ಕರ್ನಾಟಕ

karnataka

ETV Bharat / entertainment

Independence day: ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ದೇಶಪ್ರೇಮ ಸಾರುವ ಕನ್ನಡ ಸಿನಿಮಾಗಳಿವು.. - etv bharat kannada

Best Kannada Patriotic Movies: 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡ ಚಿತ್ರರಂಗದಲ್ಲಿ ಮೂಡಿಬಂದ ದೇಶಪ್ರೇಮ ಸಾರುವ ಸಿನಿಮಾಗಳ ಬಗ್ಗೆ ತಿಳಿಯೋಣ..

77th Independence day
77th Independence day

By

Published : Aug 14, 2023, 7:42 PM IST

ಭಾರತೀಯ ಚಿತ್ರರಂಗದಲ್ಲಿ ದೇಶಪ್ರೇಮ ಆಧಾರಿತ ಸಾಕಷ್ಟು ಸಿನಿಮಾಗಳು ಬಂದಿವೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯಾ ನಂತರ ನಡೆದ ಯುದ್ಧಗಳ ಮೇಲೂ ಸಿನಿಮಾಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ದೇಶಪ್ರೇಮ ಸಾರುವ ಹಲವಾರು ಸಿನಿಮಾಗಳು ತೆರೆಕಂಡಿವೆ. 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡದಲ್ಲಿ ದೇಶಪ್ರೇಮ ಸಾರುವ ಚಿತ್ರಗಳು ಇಂತಿವೆ.

ಕಿತ್ತೂರು ಚೆನ್ನಮ್ಮ

1. ಕಿತ್ತೂರು ಚೆನ್ನಮ್ಮ: 1961ರಲ್ಲಿ ತೆರೆಕಂಡು ಇವತ್ತಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಸಿನಿಮಾ 'ಕಿತ್ತೂರು ಚೆನ್ನಮ್ಮ'. ಬಹುಭಾಷಾ ನಟಿ ಬಿ.ಸರೋಜಾದೇವಿ ಕಿತ್ತೂರು ಚೆನ್ನಮ್ಮನಾಗಿ ಅಭಿನಯಿಸಿದ ಸಿನಿಮಾವಿದು. ಚಿತ್ರದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬಂದಾಗ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದಿಟ್ಟ ಮಹಿಳೆಯೇ ರಾಣಿ ಚೆನ್ನಮ್ಮ. ವಿಶೇಷ ಪಾತ್ರದಲ್ಲಿ ಡಾ.ರಾಜ್​ಕುಮಾರ್ ಕೂಡ ನಟಿಸಿದ್ದರು. ಪ್ರಖ್ಯಾತ ನಿರ್ದೇಶಕ ಬಿ.ಆರ್.ಪಂತಲ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಆ ಕಾಲದಲ್ಲೇ 9ನೇ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಮುತ್ತಿನ ಹಾರ

2. ಮುತ್ತಿನ ಹಾರ: ಈ ಚಿತ್ರದ ಬಳಿಕ ತೆರೆಗೆ ಬಂದ ದೇಶ ಪ್ರೇಮದ ಕುರಿತಾದ ಮತ್ತೊಂದು ಸಿನಿಮಾ 'ಮುತ್ತಿನ ಹಾರ'. ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ವೀರ ಸೈನಿಕ ಪಾತ್ರದಲ್ಲಿ ವಿಜೃಂಭಿಸಿದ್ದು, ಸುಹಾಸಿನಿ ನಾಯಕಿಯಾಗಿದ್ದರು. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಸುಂದರ ದಾಂಪತ್ಯದ ಜೊತೆಗೆ ಯುದ್ಧದ ಸನ್ನಿವೇಶವನ್ನು ತೋರಿಸಲಾಗಿದೆ. ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದರು. ಯುದ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

