ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಭಾನುವಾರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯಲಿರುವ ಬಿಗ್ ಬಾಸ್ ಸೀಸನ್ 10ಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಸೀಸನ್ನ ಗ್ರಾಂಡ್ ಇವೆಂಟ್ ಭಾನುವಾರದಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ ಶುರುವಾಗಿದೆ.
ಬಿಗ್ ಬಾಸ್ ರಿಯಾಲಿಟಿ ಶೋನ ಒಂಭತ್ತು ಆವೃತ್ತಿಗಳು ಯಶಸ್ವಿಯಾಗಿದ್ದು, ಅಪಾರ ಸಂಖ್ಯೆಯ ವೀಕ್ಷಕರನ್ನು ಪಡೆದಿದೆ. ಬಿಗ್ ಬಾಸ್ನಲ್ಲಿನ ಸುದೀಪ್ ನಿರೂಪಣೆ ಅತಿ ಹೆಚ್ಚು ಜನರನ್ನು ಕಾರ್ಯಕ್ರಮ ವೀಕ್ಷಿಸುವಂತೆ ಮಾಡಿದೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ವೀಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಉಂಟು ಮಾಡಿತ್ತು. ಜೊತೆಗೆ ವಿವಿಧ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಇದರ ನಡುವೆ ಇಂದು ನಡೆದ ಬಿಗ್ಬಾಸ್ ಗ್ರಾಂಡ್ ಪ್ರೀಮಿಯರ್ನಲ್ಲಿ ಬಿಗ್ಬಾಸ್ ಸ್ಪರ್ಧಿಗಳನ್ನು ಪರಿಚಯಿಸಲಾಗಿದೆ.
ಬಿಗ್ ಬಾಸ್ ಸೀಸನ್ 10 : ಜಗತ್ತಿನ ಅತಿದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಿಗ್ಬಾಸ್ ಸ್ಪರ್ಧಿಗಳ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿತ್ತು. ಕೊನೆಗೂ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿದೆ. ಇದಕ್ಕೂ ಮುನ್ನ ಬಿಗ್ಬಾಸ್ ಮನೆಗೆ ಹೋಗುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ಹೊಸ ಸಾಂಗ್, ಹೊಸ ಮನೆ, ಹೊಸ ಸ್ಪರ್ಧಿ, ಈ ಬಾರಿ ಬೇರೆನೇ ಲೆಕ್ಕಾಚಾರ: ಈ ಬಾರಿಯ ಬಿಗ್ಬಾಸ್ನಲ್ಲಿ ಹಲವು ವಿಶೇಷ ಸ್ಪರ್ಧಾಳುಗಳನ್ನು ಕರೆತರಲಾಗಿದೆ. ಬಿಗ್ಬಾಸ್ ಮನೆಯಲ್ಲಿ ಅಬ್ಬರಿಸಲು ಮೊದಲ ಕಂಟೆಸ್ಟಂಟ್ ಆಗಿ ಪುಟ್ಟ ಗೌರಿಯ ಮದುವೆ ಧಾರಾವಾಹಿಗಳಲ್ಲಿ ಮಿಂಚಿರುವ ನಮ್ರತಾ ಅವರು ಆಗಮಿಸಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟ ಸ್ನೇಹಿತ್ ಅವರು ಬಿಗ್ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಮೂರನೇ ಬಿಗ್ ಬಾಸ್ ಸ್ಪರ್ಧಿಯಾಗಿ ರ್ಯಾಪರ್ ಈಶಾನಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಹರಹರ ಮಹಾದೇವ್ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಮಿಂಚಿದ್ದ ವಿನಯ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಐದನೇ ಸ್ಪರ್ಧಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಬಿಗ್ ಬಾಸ್ಗೆ ಎಂಟ್ರಿಯಾಗಿದ್ದಾರೆ. ಆರನೇ ಸ್ಪರ್ಧಿಯಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತೃತೀಯ ಲಿಂಗಿ ನೀತು ವನಜಾಕ್ಷಿ ಆಯ್ಕೆಯಾಗಿದ್ದಾರೆ. ಏಳನೇ ಸ್ಪರ್ಧಿಯಾಗಿ ರಂಗೋಲಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಸಿರಿ ಬಿಗ್ಬಾಸ್ ಅಂಗಳಕ್ಕೆ ಧುಮುಕಿದ್ದಾರೆ. ಎಂಟನೇ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತ, ಮೈಸೂರಿನ ಸ್ನೇಕ್ ಮಾಸ್ಟರ್ ಸ್ನೇಕ್ ಶ್ಯಾಮ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
9ನೇ ಕಂಟೆಸ್ಟಂಟ್ ಆಗಿ ಧಾರವಾಹಿ ನಟಿ ಭಾಗ್ಯಶ್ರೀ ಬಿಗ್ ಮನೆಗೆ ಕಾಲಿರಿಸಿದ್ದಾರೆ. ಸೋಮವಾರದಿಂದ ಬಿಗ್ಬಾಸ್ ಕಾರ್ಯಕ್ರಮ ಆರಂಭವಾಗಿದ್ದು, ಅಸಲಿ ಆಟ ಇನ್ನು ಶುರುವಾಗಲಿದೆ.
