ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಬರುತ್ತಿದ್ದು ಚಿತ್ರಗಳು ಸಿನಿಮಾಪ್ರೀಯರ ಮನಸ್ಸು ಕದಿಯುವಲ್ಲಿ ಯಶಸ್ವಿ ಆಗುತ್ತಿವೆ. ಟ್ಯಾಲೆಂಟೆಡ್ ನಿರ್ದೇಶಕರು ಹಾಗೂ ಯುವ ನಟರೂ ಬಣ್ಣದ ಲೋಕದಲ್ಲಿ ಸಾಧಿಸುವ ತುಡಿತದಿಂದ ಹೊಸ ಆಲೋಚನೆಗಳೊಂದಿಗೆ ಚಿತ್ರರಂಗಕ್ಕೆ ಬರ್ತಿದ್ದಾರೆ. ಈಗ ಇಂಥದ್ದೊಂದು ವಿಭಿನ್ನ ಕಂಟೆಂಟ್ನೊಂದಿಗೆ ಗುಣ ಎಂಬ ಯುವನಟ ಎಂಜಿನಿಯರಿಂಗ್ ಕೆಲಸಕ್ಕೆ ವಿದಾಯ ಹೇಳಿ ಸರ್ಕಾರಿ ಶಾಲೆ ಹೆಚ್8 ಎಂಬ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ.
ಬಹುತೇಕ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಟೈಟಲ್ ಅನ್ನು ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ ಅನಾವರಣ ಮಾಡಿದ್ದಾರೆ. ಈ ಮೂಲಕ ಹೊಸ ತಂಡವನ್ನು ಬೆಂಬಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, "ಸರ್ಕಾರಿ ಶಾಲೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ಸಿಲ್, ಪೆನ್ಗಳನ್ನು ಕೊಡಿ. ಇನ್ಮುಂದೆ ಅಭಿಮಾನಿಗಳು ಕೂಡ ನಮಗೆ ಶಾಲು, ಹಾರ ತೆಗೆದುಕೊಂಡು ಬರುವುದನ್ನು ಬಿಟ್ಟು ಓದುವ ಮಕ್ಕಳಿಗೆ ಬೇಕಾಗುವ ಬ್ಯಾಗ್, ಪುಸ್ತಕ, ಪೆನ್, ಪೆನ್ಸಿಲ್ಗಳನ್ನು ಕೊಡೋಣ" ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ಇದರ ಜೊತೆಗೆ, ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಾಯಕ ಹಾಗೂ ನಿರ್ದೇಶಕರೂ ಆದ ಗುಣ ಮಾತನಾಡಿ, "ನಾನೊಬ್ಬ ಎಂಜಿನಿಯರ್. ನಮ್ಮ ಚಿತ್ರದ ಒಂದು ಲೈನ್ ಕಥೆಯನ್ನು ರಾಘಣ್ಣ ಅವರಿಗೆ ಹೇಳಿದಾಗ ತುಂಬಾ ಚೆನ್ನಾಗಿದೆ ಎಂದು ಇಷ್ಟಪಟ್ಟರು. ಚಿತ್ರದಲ್ಲಿ ಮಹತ್ವದ ಪಾತ್ರವೊಂದನ್ನು ಅವರು ನಿರ್ವಹಿಸುತ್ತಿದ್ದಾರೆ. ಅವರೇ ಟೈಟಲ್ ಲಾಂಚ್ ಮಾಡಿಕೊಟ್ಟಿದ್ದಾರೆ" ಎಂದು ಹೇಳಿದರು.