ಕರ್ನಾಟಕ

karnataka

ಈ ಕಾರಣಕ್ಕೆ ಕೊನೆ ಕ್ಷಣದಲ್ಲಿ ಮುಂದೂಡಿಕೆಯಾಯ್ತಾ ವಿಕ್ರಮ್​ ನಟನೆಯ 'ಧ್ರುವ ನಚ್ಚತಿರಂ'?!

By ETV Bharat Karnataka Team

Published : Nov 24, 2023, 3:53 PM IST

ಕಾನೂನು ಅಡೆತಡೆಗಳಿಂದ ಚಿಯಾನ್ ವಿಕ್ರಮ್ ಅಭಿನಯದ 'ಧ್ರುವ ನಚ್ಚತಿರಂ' ಮುಂದೂಡಲಾಗಿದೆ.

Vikram's Dhruva Natchathiram
ವಿಕ್ರಮ್​ ನಟನೆಯ 'ಧ್ರುವ ನಚ್ಚತಿರಂ'

ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಬಹುನಿರೀಕ್ಷಿತ 'ಧ್ರುವ ನಚ್ಚತಿರಂ' (Dhruva Natchathiram) ಸಿನಿಮಾ ಕೊನೆ ಕ್ಷಣದಲ್ಲಿ ಮುಂದೂಡಿಕೆ ಆಗಿದೆ. ಗೌತಮ್ ವಾಸುದೇವ್ ಮೆನನ್ ಆ್ಯಕ್ಷನ್​ ಕಟ್​ ಹೇಳಿದ್ದ ಈ ಧ್ರುವ ನಚ್ಚತಿರಂ ಭಾಗ ಒಂದು ಇಂದು (ಶುಕ್ರವಾರ, ನವೆಂಬರ್​ 24) ಬಿಡುಗಡೆ ಆಗಬೇಕಿತ್ತು. ಆದರೆ ಕಾನೂನು ಅಡೆತಡೆಗಳಿಂದ ಬಿಡುಗಡೆಗೆ ಹಿನ್ನೆಡೆಯಾಗಿದೆ.

ಈ ಮೊದಲು ನವೆಂಬರ್ 24ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆದಿತ್ತು. ಆದರೀಗ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಮತ್ತು ಅವರ ತಂಡದ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಧ್ರುವ ನಚ್ಚತಿರಂ ಸಿನಿಮಾ ಬಿಡುಗಡೆಗೆ ಸಂಬಂಧಿಸಿದ ಎರಡು ಕಾನೂನು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸಿನಿಮಾ ರಿಲೀಸ್​ ಮಾಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ.

ಜಿವಿಎಂ ಎಂದೇ ಜನಪ್ರಿಯವಾಗಿರುವ ಗೌತಮ್ ವಾಸುದೇವ್ ಮೆನನ್ ಅವರು ಸೋಷಿಯಲ್​ ಮಿಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಕ್ಷಮೆಯಾಚನಾ ಪತ್ರದಲ್ಲಿ, "ಕ್ಷಮಿಸಿ, ಇಂದು ಧ್ರುವ ನಚ್ಚತಿರಂ ಸಿನಿಮಾವನ್ನು ಪರದೆ ಮೇಲೆ ತರಲು ಸಾಧ್ಯವಾಗುತ್ತಿಲ್ಲ. ನಾವು ಆದಷ್ಟು ಪ್ರಯತ್ನಿಸಿದೆವು. ಆದರೆ, ನಮಗೆ ಇನ್ನೂ ಒಂದು ಅಥವಾ ಎರಡು ದಿನಗಳು ಬೇಕಾಗಬಹುದು ಎಂದು ತೋರುತ್ತದೆ. ಎಲ್ಲರಿಗೂ ಉತ್ತಮ ಸಿನಿಮೀಯ ಅನುಭವ ಒದಗಿಸುವ ಭರವಸೆ ಹೊಂದಿದ್ದೇವೆ. ಚಿತ್ರಕ್ಕೆ ನೀವು ನೀಡಿರುವ ಬೆಂಬಲ ಹೃದಯಸ್ಪರ್ಶಿಯಾಗಿದೆ ಮತ್ತು ನಮ್ಮ ಮುಂದಿನ ಹೆಜ್ಜೆಗೆ ಪ್ರೋತ್ಸಾಹಿಸಿದೆ. ಇನ್ನು ಕೆಲವೇ ದಿನಗಳಲ್ಲಿ ನಾವು ಬರುತ್ತೇವೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಯಾಚಿಸಿದ ಮನ್ಸೂರ್ ಅಲಿ ಖಾನ್​

