ಕರ್ನಾಟಕ

karnataka

By

Published : Jan 14, 2023, 3:48 PM IST

ETV Bharat / entertainment

ಕರಿ ಹೈದ ಕರಿ ಅಜ್ಜ ಸಿನಿಮಾದಲ್ಲಿ ಹಾಲಿವುಡ್ ನಟ‌ ಸಂದೀಪ್ ಸೋಪರ್ಕರ್

ಇತ್ತೀಚೆಗಷ್ಟೆ ಕರಿ ಹೈದ ಕರಿ ಅಜ್ಜ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಚಿತ್ರತಂಡ ಶೂಟಿಂಗ್​ ಸಮಯದಲ್ಲಾದ ಅನುಭವಗಳನ್ನು ಹಂಚಿಕೊಂಡಿದೆ.

Kari Haida Kari Ajja film team
ಕರಿ ಹೈದ ಕರಿ ಅಜ್ಜ ಚಿತ್ರತಂಡ

ಕನ್ನಡ ಚಿತ್ರರಂಗದ ಅಲ್ಲದೇ ಇಡೀ ವಿಶ್ವದ ಗಮನ ಸೆಳೆದ ಚಿತ್ರ ಕಾಂತಾರ. ಈ ಚಿತ್ರದ ಮಾದರಿಯಲ್ಲೇ ಕನ್ನಡ ಚಿತ್ರರಂಗದಲ್ಲಿ ಕೊರಗಜ್ಜನ ಮಹಿಮೆಯ ಕಥೆ ಹೊಂದಿರುವ ಕರಿ ಹೈದ ಕರಿ ಅಜ್ಜ ಸಿನಿಮಾ ಬರ್ತಾ ಇರೋದು ಗೊತ್ತಿರುವ ವಿಚಾರ. ಈ ಚಿತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ಹಾಗೂ ಕನ್ನಡ ನಟಿಯರಾದ ಶ್ರುತಿ, ಭವ್ಯ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ‌ಇದರ ಜೊತೆಗೆ ಹಾಲಿವುಡ್ ಪ್ರಸಿದ್ಧ ನಟ ಹಾಗೂ ನೃತ್ಯ ನಿರ್ದೇಶಕ ಸಂದೀಪ್ ಸೋಪರ್ಕರ್ ಈ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದಾರೆ‌.

ಕರಿ ಹೈದ ಕರಿ ಅಜ್ಜ ಸಿನಿಮಾ ಪೋಸ್ಟರ್​

ನಿರ್ದೇಶಕ ಸುಧೀರ್ ಅತ್ತಾವರ್ ಸಿನಿಮಾ ಕುರಿತು ಮಾತನಾಡಿ, 'ಕರಿ ಹೈದ ಕರಿ ಅಜ್ಜ' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ ಪಾತ್ರ ನಿರ್ವಹಿಸಿದ್ದಾರೆ.

ಗುಳಿಗನ ಪಾತ್ರದಲ್ಲಿ ಸಂದೀಪ್ ಸೋಪರ್ಕರ್: ನಿನ್ನೆಯಷ್ಟೇ ಕೊರಗಜ್ಜನಿಗೆ ಕೋಲ ಕೊಡುವ ಮೂಲಕ 'ಕರಿ ಹೈದ ಕರಿ ಅಜ್ಜ' ಚಿತ್ರದ ಶೂಟಿಂಗ್ ಮುಗಿಸಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ಹುಡುಗನ ಕಥೆ. ಇದರಲ್ಲಿ ಹಾಲಿವುಡ್ ಕೋರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ ಗುಳಿಗನ ಪಾತ್ರ ಮಾಡಿದ್ದಾರೆ. ಗುಳಿಗನ ಪಾತ್ರವನ್ನು ಡ್ಯಾನ್ಸ್ ಬೇಸ್​ನಲ್ಲಿ ತೋರಿಸಲಾಗಿದ್ದು, ಆ ಪಾತ್ರಕ್ಕೆ ಸಂದೀಪ್ ಅವರು ಸೂಕ್ತರಾಗಿದ್ದಾರೆ.

