ಕಠ್ಮಂಡು(ನೇಪಾಳ):ಸಂಭಾಷಣೆ ಮತ್ತು ಚಿತ್ರಕಥೆ ಕಾರಣಕ್ಕಾಗಿ ತೀವ್ರ ವಿವಾದಕ್ಕೀಡಾಗಿರುವ ತೆಲುಗು ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಪ್ರದರ್ಶನಕ್ಕೆ ನೇಪಾಳದಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ. ಸೀತೆಯನ್ನು ಭಾರತದ ಮಗಳೆಂದು ಬಿಂಬಿಸಲಾಗಿದೆ. ಜಾನಕಿ ಜನಿಸಿದ್ದು ನೇಪಾಳದ ಜನಕಪುರದಲ್ಲಿ. ಈ ಬಗ್ಗೆ ಸುಳ್ಳು ಹೇಳಿದ್ದಕ್ಕೆ ದೇಶದಲ್ಲಿ ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ.
ಪ್ರಸಿದ್ಧ ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿ ಆದಿಪುರುಷ ಸಿನಿಮಾದಲ್ಲಿ ಸೀತೆಯ ಮೂಲದ ಬಗ್ಗೆ ಸುಳ್ಳು ಹೇಳಲಾಗಿದೆ. ರಾಮಾಯಣದಲ್ಲಿ ಹೇಳಿದಂತೆ, ಸೀತೆ ನೇಪಾಳದ ಜನಕಪುರದಲ್ಲಿ ಜನಿಸಿದಳು. ಭಗವಾನ್ ಶ್ರೀರಾಮ ಬಂದು ಆಕೆಯನ್ನು ಮದುವೆಯಾದ. ಆದರೆ, ಚಿತ್ರದಲ್ಲಿ ಸೀತೆಯನ್ನು ಭಾರತದ ಹೆಣ್ಣೆಂದು ತೋರಿಸಲಾಗಿದೆ ಎಂದು ನೇಪಾಳ ಆಕ್ಷೇಪ ವ್ಯಕ್ತಪಡಿಸಿದೆ.
ತಪ್ಪು ತಿದ್ದಲು ಸೂಚನೆ:ಕಠ್ಮಂಡು ಮೇಯರ್ ಬಾಲೆನ್ ಶಾ ಸಿನಿಮಾ ಪ್ರದರ್ಶನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, 'ನಮ್ಮ ದೇಶದ ಸೀತೆಯನ್ನು ಭಾರತದ ಮಗಳು' ಎಂದು ಹೇಳಲಾಗಿದೆ. ಈ ಸಂಭಾಷಣೆಯನ್ನು ಬದಲಿಸಬೇಕು. ಅಲ್ಲಿಯವರೆಗೂ ದೇಶದಲ್ಲಿ ಚಿತ್ರ ಪ್ರದರ್ಶನ ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೇ, ಚಿತ್ರತಂಡಕ್ಕೆ ಮೂರು ದಿನಗಳ ಹಿಂದೆಯೇ ಆಕ್ಷೇಪ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಸಿನಿಮಾ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನೇಪಾಳದ ಸಂವಿಧಾನದ 5 ಮತ್ತು 56 (6) ನೇ ವಿಧಿಗಳನ್ನು ಉಲ್ಲೇಖಿಸಿರುವ ಮೇಯರ್ ಶಾ, ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಫೆಡರಲ್, ಪ್ರಾಂತೀಯ ಮತ್ತು ಸ್ಥಳೀಯ ಸರ್ಕಾರಗಳು ಹೊಂದಿವೆ. ಯಾವುದೇ ಬದಲಾವಣೆಗಳಿಲ್ಲದೆ ಚಲನಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದು ನೇಪಾಳದ ರಾಷ್ಟ್ರೀಯತೆಗೆ ಹಾನಿಯನ್ನುಂಟು ಮಾಡಿದಂತಾಗುತ್ತದೆ. ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಬಿಟ್ಟುಕೊಟ್ಟಂತಾಗುತ್ತದೆ ಎಂದು ಹೇಳಿದ್ದರು.