ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಧರ್ಮಪತ್ನಿ ಭಾರತಿ ವಿಷ್ಣುವರ್ಧನ್ ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮ ಇಂದು ನೆರವೇರಿತು. 'ಯಜಮಾನ'ನ ಕನಸಿನ ನಿವಾಸವನ್ನು ಪತ್ನಿ ನನಸು ಮಾಡಿದ್ದು ಮನೆಗೆ 'ವಲ್ಮೀಕ' ಎಂದು ಹೆಸರಿಡಲಾಗಿದೆ. ಗೃಹಪ್ರವೇಶ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.
ಜಯನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ ಸಿಎಂ ಬೊಮ್ಮಾಯಿ ಅವರು ನಿವಾಸದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ಮನೆಯನ್ನು ವೀಕ್ಷಿಸಿದ ಸಿಎಂಗೆ ನಿವಾಸದೊಳಗೆ ಅಳವಡಿಸಿದ್ದ ವಿಷ್ಣುವರ್ಧನ್ ಅವರ ಬೃಹತ್ ಚಿತ್ರ ಹೆಚ್ಚು ಇಷ್ಟವಾಯಿತು.
ಗೃಹ ಪ್ರವೇಶ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೇರುನಟ ದಿ.ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಬಹಳ ಕಷ್ಟಪಟ್ಟು ಮನೆ ಕಟ್ಟಿಸಿದ್ದಾರೆ. ತುಂಬಾ ಚೆನ್ನಾಗಿ ನಿವಾಸ ನಿರ್ಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, ವಿಷ್ಣು ಸ್ಮಾರಕ ನಿರ್ಮಾಣ ಕುರಿತು ಮಾತುಕತೆ ನಡೆದಿದೆ ಎಂದರು.
ಇದನ್ನೂ ಓದಿ:ಡಾಲಿಯ Once Upon A Time ಜಮಾಲಿಗುಡ್ಡ ರಿಲೀಸ್ ಯಾವಾಗ? ಡೇಟ್ ಫಿಕ್ಸ್
ವಿಷ್ಣುದಾದ ಬೆಳೆದು ಅದೆಷ್ಟೋ ನೆನಪುಗಳಿದ್ದ ಮನೆ ಇದೀಗ ಹೊಸ ರೂಪದಲ್ಲಿ ತಲೆ ಎತ್ತಿದೆ. ಜಯನಗರದಲ್ಲಿದ್ದ ಹಳೆಯ ಮನೆಯನ್ನು ನೆಲಸಮಗೊಳಿಸಲಾಗಿದ್ದು, ಅದೇ ಜಾಗದಲ್ಲಿ ವಲ್ಮೀಕ ನಿರ್ಮಾಣವಾಗಿದೆ.