ಭಾರತೀಯ ಚಿತ್ರರಂಗದಲ್ಲಿ ದೇಶಪ್ರೇಮ ಆಧಾರಿತ ಸಾಕಷ್ಟು ಸಿನಿಮಾಗಳು ಬಂದಿವೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯಾ ನಂತರ ನಡೆದ ಯುದ್ಧಗಳ ಮೇಲೂ ಸಿನಿಮಾಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ದೇಶಪ್ರೇಮ ಸಾರುವ ಹಲವಾರು ಸಿನಿಮಾಗಳು ತೆರೆಕಂಡಿವೆ. 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡದಲ್ಲಿ ದೇಶಪ್ರೇಮ ಸಾರುವ ಚಿತ್ರಗಳು ಇಂತಿವೆ.
1. ಕಿತ್ತೂರು ಚೆನ್ನಮ್ಮ: 1961ರಲ್ಲಿ ತೆರೆಕಂಡು ಇವತ್ತಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಸಿನಿಮಾ 'ಕಿತ್ತೂರು ಚೆನ್ನಮ್ಮ'. ಬಹುಭಾಷಾ ನಟಿ ಬಿ.ಸರೋಜಾದೇವಿ ಕಿತ್ತೂರು ಚೆನ್ನಮ್ಮನಾಗಿ ಅಭಿನಯಿಸಿದ ಸಿನಿಮಾವಿದು. ಚಿತ್ರದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬಂದಾಗ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದಿಟ್ಟ ಮಹಿಳೆಯೇ ರಾಣಿ ಚೆನ್ನಮ್ಮ. ವಿಶೇಷ ಪಾತ್ರದಲ್ಲಿ ಡಾ.ರಾಜ್ಕುಮಾರ್ ಕೂಡ ನಟಿಸಿದ್ದರು. ಪ್ರಖ್ಯಾತ ನಿರ್ದೇಶಕ ಬಿ.ಆರ್.ಪಂತಲ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಆ ಕಾಲದಲ್ಲೇ 9ನೇ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
2. ಮುತ್ತಿನ ಹಾರ: ಈ ಚಿತ್ರದ ಬಳಿಕ ತೆರೆಗೆ ಬಂದ ದೇಶ ಪ್ರೇಮದ ಕುರಿತಾದ ಮತ್ತೊಂದು ಸಿನಿಮಾ 'ಮುತ್ತಿನ ಹಾರ'. ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ವೀರ ಸೈನಿಕ ಪಾತ್ರದಲ್ಲಿ ವಿಜೃಂಭಿಸಿದ್ದು, ಸುಹಾಸಿನಿ ನಾಯಕಿಯಾಗಿದ್ದರು. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಸುಂದರ ದಾಂಪತ್ಯದ ಜೊತೆಗೆ ಯುದ್ಧದ ಸನ್ನಿವೇಶವನ್ನು ತೋರಿಸಲಾಗಿದೆ. ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದರು. ಯುದ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.
3. ತಾಯಿ ಸಾಹೇಬ: ಅಪ್ಪಾ ಸಾಹೇಬ ಎಂಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವನ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕಥೆಯನ್ನು ಆಧರಿಸಿ ಬಂದ ಮಗದೊಂದು ಕನ್ನಡ ಸಿನಿಮಾ 'ತಾಯಿ ಸಾಹೇಬ'. ಖ್ಯಾತ ನಟಿ ಜಯಮಾಲಾ ಹಾಗೂ ಸುರೇಶ್ ಹೆಬ್ಳೀಕರ್ ಅಭಿನಯದ ಈ ಸಿನಿಮಾ ಸ್ವಾತಂತ್ರ ಪೂರ್ವ ಹಾಗೂ ಭೂ ಚಳವಳಿ ಬಗ್ಗೆ ಇದೆ. ಗಿರೀಶ್ ಕಾಸವರಳ್ಳಿ ನಿರ್ದೇಶನದ ಚಿತ್ರವು ಡಿಸೆಂಬರ್ 31, 1997ರಲ್ಲಿ ತೆರೆ ಕಂಡಿತ್ತು. ಆ ದಿನಗಳಲ್ಲಿ ತಾಯಿ ಸಾಹೇಬ ಚಲನಚಿತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
4. ವೀರಪ್ಪನಾಯ್ಕ: ಮುತ್ತಿನ ಹಾರ ಸಿನಿಮಾ ಬಳಿಕ, ಮತ್ತೆ ವಿಷ್ಣುವರ್ಧನ್ ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಚಿತ್ರ ಒಳಗೊಂಡಿತ್ತು. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಪಟ ದೇಶಾಭಿಮಾನಿಯ ಕಥೆ ಇದು. ದೇಶಕ್ಕೋಸ್ಕರ ಮಗನನ್ನೇ ವಿಷ್ಣುರ್ಧನ್ ಚಿತ್ರದಲ್ಲಿ ಕೊಲೆ ಮಾಡುವುದು ಊಹಿಸಲು ಅಸಾಧ್ಯ. ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶೃತಿ ನಟಿಸಿದ್ದರು. ಎಸ್.ನಾರಾಯಣ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. 1999ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.