ಕರ್ನಾಟಕ

karnataka

ETV Bharat / entertainment

'ಕೇಸ್ ಆಫ್ ಕೊಂಡಾಣ': ಖಾಕಿ ಖದರ್‌ನಲ್ಲಿ ಅಬ್ಬರಿಸಲು ಸಜ್ಜಾದ ವಿಜಯ ರಾಘವೇಂದ್ರ

Case of Kondana movie: ವಿಜಯ ರಾಘವೇಂದ್ರ ಅಭಿನಯದ 'ಕೇಸ್ ಆಫ್ ಕೊಂಡಾಣ' ಸಿನಿಮಾ ಜನವರಿ 26ರಂದು ತೆರೆಕಾಣಲಿದೆ.

By ETV Bharat Karnataka Team

Published : Jan 18, 2024, 1:22 PM IST

Updated : Jan 18, 2024, 1:28 PM IST

Case of Kondana movie
ಕೇಸ್ ಆಫ್ ಕೊಂಡಾಣ

ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ‌ ವಿಜಯ ರಾಘವೇಂದ್ರ. ರಾಘು, ಸೀತಾರಾಮ್‌ ಬಿನೋಯ್‌ ಕೇಸ್​ ನಂಬರ್ 18 ಚಿತ್ರಗಳ ಯಶಸ್ಸಿನ ಬಳಿಕ ಈ 'ಚಿನ್ನಾರಿ ಮುತ್ತ' ಮತ್ತೊಂದು ಇನ್ವೆಸ್ಟಿಗೇಷನ್‌ ಜಾನರ್‌ ಕಥೆಯೊಂದಿಗೆ ಸಿನಿಪ್ರೇಮಿಗಳೆದುರು ಬರಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ 'ಕೇಸ್ ಆಫ್ ಕೊಂಡಾಣ' ಎಂಬ ಶೀರ್ಷಿಕೆ ಇಡಲಾಗಿದೆ. ಭಾವನಾ ಮೆನನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಸದ್ಯ ಟ್ರೇಲರ್​ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ 'ಕೇಸ್‌ ಆಫ್ ಕೊಂಡಾಣ' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ದೇವಿಪ್ರಸಾದ್‌ ಶೆಟ್ಟಿ ಚಿತ್ರದ ನಿರ್ದೇಶಕರು. ಈ ಹಿಂದೆ ಸೀತಾರಾಮ್‌ ಬಿನೋಯ್‌ ಕೇಸ್​ ನಂಬರ್ 18 ಚಿತ್ರ ನಿರ್ದೇಶಿಸಿದ್ದ ಇವರೀಗ ಇನ್ವೆಸ್ಟಿಗೇಷನ್‌ ಜಾನರ್‌ನ ಮತ್ತೊಂದು ಸಿನಿಮಾ ಮಾಡಿದ್ದಾರೆ. ಹಲವು ವಿಚಾರಗಳಿಂದ ಟಾಕ್ ಆಗುತ್ತಿರುವ ಕೇಸ್ ಆಫ್ ಕೊಂಡಾಣ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

ಕೇಸ್ ಆಫ್ ಕೊಂಡಾಣ ಚಿತ್ರತಂಡ

ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, "ಜೋಗಿ ಸರ್ ಜೊತೆ ಕೆಲಸ ಮಾಡಿದ್ದು ಬಹಳ ಖುಷಿಕೊಟ್ಟಿದೆ. ಹೆಮ್ಮೆ ಇದೆ. ವಿಜಯ್ ಸರ್ ಎರಡನೇ ಅವಕಾಶ ಕೊಟ್ಟರು. ಕಥೆ ಕೇಳಿ ಗ್ರೀನ್​ ಸಿಗ್ನಲ್ ನೀಡಿದರು. 'ಕೇಸ್​​ ಆಫ್​​ ಕೊಂಡಾಣ' ಸೀತಾರಾಮ್‌ ಬಿನೋಯ್‌ ಕೇಸ್​ ನಂಬರ್ 18 ರೀತಿಯ ಸಿನಿಮಾವಲ್ಲ. ಮೂರ್ನಾಲ್ಕು ಸ್ಟೋರಿ ಮೇಲೆ ಕಥೆ ಸಾಗುತ್ತದೆ. ಇಮ್ಯಾಜಿನರಿ ಕಥೆ. ಹೈಪರ್ ಲಿಂಕ್ ಸಿನಿಮಾ" ಎಂದು ತಿಳಿಸಿದರು.

ನಟ ವಿಜಯ ರಾಘವೇಂದ್ರ ಮಾತನಾಡಿ, "ಹೊಸಬರ ತಂಡ ತಾಳ್ಮೆಯಿಂದ ಕಾದು ಸಂಭಾಷಣೆ ಕೊಟ್ಟಿದ್ದಾರೆ. ಸೀತಾರಾಮ್‌ ಬಿನೋಯ್‌ ಕೇಸ್​ ನಂಬರ್ 18 ಆದ ಮೇಲೆ ಇನ್ನೊಂದು ಹಂತ ಬೆಳೆಯಬೇಕು, ಬೆಳವಣಿಗೆ ಕಾಣಬೇಕು ಎಂದುಕೊಂಡಿದ್ದೆವು. ಕೇಸ್ ಕೊಂಡಾಣದ ಶೇ.80ರಿಂದ 90ರಷ್ಟು ಶೂಟಿಂಗ್​ ಅನ್ನು ರಾತ್ರಿ ವೇಳೆ ಮಾಡಲಾಗಿದೆ. ಆ್ಯಕ್ಷನ್, ಎಮೋಷನ್ ಎಲ್ಲಾ ಒಟ್ಟಿಗೆ ಸಾಗುತ್ತದೆ. ಒಬ್ಬ ನಟನಾಗಿ ನಾನು ಬಹಳಷ್ಟು ಕಲಿತ್ತಿದ್ದೇನೆ. ಖುಷಿ ಖುಷಿಯಿಂದ ಕೆಲಸ ಮಾಡಿದ್ದೇವೆ. ನಮ್ಮ ಸಿನಿಮಾದ ಕಂಟೆಂಟ್ ಮೇಲೆ ನಂಬಿಕೆ ಇದೆ" ಎಂದರು.

