ಸಂಗೀತ ಸಂಯೋಜಕ ಮತ್ತು ಖ್ಯಾತ ಗಾಯಕ ಎ ಆರ್ ರೆಹಮಾನ್ ವಿರುದ್ಧ ಹಣ ವಂಚನೆ ಆರೋಪ ಮಾಡಿ ದೂರು ದಾಖಲಿಸಿರುವ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ (Association of Surgeons of India)ಕ್ಕೆ ರೆಹಮಾನ್ ಪರ ವಕೀಲರು ನೋಟಿಸ್ ಕಳುಹಿಸಿದ್ದಾರೆ. ಎ ಆರ್ ರೆಹಮಾನ್ ವಿರುದ್ಧ ಮಾಡಿರುವ ಸುಳ್ಳು ಆರೋಪಕ್ಕೆ ಕ್ಷಮೆಯಾಚಿಸಬೇಕು ಮತ್ತು ಅವರ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿರುವುದಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತೀಯ ಶಸ್ತ್ರಚಿಕಿತ್ಸಕರ ಸಂಘವು ಎಆರ್ ರೆಹಮಾನ್ ವಿರುದ್ಧ ಸೆಪ್ಟೆಂಬರ್ 27 ರಂದು ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿತ್ತು. ಅದರಲ್ಲಿ, 2018ರ ಡಿಸೆಂಬರ್ 26 ರಿಂದ 30 ರವರೆಗೆ ಚೆನ್ನೈನಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಮ್ಮೇಳನವನ್ನು ನಡೆಸಲು ನಾವು ಯೋಜಿಸಿದ್ದೆವು. ಈ ಸಮ್ಮೇಳನದಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಖ್ಯಾತ ಗಾಯಕ ಎಆರ್ ರೆಹಮಾನ್ ಅವರಿಗೆ ಮುಂಗಡವಾಗಿ 29 ಲಕ್ಷ 50 ಸಾವಿರ ರೂ ನೀಡಲಾಗಿತ್ತು.
ಆದರೆ, ಈ ಕಾರ್ಯಕ್ರಮ ನಡೆಸಲು ತಮಿಳುನಾಡು ಸರ್ಕಾರ ಸ್ಥಳ ಮತ್ತು ಅನುಮತಿ ನೀಡಿರಲಿಲ್ಲ. ಹಾಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಬಳಿಕ ಎಆರ್ ರೆಹಮಾನ್ ಅವರಿಗೆ ನೀಡಿದ್ದ ಮುಂಗಡ ಹಣವನ್ನು ವಾಪಸ್ ಕೊಡುವಂತೆ ಕೋರಿ ಸಂಘದಿಂದ ಪತ್ರ ಕಳುಹಿಸಲಾಗಿತ್ತು. ಅದಕ್ಕೆ ಒಪ್ಪಿಗೆ ಸೂಚಿಸಿದ ಗಾಯಕ ಎಆರ್ ರೆಹಮಾನ್ 29.50 ಲಕ್ಷದ ಚೆಕ್ ನೀಡಿದ್ದರು. ಬಳಿಕ ಅವರು ನೀಡಿದ್ದ ಚೆಕ್ನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ.
ಹಾಗಾಗಿ ಕಳೆದ 5 ವರ್ಷಗಳಿಂದ ನಮ್ಮ ಹಣ ಹಿಂತಿರುಗಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಆದರೆ ಈವರೆಗೂ ನಮ್ಮ ಹಣ ವಾಪಸ್ ಬಂದಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ನಮ್ಮ ಹಣ ವಾಪಸ್ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ವಕೀಲೆ ಶಬನಂ ಭಾನು ಎಂಬುವವರ ಮೂಲಕ ಎಆರ್ ರೆಹಮಾನ್ ಅವರಿಗೆ ನೋಟಿಸ್ ಕೂಡ ಕಳುಹಿಸಿದ್ದಾರೆ.
ಈ ಸಂಬಂಧ ಎಆರ್ ರೆಹಮಾನ್ ಪರವಾಗಿ ಮದ್ರಾಸ್ ಹೈಕೋರ್ಟ್ನ ವಕೀಲ ನರ್ಮದಾ ಸಂಪತ್ ಅವರು ಭಾರತೀಯ ಶಸ್ತ್ರಚಿಕಿತ್ಸಕರ ಸಂಘಕ್ಕೆ ಪ್ರತಿ ನೋಟಿಸ್ ಕಳುಹಿಸಿದ್ದಾರೆ. ಅದರಲ್ಲಿ, ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಮತ್ತು ಗೌರವಾನ್ವಿತ ವ್ಯಕ್ತಿಯಾಗಿರುವ ಎಆರ್ ರೆಹಮಾನ್ ಅವರು ಸಮಾಜದಲ್ಲಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆದರೇ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅವರ ವಿರುದ್ಧ ಹೊರಿಸಿರುವ ಆರೋಪ ಮಾನಹಾನಿಕರ ಮತ್ತು ಸುಳ್ಳು ಎಂದು ಅವರು ಹೇಳಿದ್ದಾರೆ.
ಎಆರ್ ರೆಹಮಾನ್ ಅವರು ಸರ್ಜನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘದೊಂದಿಗೆ ಯಾವುದೇ ಒಡನಾಟ ಅಥವಾ ಒಪ್ಪಂದವನ್ನು ಮಾಡಿಕೊಂಡಿಲ್ಲ. ಅವರ ವಿರುದ್ಧ ಸುಳ್ಳು ಪ್ರಚಾರ ಮಾಡಲು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಮುಂಗಡ ಹಣವನ್ನು ಎಆರ್ ರೆಹಮಾನ್ ಪಡೆದಿಲ್ಲ. ಮೂರನೇ ವ್ಯಕ್ತಿಗೆ ಹಣ ನೀಡಿರುವ ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ಅನಗತ್ಯವಾಗಿ ರೆಹಮಾನ್ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದೆ. ರೆಹಮಾನ್ ಅವರಿಗೆ ಕಳುಹಿಸಿರುವ ನೋಟಿಸ್ ಅನ್ನು 3 ದಿನಗಳಲ್ಲಿ ಹಿಂಪಡೆಯಬೇಕು. ಅಲ್ಲದೇ ಅವರ ಪ್ರತಿಷ್ಠೆಗೆ ಧಕ್ಕೆ ತಂದಿರುವುದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಜತೆಗೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಇದನ್ನು ತಪ್ಪಿದಲ್ಲಿ ಕಾನೂನು ಮತ್ತು ಕ್ರಿಮಿನಲ್ ಕ್ರಮ ಜರುಗಿಸಲಾಗುವುದು ಎಂದು ವಕೀಲ ನರ್ಮದಾ ಸಂಪತ್ ಅವರು ನೋಟಿಸ್ ಕಳುಹಿಸಿದ್ದಾರೆ.
ಇದನ್ನೂ ಓದಿ:ಗೋಲ್ಡನ್ ಗೌನ್ನಲ್ಲಿ ಗೋಲ್ಡನ್ ಗರ್ಲ್: ಆಕರ್ಷಣೀಯ ನೋಟದಲ್ಲಿ ಅಂದಗಾತಿ ಐಶ್ವರ್ಯಾ ರೈ