ತುಕಾಲಿ ಸಂತೋಷ್:ಡಿಫರೆಂಟ್ ಆಗಬೇಕು ಎಂಬ ಹಂಬಲದಲ್ಲಿ ‘ತುಕಾಲಿ’ ಎಂಬುದನ್ನು ತಮ್ಮ ಹೆಸರಿಗೇ ಅಂಟಿಸಿಕೊಂಡಿರುವ ಸಂತೋಷ್ ಅವರು ಬಿಗ್ಬಾಸ್ ಮನೆಯೊಳಗೆ ಸಂತೋಷದ ನಗುವನ್ನು ಹರಡುವ ಆಸೆಯಿಂದ ಹೊರಡುತ್ತಿದ್ದಾರೆ. ತುಕಾಲಿ ಎಂಬ ಬೈಗುಳವನ್ನು ಹೆಮ್ಮೆಯಿಂದ ಸ್ವೀಕರಿಸುವ ಸಂತೋಷ್ ಅವರು ಹೆಂಡತಿಯನ್ನು ಬಿಟ್ಟು, ಸಿಂಗಲ್ ಆಗಿ ಮನೆಯೊಳಗೆ ಕಾಲಕಳೆಯುವ ಹಂಬಲದಿಂದ ಬಂದಿದ್ದರು. ಗಂಡ-ಹೆಂಡತಿ ಇಬ್ಬರ ಕಾಲೆಳೆಯುವ ಖುಷಿಯನ್ನು ನೋಡಲು ಕಿಚ್ಚ ಆಸೆಪಟ್ಟರು. ಅದಕ್ಕೂ ಜನತಾ ವೋಟಿಂಗ್ ಅನ್ನು ಅಪೇಕ್ಷಿಸಿದ ಕಿಚ್ಚ ಅವರ ಊಹೆಯಂತೆ ಜನರೂ ಸಂತೋಷ್ ದಂಪತಿ ಒಟ್ಟಿಗೆ ಮನೆಯೊಳಗೆ ಹೋಗಬೇಕು ಎಂದು ಆಸೆಪಟ್ಟರು. ಇದಕ್ಕೆ ಪ್ಯಾನಲಿಸ್ಟ್ ಕೂಡ ಅನುಮೋದನೆ ಕೊಟ್ಟರು.
ಸ್ಟೇಜ್ ಮೇಲೆಯೇ ಕಿಚ್ಚ ಕೊಟ್ಟ ಟಾಸ್ಕ್ನಲ್ಲಿ ಗೆದ್ದ ಸಂತೋಷ್, ಹೆಂಡತಿಯನ್ನು ಹೊರಗಡೆಯೇ ಬಿಟ್ಟು ಮನೆಯೊಳಗೆ ಹೋಗುತ್ತಿದ್ದಾರೆ. ಇದುವರೆಗಿನ ಸ್ಪರ್ಧಿಗಳಲ್ಲಿ ಜನರಿಂದ ಅತಿ ಹೆಚ್ಚು ಅಂದರೆ, 93% ಪಡೆದು, ಹೆಂಡತಿಯಿಂದ ಬೀಳ್ಕೊಟ್ಟು ಮನೆಯೊಳಗೆ ಅಡಿಯಿಟ್ಟಿದ್ದಾರೆ. ಮನೆಯೊಳಗೆ ನಗೆಹೊನಲನ್ನು ಹರಿಸಲು ಸಂತೋಷ್ ರೆಡಿಯಾಗಿದ್ದಾರೆ.
ವಿನಯ್ ಗೌಡ:‘ಹರಹರ ಮಹಾದೇವ’ ಶಿವನ ಪಾತ್ರವನ್ನು ಮಾಡಿ ಮನೆಮನಗಳೀಗೆ ಮುಟ್ಟಿದವರು ವಿನಯ್ ಗೌಡ. ಬಿಗ್ಬಾಸ್ವರೆಗೂ ಒಂದು ಜರ್ನಿ, ಬಿಗ್ ಬಾಸ್ ನಂತರವೇ ಇನ್ನೊಂದು ಜರ್ನಿ ಅನ್ನೋದು ಅವರ ಮಾತು. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್ ಅವರಿಗೆ ಪತ್ನಿಯೇ ಸರ್ವಸ್ವ. ಹದಿನಾಲ್ಕು ವರ್ಷದ ಮುದ್ದು ಮಗ ರಿಷಭ್ ಎಂದರೆ ಪಂಚಪ್ರಾಣ.