ವರದಿಗಳ ಪ್ರಕಾರ, ಧ್ರುವ ನಚ್ಚತಿರಂ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಗೌತಮ್ ವಾಸುದೇವ್ ಮೆನನ್ ಮತ್ತವರ ತಂಡದ ವಿರುದ್ಧ ಮದ್ರಾಸ್ ಹೈಕೋರ್ಟ್​​ನಲ್ಲಿ ಎರಡು ಪ್ರಕರಣಗಳಿವೆ. ನವೆಂಬರ್ 24ರ ಬೆಳಗ್ಗೆ 10:30ಕ್ಕೆ ಮೊದಲು ಚಿತ್ರದ ಬಿಡುಗಡೆ ಖಚಿತಪಡಿಸಿಕೊಳ್ಳಲು ಪ್ರೊಡಕ್ಷನ್ ಹೌಸ್ 'ಆಲ್ ಇನ್ ಪಿಕ್ಚರ್ಸ್‌'ಗೆ 2 ಕೋಟಿ ರೂಪಾಯಿಗಳನ್ನು ಮರುಪಾವತಿಸುವಂತೆ ನ್ಯಾಯಾಲಯ ನಿರ್ದೇಶಕರಿಗೆ ಸೂಚಿಸಿತ್ತು. ನಿರ್ದಿಷ್ಟ ಕಾಲಮಿತಿಯೊಳಗೆ ಹಣ ಪೂರೈಸಲು ಸಾಧ್ಯವಾಗದ ಹಿನ್ನೆಲೆ ಸಿನಿಮಾ ಬಿಡುಗಡೆ ಮುಂದೂಡಬೇಕಾಯಿತು.

ಇದನ್ನೂ ಓದಿ:ಹಿರಿಯ ಸಿನಿಮಾ ನಿರ್ದೇಶಕ ರಾಜ್​​​ಕುಮಾರ್ ಕೊಹ್ಲಿ ಹೃದಯಾಘಾತದಿಂದ ನಿಧನ

ಎರಡು ಭಾಗಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. 'ಧ್ರುವ ನಚ್ಚತಿರಂ: ಚಾಪ್ಟರ್ ಒನ್​ - ಯುದ್ಧ ಕಾಂಡ' ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕ ಮತ್ತು ಸಹ-ಲೇಖಕರಾಗಿ ಗೌತಮ್ ವಾಸುದೇವ್ ಮೆನನ್ ಕಾರ್ಯ ನಿರ್ವಹಿಸಿದ್ದಾರೆ. ತಾರಾಬಳಗದಲ್ಲಿ ವಿಕ್ರಮ್, ರಿತು ವರ್ಮಾ, ಆರ್. ಪಾರ್ತಿಬನ್, ವಿನಾಯಕನ್, ರಾಧಿಕಾ ಶರತ್‌ಕುಮಾರ್ ಮತ್ತು ಸಿಮ್ರನ್ ಇದ್ದಾರೆ.. ಸದ್ಯ ಕಾನೂನು ಪ್ರಕ್ರಿಯೆ ಹಿನ್ನೆಲೆ ಸಿನಿಮಾ ಮುಂದೂಡಿದೆ ಎಂದು ನಂಬಲಾಗಿದೆ. ಮುಂದಿನ ರಿಲೀಸ್​ ಡೇಟ್ ಶೀಘ್ರದಲ್ಲೇ ಅನೌನ್ಸ್ ಆಗಲಿದೆ.

ABOUT THE AUTHOR

...view details