ಕರ್ನಾಟಕ

karnataka

ETV Bharat / entertainment

'ಅಪರೂಪ'ದ ಪ್ರೇಮಕಥೆ ಹೇಳಲು ಬರುತ್ತಿದ್ದಾರೆ ಅರಸು ಸಿನಿಮಾ‌ ನಿರ್ದೇಶಕ

'ಅಪರೂಪ' ಶೀರ್ಷಿಕೆಯ ಸಿನಿಮಾ ಜುಲೈ 14ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

By

Published : Jun 30, 2023, 10:33 AM IST

Aparoopa movie
ಅಪರೂಪ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಅರಸು, ಆಕಾಶ್‌, ಅಭಯ್‌, ಅಜಿತ್‌, ಅತಿರಥ ಸೇರಿದಂತೆ ಹಲವು ವಿಭಿನ್ನ ಹಾಗೂ ವಿಶಿಷ್ಟ ಪ್ರೇಮ ಕಥೆಗಳನ್ನು ನಿರ್ದೇಶಿಸಿ ಸೈ‌ ಎನಿಸಿಕೊಂಡಿರುವ ನಿರ್ದೇಶಕ ಮಹೇಶ್ ಬಾಬು ಸಾರಥ್ಯದಲ್ಲಿ 'ಅಪರೂಪ'ದ ಪ್ರೇಮಕಥೆಯೊಂದು ರೆಡಿಯಾಗಿದೆ. ಅವರ 'ಅಪರೂಪ' ಶೀರ್ಷಿಕೆಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರೇಮಕಥೆಯುಳ್ಳ ಈ ಸಿನಿಮಾದ ಮೂಲಕ ಸುಘೋಷ್‌ ಮತ್ತು ಹೃತಿಕಾ ಕನ್ನಡ ಸಿನಿ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಅಹಂ ಪರಿಣಾಮಗಳು:ವಿಭಿನ್ನ ಪ್ರೇಮಕಥೆ ಇರುವ 'ಅಪರೂಪ' ಸಿನಿಮಾದಲ್ಲಿ ನಾಯಕ ನಾಯಕಿಯ ನಡುವೆ ಬರುವ 'ಅಹಂ' ವಿಲನ್‌ ಆಗುತ್ತದೆ. ಅದರಿಂದ ಏನೇನು ತೊಂದರೆ ಉಂಟಾಗುತ್ತದೆ ಅನ್ನೋದನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ನಾಯಕ ಸುಘೋಷ್ ಅವರು ಮೂಲತಃ ಮಂಡ್ಯದವರು. ಸಣ್ಣ ವಯಸ್ಸಿನಿಂದಲೇ ಸಿನಿಮಾ‌ ಕನಸು ಕಟ್ಟಿಕೊಂಡವರು. ಮಹೇಶ್ ನಿರ್ದೇಶನದ ಅತಿರಥ ಸಿನಿಮಾದಲ್ಲಿ ಇವರು ನಟಿಸಿದ್ದರು. ಆ ಚಿತ್ರದಲ್ಲಿ ಅವರ ನಟನೆ ನೋಡಿ ಅಪರೂಪ ಸಿನಿಮಾಗೆ ನಾಯಕರನಾಗಿ ನಟಿಸುವ ಅವಕಾಶ ನೀಡಿದ್ದಾರೆ.

