ಚೇತರಿಕೆ ಮಾರ್ಗದಲ್ಲಿದ್ದ ಬಾಲಿವುಡ್ಗೆ ಮತ್ತೊಮ್ಮೆ ಬಾಯ್ಕಾಟ್ ಬಿಸಿ ತಾಗಿದೆ. ಕಿಂಗ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಪಠಾಣ್ ಸಿನಿಮಾ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಬೇಶರಂ ಹಾಡು ರಿಲೀಸ್ ಆಗಿದ್ದೇ ತಡ ಅದನ್ನು ಮೆಚ್ಚಿ ಕೊಂಡಾಡಿದವರು ಒಂದಿಷ್ಟು ಮಂದಿಯಾದರೆ, ಹಾಡಿನಲ್ಲಿ ನಟಿಯ ವೇಷಭೂಷಣ ಮತ್ತು ಕೇಸರಿ ಬಣ್ಣದ ಬಿಕಿನಿ ಬಗ್ಗೆ ವಿರೋಧ ವ್ಯಕ್ತಪಡಿಸಿದವರು ಮತ್ತೊಂದಿಷ್ಟು ಮಂದಿ.
ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನಂತರ ಈಗ ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಈ 'ಪಠಾಣ್' ಚಿತ್ರ 'ಸನಾತನ ಸಂಸ್ಕೃತಿ'ಯನ್ನು ಅವಮಾನಿಸಿದೆ ಎಂದು ಆರೋಪಿಸಿ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬಿಜೆಪಿ ಮುಖಂಡ ರಾಜೇಶ್ ಕೇಸರವಾಣಿ ಮಾತನಾಡಿ, ''ಸಿನಿಮಾದ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅಸಭ್ಯವಾಗಿ ತೋರಿಸಲಾಗಿದ್ದು, ಹಿಂದೂ ಸಮಾಜ ಮತ್ತು ಸನಾತನ ಸಂಸ್ಕೃತಿಗೆ ಅವಮಾನವಾಗಿದೆ. ಹೀಗಾಗಿ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ರಾಜ್ಯ ಸರ್ಕಾರವು ಉತ್ತರ ಪ್ರದೇಶದಲ್ಲಿ ಚಲನಚಿತ್ರವನ್ನು ನಿಷೇಧಿಸಬೇಕು ಮತ್ತು ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಉತ್ತರ ಪ್ರದೇಶದ ಕೆಲ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.