ಕೊರಗಜ್ಜನ ತಾಯಿ ಪಾತ್ರದಲ್ಲಿ ನಟಿ ಶೃತಿ: ಈ ಮೊದಲು ಕೊರಗಜ್ಜನ ಬಗ್ಗೆ 7-8 ಜನ ಸಿನಿಮಾ ಮಾಡಲು ಪ್ರಯತ್ನ ಮಾಡಿದರು ಆಗಿರಲಿಲ್ಲ. ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. 12ನೇ ಶತಮಾನದ ಕಥೆ ಇದಾಗಿದ್ದು, ಚಿತ್ರದಲ್ಲಿ ಬುರ್ದಗೋಳಿ ಉತ್ಪತ್ತಿ ಕಲ್ಲು ಮುಖ್ಯವಾಗುತ್ತದೆ. ನಾವು ಈ ದೃಶ್ಯವನ್ನು ಸೋಮೇಶ್ವರದಲ್ಲಿ ಶೂಟ್ ಮಾಡುವ ಮೂಲಕ ಚಾಲನೆ ನೀಡಿದೆವು. ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಈ ಸಿನಿಮಾವನ್ನು ನಾನು ಮಾಡಲಿಲ್ಲ. ಆ ದೈವ ನನ್ನ ಕೈಲಿ ಮಾಡಿಸಿದೆ. ನಮ್ಮ ಚಿತ್ರದಲ್ಲಿ ಭೈರಕ್ಕಿ ಪಾತ್ರ ಮುಖ್ಯವಾಗಿದ್ದು, ಭೈರಕ್ಕಿ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ.

ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಆರಾಧಿಸುತ್ತಾರೆ. ಜನ ವಿಸ್ಕಿ, ಬ್ರಾಂದಿಯನ್ನು ಕೊರಗಜ್ಜನಿಗೆ ನೀಡುತ್ತಿದ್ದು, ಅಂದಿನ ಕಾಲದಲ್ಲಿ ಇವುಗಳು ಇರಲಿಲ್ಲ. ಕಳ್ಳಬಟ್ಟಿ ಇತ್ತು. ದೇವರಿಗೆ ನಾವು ಏನು ಬೇಕಾದರೂ ಕೊಡಬಹುದು. ಇಂದಿನ ಜನ ವಿಸ್ಕಿ, ಬ್ರಾಂದಿ ಕೊಡುತ್ತಿರುವುದು ಕೊರಗ ಜನಾಂಗಕ್ಕೆ ಬೇಸರ ತಂದಿದೆ. ಈ ಚಿತ್ರದಲ್ಲಿ ಕೊರಗಜ್ಜನ ನೈಜ ಕಥೆ ಹೇಳಲಾಗಿದ್ದು, ಕಥೆಯನ್ನು ಕೊರಗ ಜನಾಂಗದಿಂದ ಸಂಗ್ರಹಿಸಿ ಸಿನಿಮಾ ಮಾಡಲಾಗಿದೆ‌ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ಹೇಳಿದರು.

ಮೊದಲ ಬಾರಿಗೆ ಜಾನಪದ ಶೈಲಿಯ ನೃತ್ಯ: ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ, ಈ ಚಿತ್ರ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು, ಹೊಸ ರೀತಿಯ ಅನುಭವ ನೀಡಿತು. ಈ ಪಾತ್ರವನ್ನು ನಾನು ನನ್ನ ಸಹೋದರಿಯರ ಜೊತೆಗೆ ರಿಸರ್ಚ್ ಮಾಡಿ ಮಾಡಿದ್ದೇನೆ. ಒಳ್ಳೆ ರೀತಿ ಶೂಟಿಂಗ್ ಆಯ್ತು. ಈ ಪಾತ್ರ ಮಾಡಿದ್ದು ಖುಷಿ ಇದ್ದು, ಇದರಲ್ಲಿ ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಸಾಕಷ್ಟು ಜನ ಗಲಾಟೆ ಮಾಡಿ 2 ದಿನ ಶೂಟಿಂಗ್ ನಿಂತಿತು. ನಂತರ ನಿರ್ದೇಶಕ, ನಿರ್ಮಾಪಕರು ಕಷ್ಟಪಟ್ಟು ಶೂಟಿಂಗ್ ಮಾಡಿಸಿದರು. ಮೊದಲ ಬಾರಿಗೆ ಜಾನಪದ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದು, ಶಿವನ ನೃತ್ಯ ಮಾಡಿರುವ ಒಳ್ಳೆ ಅನುಭವ ಮರೆಯಲಾಗದು ಎಂದರು.