ಜುಲೈ 14ರಂದು ತೆರೆಕಾಣಲಿದೆ ಅಪರೂಪ ಸಿನಿಮಾ

ಅಪರೂಪ ಸಿನಿಮಾದಲ್ಲಿ ಹೊಸ ಪ್ರತಿಭೆಗಳು: ನೃತ್ಯದಲ್ಲಿಯೂ ಪರಿಣಿತರಾಗಿರುವ ಸುಘೋಷ್, ಕಷ್ಟಕರವಾದ ಸ್ಟೆಪ್ಸ್ ಗಳನ್ನು ಸರಾಗವಾಗಿ ಮಾಡುವಂತಹ ಸಾಮರ್ಥ್ಯ, ಕಲೆ ಹೊಂದಿದ್ದಾರೆ. ಅವರು ಸ್ಟೆಪ್​ ಹಾಕಿರುವ 'ಲವ್ ಗೆ ನೋ ನೋ' ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕಿ ಹೃತಿಕಾ ಅವರು ತೆಲುಗಿನ ಖ್ಯಾತ ನಟಿ ಅಮನಿ ಅವರ ಸಹೋದರನ ಪುತ್ರಿ. ವಿಷ್ಣುವರ್ಧನ್ ನಟನೆಯ ಅಪ್ಪಾಜಿ ಚಿತ್ರದಲ್ಲಿ ಅಮನಿ ನಾಯಕಿಯಾಗಿ ಅಭಿನಯಿಸಿದ್ದರು.

ಇದನ್ನೂ ಓದಿ:Janhvi Kapoor: ಮಿಂಚುವ ಉಡುಗೆಯಲ್ಲಿ ಮಿನುಗಿದ ಸೌಂದರ್ಯದ ಖನಿ ಜಾನ್ವಿ ಕಪೂರ್ PHOTOS

ಅಪರೂಪ ಚಿತ್ರತಂಡ:ಅಶೋಕ್ , ಅರುಣಾ ಬಲರಾಜ್, ಅವಿನಾಶ್, ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕುರಿಪ್ರತಾಪ್, ಕಡ್ಡಿಪುಡಿ‌ ಚಂದ್ರು, ಮೋಹನ್ ಜುನೇಜಾ ಸೇರಿದಂತೆ ಸಾಕಷ್ಟು ಕಲಾವಿದರು ಈ ಅಪರೂಪ ಚಿತ್ರದಲ್ಲಿದ್ದಾರೆ. ಪ್ರಜ್ವಲ್‌ ಪೈ ಸಂಗೀತವಿರುವ ಹಾಡುಗಳಿಗೆ ಅರ್ಮಾನ್​ ಮಲಿಕ್​​, ಅನಿರುದ್ಧ್ ಶಾಸ್ತ್ರೀ, ಸಂಗೀತ ರವೀಂದ್ರನಾಥ್, ಪ್ರಜ್ವಲ್ ಪೈ ದನಿ ನೀಡಿದ್ದಾರೆ. ಅಲ್ಲದೇ ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಒಂದು ಹಾಡಿಗೆ ದನಿಯಾಗಿರುವುದು ವಿಶೇಷ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಅಪರೂಪ ಸಿನಿಮಾದ ಶೂಟಿಂಗ್​​ ನಡೆಸಲಾಗಿದೆ. ಸೂರ್ಯಕಾಂತ್‌ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ಅಡಿ ತಯಾರಾಗಿರುವ ಅಪರೂಪ ಸಿನಿಮಾವನ್ನು ಕೆಆರ್ ಜಿ ಸ್ಟುಡಿಯೋಸ್ ಮೂಲಕ ಜುಲೈ 14ರಂದು ರಾಜ್ಯಾದ್ಯಂತ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲ್ಯಾನ್​ ಹಾಕಿಕೊಂಡಿದೆ. ಕನ್ನಡ ಸಿನಿಮಾಗಳು ಗೆಲ್ಲುತ್ತಿದ್ದು, ಹೊಸ ಪ್ರತಿಭೆಗಳ ಈ ಸಿನಿಮಾಗೆ ಪ್ರೇಕ್ಷಕರು ಏನಂತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:Kaun Banega Crorepati: ಮತ್ತೆ ಬಂತು ಕೌನ್ ಬನೇಗಾ ಕರೋಡ್ಪತಿ! ಸೀಸನ್​ 15 ಶೀಘ್ರದಲ್ಲೇ ಆರಂಭ

ABOUT THE AUTHOR

...view details