ತಾಯಿ ಸಾಹೇಬ

3. ತಾಯಿ ಸಾಹೇಬ: ಅಪ್ಪಾ ಸಾಹೇಬ ಎಂಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವನ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕಥೆಯನ್ನು ಆಧರಿಸಿ ಬಂದ ಮಗದೊಂದು ಕನ್ನಡ ಸಿನಿಮಾ 'ತಾಯಿ ಸಾಹೇಬ'. ಖ್ಯಾತ ನಟಿ ಜಯಮಾಲಾ ಹಾಗೂ ಸುರೇಶ್ ಹೆಬ್ಳೀಕರ್ ಅಭಿನಯದ ಈ ಸಿನಿಮಾ ಸ್ವಾತಂತ್ರ ಪೂರ್ವ ಹಾಗೂ ಭೂ ಚಳವಳಿ ಬಗ್ಗೆ ಇದೆ. ಗಿರೀಶ್ ಕಾಸವರಳ್ಳಿ ನಿರ್ದೇಶನದ ಚಿತ್ರವು ಡಿಸೆಂಬರ್ 31, 1997ರಲ್ಲಿ ತೆರೆ ಕಂಡಿತ್ತು. ಆ ದಿನಗಳಲ್ಲಿ ತಾಯಿ ಸಾಹೇಬ ಚಲನಚಿತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ವೀರಪ್ಪನಾಯ್ಕ

4. ವೀರಪ್ಪನಾಯ್ಕ: ಮುತ್ತಿನ ಹಾರ ಸಿನಿಮಾ ಬಳಿಕ, ಮತ್ತೆ ವಿಷ್ಣುವರ್ಧನ್ ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಚಿತ್ರ ಒಳಗೊಂಡಿತ್ತು. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಪಟ ದೇಶಾಭಿಮಾನಿಯ ಕಥೆ ಇದು. ದೇಶಕ್ಕೋಸ್ಕರ ಮಗನನ್ನೇ ವಿಷ್ಣುರ್ಧನ್ ಚಿತ್ರದಲ್ಲಿ ಕೊಲೆ ಮಾಡುವುದು ಊಹಿಸಲು ಅಸಾಧ್ಯ. ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶೃತಿ ನಟಿಸಿದ್ದರು. ಎಸ್.ನಾರಾಯಣ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. 1999ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.

ಹಗಲು ವೇಷ

5. ಹಗಲು ವೇಷ: ಲವರ್ ಬಾಯ್ ಹಾಗೂ ಹಳ್ಳಿ ಹುಡುಗನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್, 'ಹಗಲು ವೇಷ' ಸಿನಿಮಾದಲ್ಲಿ ದೇಶಪ್ರೇಮಿಯ ಪಾತ್ರದಲ್ಲಿ ಮಿಂಚಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹಗಲು ವೇಷ ಚಿತ್ರವು ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ್ಯ ಹೋರಾಟಗಾರನ ಕಥೆ ಆಧರಿಸಿದೆ. ಚಿತ್ರದಲ್ಲಿ ಶಿವ ರಾಜ್​ಕುಮಾರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 24, 2000ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ಯಶಸ್ಸು ಕಂಡಿತ್ತು.

ವಂದೇ ಮಾತರಂ

6. ವಂದೇ ಮಾತರಂ: 2001ರಲ್ಲಿ ತೆರೆ ಕಂಡು ಸಕ್ಸಸ್ ಕಂಡ ಸಿನಿಮಾ ವಂದೇ ಮಾತರಂ. ರೆಬಲ್ ಸ್ಟಾರ್ ಅಂಬರೀಶ್​ ಹಾಗೂ ತೆಲುಗಿನ ಖ್ಯಾತ ನಟಿ ವಿಜಯಶಾಂತಿ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ, ನವ ಪೀಳಿಗೆಯ ಯುವಕರನ್ನು ಹೇಗೆ ಬ್ರೈನ್ ವಾಶ್​ ಮಾಡಿ, ಉಗ್ರಗಾಮಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಓಂ ಪ್ರಕಾಶ್ ರಾವ್ ಈ ಸಿನಿಮಾ ನಿರ್ದೇಶನ ಮಾಡಿದ್ದರು.