ಅದ್ಭುತ ತಾಯಿ ಮಗನ ಬಾಂಧವ್ಯ: ನಟಿ ಶ್ರುತಿ ಮಾತನಾಡಿ, 'ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಭೈರಕ್ಕಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದಿದ್ದು, ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೇ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ.

ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ಪೇಂಟಿಂಗ್ ತರಾ ಇದ್ದು, ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಭೈರಕ್ಕಿ ಕೊರಗಜ್ಜ ಸಾಕು ತಾಯಿ 2 ಶೇಡ್ ಪಾತ್ರಕ್ಕಿದೆ. ಇದರಲ್ಲಿ ಕೊರಗಜ್ಜನಿಗೆ ತನಿಯಾ/ಕಾಂತಾರೆ ಹೆಸರು. ನಾನು ಕಳ್ಳಬಟ್ಟಿ ಮಾರುತ್ತಿರುತ್ತೇನೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಬುತವಾಗಿ ತೋರಿಸಲಾಗಿದೆ. ನಮ್ಮಗಳ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ. ನಾನು ಈ ಸಿನಿಮಾದಲ್ಲಿ ಅಭಿನಯಿಸಿರುವುದು ಧನ್ಯತಾ ಭಾವ ಇದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೋರ್ವ ನಟಿ ಭವ್ಯ, ಈ ಚಿತ್ರದಲ್ಲಿ ನಾನು ವಿಶೇಷವಾದ ಪಾತ್ರ ಮಾಡಿದ್ದು, ಶೂಟಿಂಗ್ ಸಮಯದಲ್ಲಿ ಕೆಲವೊಂದು ಮಿರಾಕಲ್ ಆಗಿತ್ತು. ಒಂದು ದೃಶ್ಯದಲ್ಲಿ ಗ್ಲಿಸರಿನ್ ಇಲ್ಲದೇ ಅತ್ತಿದ್ದೇನೆ ಕೂಡ ಎಂದು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು. ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ 'ತುಳು ನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಇಡೇರಿದೆ. ಸೋಮೇಶ್ವರ, ಉಲ್ಲಾಳ, ಮಡಂತ್ಯಾರ್ ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದ್ದು, ಚಿತ್ರೀಕರಣ ಮುಕ್ತಾಯವಾಗಿದೆ ಎಂದರು. ಚಿತ್ರದಲ್ಲಿ ಪ್ರಮುಖ ಪ್ರಾತ್ರವೊಂದರಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ.

ಏಕಕಾಲದಲ್ಲಿ ಮೂರು ಭಾಷೆಯಲ್ಲಿ ನಿರ್ಮಾಣ: ಈ ಚಿತ್ರದಲ್ಲಿ ನಾಯಕನಾಗಿ ಭರತ್ ಸೂರ್ಯ ಅಭಿನಯಿಸಿದ್ದು, ಇವರು ಸಿನಿಮಾ ಶೂಟಿಂಗ್ ಮುಗಿಯುವವರೆಗೆ ಕಾಲಿಗೆ ಚಪ್ಪಲಿ ಹಾಕಿಲ್ಲವಂತೆ. ಇನ್ನು ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ನಿರ್ಮಾಣ ಮಾಡಲಾಗಿದೆ. ಧೃತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಬಂಡವಾಳ ಹೂಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕರಿ ಹೈದ ಕರಿ ಅಜ್ಜ ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ:ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಚಿತ್ರರಂಗದ ಅನುಭವ ಹಂಚಿಕೊಂಡ ನಟಿ ಭವ್ಯ

ABOUT THE AUTHOR

...view details