಮರಿಸಿದಾಗ ಪವಾಡವೆಂಬಂತೆ ಷೋಲೈಟ್​ಗೆ ಅಡ್ಡವಾಗಿ ದೋಣಿಯೊಂದು ಬಂದು ನಿಂತು ಸೀನ್ ಶೂಟಿಂಗ್​ ಯಾವುದೇ ಅಡಚಣೆಯಿಲ್ಲದೆ ನಡೆಯಿತು. ಇಂತಹ ಪವಾಡಗಳು ಜಿಲ್ಲೆಯ ವಿವಿಧೆಡೆ ನಡೆದಿದ್ದು, ಕೊರಗಜ್ಜನ ಕೃಪೆಯಿಂದ ಯಶಸ್ವಿಯಾಗಿ ಶೂಟಿಂಗ್ ನಡೆದಿದೆ ಎಂದು ನಿರ್ದೇಶಕ ಅತ್ತಾವರ್ ಪ್ರಾರ್ಥನೆ ವೇಳೆ ತಿಳಿಸಿದರು.

ಇದನ್ನೂ ಓದಿ:ಬಿಗ್‌ಬಾಸ್ ವಿನ್ನರ್ ರೂಪೇಶ್‌ ಶೆಟ್ಟಿಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ: ಕೊರಗಜ್ಜ ದೈವದ ಸ್ಮರಣೆ

Last Updated : Jan 13, 2023, 2:33 PM IST

ABOUT THE AUTHOR

...view details