ಜೋಗಿ ಮಾತನಾಡಿ, "ಹೊಸ ಹುಡುಗರ ಜೊತೆ ನಮಗೆ ಕಲಿಯುವುದು ಬಹಳಾನೇ ಇರುತ್ತದೆ. ಹೇಳಿದ ಕಥೆ ಬಹಳ ಚೆನ್ನಾಗಿತ್ತು. ಈ ಕಥೆ ಸಂಜೆ ಶುರುವಾಗಿ ರಾತ್ರಿ ನಡೆಯುತ್ತದೆ. ಬೆಳಿಗ್ಗೆ ಮುಗಿಯುತ್ತದೆ. ಕೊಂಡಾಣ ಇರುವುದು ದೇವಿಪ್ರಸಾದ್ ಮನಸ್ಸಿನಲ್ಲಿ. ಪ್ರತಿ ಪಾತ್ರವೂ ದ್ರೋಹ ಮತ್ತು ದ್ರೋಹ ಕಂಡುಹಿಡಿಯುವ ಪಾತ್ರಗಳಾಗಿವೆ. ಡೈಲಾಗ್ ರೈಟರ್ ಆಗಿ ನನ್ನನ್ನು ಈ ತಂಡ ಬಹಳಷ್ಟು ತಿದ್ದಿದೆ. ಸಿನಿಮಾ ಪ್ರೀತಿಯಿಂದ ಬಂದ ಹುಡುಗರು ಅದ್ಭುತ ಸೆಟ್​ನಲ್ಲಿ ಶೂಟ್ ಮಾಡಿದ್ದಾರೆ. ಈ ರೀತಿ ನಿರ್ದೇಶಕರು ಹಾಗೂ ನಿರ್ಮಾಪಕರು ಬೇಕು" ಎಂದು ತಿಳಿಸಿದರು.

ನಿರ್ಮಾಪಕ ಸಾತ್ವಿಕ್ ಹೆಬ್ಬಾರ್, "ಸೀತಾರಾಮ್‌ ಬಿನೋಯ್‌ ಕೇಸ್​ ನಂಬರ್ 18 ಮಾಡಿದ್ದು ಅನಿವಾರ್ಯದಿಂದ. ಡೈರೆಕ್ಷನ್​ ವಿಭಾಗದಲ್ಲಿ ನಾನು ದೇವಿ ಪ್ರಸಾದ್ ಕೆಲಸ ಮಾಡುತ್ತಿದ್ದೆವು. ಸ್ವತಂತ್ರ್ಯವಾಗಿ ಸಿನಿಮಾ ಮಾಡಲು ಹೊರಟಾಗ ಆಗಿದ್ದು ಸೀತಾರಾಮ್ ಬಿನೋಯ್‌ ಕೇಸ್​ ನಂಬರ್ 18. ಈ ಚಿತ್ರಕ್ಕೆ ಜನರ ಮೆಚ್ಚುಗೆ ಸಿಕ್ಕಿತ್ತು. ಇನ್ನೊಂದು ಹೆಜ್ಜೆ ಇಟ್ಟಾಗ ಆಗಿದ್ದು 'ಕೇಸ್ ಆಫ್ ಕೊಂಡಾಣ' ಎಂದರು.

ಇದನ್ನೂ ಓದಿ:₹200 ಕೋಟಿ ಕ್ಲಬ್‌ನತ್ತ 'ಕಾಟೇರ': ದಚ್ಚು 'ಬಾಕ್ಸ್ ಆಫೀಸ್ ಬಾಸ್‌' ಎಂದ ಫ್ಯಾನ್ಸ್

ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದ್ದು, ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಕಥೆ ಹೆಣೆಯಲಾಗಿದೆ. ಹೈಪರ್‌ ಲಿಂಕ್ ನಿರೂಪಣೆಯನ್ನು ಹೊಂದಿರುವ ಕೇಸ್ ಆಫ್ ಕೊಂಡಾಣದಲ್ಲಿ ಖುಷಿ ರವಿ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಅಭಿನಯಿಸಲಿದ್ದಾರೆ. ಎಮೋಷನ್, ಕ್ರೈಂ, ಆ್ಯಕ್ಷನ್ ಇರಲಿದೆ. ಪ್ರೇಕ್ಷಕರನ್ನು ಹಿಡಿದು ಕೂರಿಸುವ ಕಥೆ ಇದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ:ಸಲಾರ್​ ಸ್ಪೆಷಲ್​​​​: ಪ್ರಭಾಸ್​, ಪೃಥ್ವಿರಾಜ್ ಸುಕುಮಾರನ್​​​, ಶ್ರುತಿ ಹಾಸನ್​ ಚಿಟ್​ ಚಾಟ್​ ನೋಡಿ

ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೇಕಲ್ ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯರುವ ಈ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಅವರು ಸಾತ್ವಿಕ್ ಹೆಬ್ಬಾರ್ ಜೊತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕೇಸ್ ಆಫ್ ಕೊಂಡಾಣ ಜನವರಿ 26ರಂದು ಪ್ರೇಕ್ಷಕರೆದುರು ಬರಲಿದೆ.

Last Updated : Jan 18, 2024, 1:28 PM IST

ABOUT THE AUTHOR

...view details