ನೀತು ವನಜಾಕ್ಷಿ:‘ಯಾರಮ್ಮಾ ಇವಳು ಚೆಲುವೆ’ ಎಂಬ ಹಾಡಿನೊಂದಿಗೆ ಬಿಗ್ಬಾಸ್ ವೇದಿಕೆಯ ಮೇಲೆ ಕಾಣಿಸಿಕೊಂಡ ನೀತು ವನಜಾಕ್ಷಿ, ಟ್ರಾನ್ಸ್ಜೆಂಡರ್ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್ಬಾಸ್ ವೇದಿಕೆಗೆ ಬಂದಿದ್ದಾರೆ. ‘ತನ್ನ ಬದುಕಿನಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮಹಾನಗರಕ್ಕೆ ಬಂದ ಮಂಜು, ಬಳಿಕ ನೀತು ವನಜಾಕ್ಷಿಯಾಗಿದ್ದು ಒಂದು ಸಾಧನೆಯ ಕಥೆಯೇ ಸರಿ. ತಾನೊಬ್ಬಳು ತೃತೀಯಲಿಂಗಿ ಎಂದು ಗುರುತಿಸಿಕೊಂಡ ಅವರಿಗೆ ತಾಯಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾದರು.
ತಮ್ಮ ಹೆಸರಿನ ಜೊತೆಗೇ ಇರುವ ನೀತು ಅವರ ತಾಯಿ ವನಜಾಕ್ಷಿ ಅವರ ಬದುಕಿನ ಜೊತೆಗೂ ಇದ್ದಾರೆ. ಚಿತ್ರಕಲೆಯ ಅವರ ಆಸಕ್ತಿ. ತನ್ನ ಐಡೆಂಟಿಟಿ ಬೆಳೆಸಿಕೊಳ್ಳಬೇಕು ಎಂದು ಟ್ಯಾಟೋ ಆರ್ಟಿಸ್ಟ್ ಆಗಿ ಬದುಕಿನ ಸುಂದರ ಚಿತ್ರವನ್ನು ತಾವೇ ಬಿಡಿಸಿಕೊಳ್ಳಲು ಆರಂಭಿಸಿರುವ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಮಾಡೆಲಿಂಗ್ನಿಂದ ನಟನೆಯ ಕ್ಷೇತ್ರಕ್ಕೂ ಕಾಲಿಟ್ಟಿರುವ ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೀತು ಅವರಿಗೆ ಪ್ರೇಕ್ಷಕಪ್ರಭುಗಳು 86% ವೋಟ್ ನೀಡಿ ಮನೆಯೊಳಗೆ ಕಳಿಸಿದ್ದಾರೆ.
ನಟಿ ಸಿರಿ:30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ‘ನಾನು ನಾನಾಗಿರಬೇಕು’ ಎಂಬ ಆಸೆಯೊಂದಿಗೆ ಅವರು ಬಿಗ್ಬಾಸ್ ವೇದಿಕೆಗೆ ಬಂದಿದ್ದಾರೆ. ಸಿರಿಯನ್ನು ತೆರೆಯ ಮೇಲಿನ ಪಾತ್ರವಾಗಿಯಷ್ಟೇ ನೋಡಿದ್ದ ಜನರಿಗೆ ತನ್ನ ನಿಜವಾದ ವ್ಯಕ್ತಿತ್ವವನ್ನು ತೋರಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಸೂಕ್ಷ್ಮ ವ್ಯಕ್ತಿತ್ವದ, ತುಸು ಕೋಪಿಷ್ಠರಾದ ಸಿರಿಅವರಿಗೆ ಜನರು 83% ವೋಟ್ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ತಂದೆಯ ನೆನಪಿಸಿಕೊಂಡು ಬಲಗಾಲಿಟ್ಟು ಸಿರಿ ಮನೆಯೊಳಗೆ ಹೋಗಿದ್ದಾರೆ.
ಸ್ನೇಕ್ ಶಾಮ್ :ಹಾವುಗಳ ಜೊತೆ ಸರಸವಾಡುವುದನ್ನೇ ವೃತ್ತಿ-ಪ್ರವೃತ್ತಿಯನ್ನಗಿಸಿಕೊಂಡಿರುವ ಸ್ನೇಕ್ ಶ್ಯಾಮ್ ತಮ್ಮ ವಿಶಿಷ್ಟ ಕಾಸ್ಟ್ಯೂಮ್ನಿಂದಲೇ ಜನರ ಗಮನ ಸೆಳೆಯುತ್ತಾರೆ. ‘ಡಿಫರೆಂಟ್ ಆಗಿದ್ದರೆ ಮಾತ್ರ ಜನ ಗುರ್ತಿಸುವುದು’ ಎನ್ನುವ ಶ್ಯಾಮ್ ತಮ್ಮ ಪ್ರಸಿದ್ಧಿಗೆ ಆ ಶಿವಪ್ಪನ ಕತ್ತಲ್ಲಿರುವ ಹಾವೇ ಕಾರಣ ಎನ್ನುತ್ತಾರೆ. ವಿಷದ ಹಾವು ಹಿಡಿಯುತ್ತಲೇ ಜನರಲ್ಲಿ ಸಂತೋಷದ ನಗು ಉಕ್ಕಿಸುವ ಹವ್ಯಾಸವಾಗಿಸಿಕೊಂಡಿರುವ ಶ್ಯಾಮ್ಗೆ ಸೆಲೆಬ್ರಿಟಿ ಆಗುವುದಕ್ಕಿಂತ ಜನರ ಸ್ನೇಹಿತರಾಗಿ ಇರುವುದೇ ಇಷ್ಟ.