7. 1944: 2016ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ದೇಶಪ್ರೇಮ ಆಧಾರಿತ ಸಿನಿಮಾ 1944. ನಟ ನವೀನ್​ ಕೃಷ್ಣ ಹಾಗೂ ಶೃತಿ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರವಿದು. ಎನ್.ಎಸ್.ರಾವ್ ನಿರ್ದೇಶಿಸಿರುವ ರೊಟ್ಟಿ ಋಣ ನಾಟಕ ಆಧರಿಸಿದ್ದ ಸಿನಿಮಾ ಇದಾಗಿದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಸ್ವಾತಂತ್ರ ಹೋರಾಟದ ಕಥೆಯನ್ನು 1944 ಸಿನಿಮಾ ಒಳಗೊಂಡಿದೆ. ಬದ್ರಿನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸೈನಿಕ

8. ಸೈನಿಕ: 2002ರಲ್ಲಿ ಪವರ್​ಫುಲ್ ಟೈಟಲ್ ಇಟ್ಟುಕೊಂಡು, ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ಚಿತ್ರ ಸೈನಿಕ. ನಟ ಹಾಗೂ ರಾಜಕಾರಣಿ ಸಿ.ಪಿ.ಯೋಗೇಶ್ವರ್ ಮತ್ತು ನಟಿ ಸಾಕ್ಷಿ ಶಿವಾನಂದ ನಟಿಸಿದ್ದ ಸೈನಿಕ ಸಿನಿಮಾ ಕಾರ್ಗಿಲ್​ ಯುದ್ಧದ ಕಥೆ ಒಳಗೊಂಡಿತ್ತು. ಮಹೇಶ್ ಸುಖಧರೆ ಸಿನಿಮಾ ನಿರ್ದೇಶಿಸಿದ್ದರು.

ಕ್ರಾಂತಿವೀರ

9. ಕ್ರಾಂತಿವೀರ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು ಕ್ರಾಂತಿವೀರ ಸಿನಿಮಾ ಕೂಡ ಸದ್ದು ಮಾಡಿತ್ತು. ಅಜಿತ್ ಜಯರಾಜ್ ಭಗತ್ ಸಿಂಗ್ ಪಾತ್ರ ನಿರ್ವಹಿಸಿದ್ದರು. ಚಿತ್ರಕ್ಕೆ ಆದತ್​ ಎಂ.ಪಿ ನಿರ್ದೇಶನ ಮಾಡಿದ್ದರು. ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಲಾಲಾ ಲಜಪತ್ ರಾಯ್ ಪಾತ್ರದಲ್ಲಿ ಗೀತಸಾಹಿತಿ, ನಿರ್ದೇಶಕ, ನಟ ಡಾ ವಿ.ನಾಗೇಂದ್ರ ಪ್ರಸಾದ್, ಪೋಷಕ ಪಾತ್ರಗಳಲ್ಲಿ ಜೋ ಸೈಮನ್, ಭವಾನಿ ಪ್ರಕಾಶ್ ಹಾಗೂ ಲಕ್ಷ್ಮಣ್ ಅಭಿನಯಿಸಿದ್ದರು. ಇದರ ಜೊತೆಗೆ ಮೈಸೂರು ಮಲ್ಲಿಗೆ, ಎಕೆ 47 ಸೇರಿದಂತೆ ಹಲವು ಸಿನಿಮಾಗಳು ದೇಶಪ್ರೇಮದ ಕಥಾ ಹಂದರ ಹೊಂದಿವೆ.

A.K.47

ಇದನ್ನೂ ಓದಿ:77th Independence day: 1500 ಅಡಿ ಉದ್ದದ ತ್ರಿವರ್ಣ ಧ್ವಜದ ರಂಗೋಲಿ ರಚಿಸಿ ದೇಶ ಪ್ರೇಮ ಮೆರೆದ ವಿದ್ಯಾರ್ಥಿಗಳು

ABOUT THE AUTHOR

...view details