ಕರ್ನಾಟಕ

karnataka

'ಆದರ್ಶ ರೈತ' ಟ್ರೇಲರ್ ಬಿಡುಗಡೆಗೊಳಿಸಿದ ಪ್ರಿಯಾ ಹಾಸನ್​​

By ETV Bharat Karnataka Team

Published : Sep 8, 2023, 10:52 AM IST

Adarsha Raita movie trailer: 'ಆದರ್ಶ ರೈತ' ಟ್ರೇಲರ್ ಅನ್ನು ನಟಿ ಪ್ರಿಯಾ ಹಾಸನ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಸಾಥ್​ ನೀಡಿದರು.

Adarsha Raita
'ಆದರ್ಶ ರೈತ' ಚಿತ್ರತಂಡ

ಕನ್ನಡ ಚಿತ್ರರಂಗದಲ್ಲಿ ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಇಂತಹದ್ದೇ ಕಥಾಹಂದರ ಹೊಂದಿರುವ 'ಆದರ್ಶ ರೈತ' ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. 'ಆದರ್ಶ ರೈತ' ಟ್ರೇಲರ್ ಅನ್ನು ನಟಿ ಪ್ರಿಯಾ ಹಾಸನ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಸಾಥ್​ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ​ವೇಗಸ್ ಆಸ್ಪತ್ರೆ ಮುಖ್ಯಸ್ಥ ನಾರಾಯಣ ಸ್ವಾಮಿ, ಸಿರಿ ಮ್ಯೂಸಿಕ್​ನ ಸುರೇಶ್ ಚಿಕ್ಕಣ್ಣ, ಆರ್.ವಿ.ಚೌಡಪ್ಪ ಎಸಿಪಿ ಹಾಗೂ ನಿರ್ಮಾಪಕ ಆಂತರ್ಯ ಸತೀಶ್ ಚಿತ್ರ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಚಿತ್ರದಲ್ಲಿ ರೈತನಾಗಿ ಕಾಣಿಸಿಕೊಂಡಿರುವ ಡಾ.ಅಮರನಾಥ ರೆಡ್ಡಿ ಮಾತನಾಡಿ, "ನನ್ನ ಕುಟುಂಬವೇ ಕೃಷಿಕರ ಕುಟುಂಬ. ತಂದೆ ರೈತ. ನನಗೂ ಚಿಕ್ಕಂದಿನಿಂದಲೂ ವ್ಯವಸಾಯ ಮಾಡಿ ಅಭ್ಯಾಸವಿದೆ. ವ್ಯವಸಾಯ ವೃತ್ತಿಯಿಂದಲೇ ನನ್ನ ತಂದೆ ನಮ್ಮನೆಲ್ಲಾ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ನನಗೆ ಮೊದಲಿನಿಂದಲೂ ರೈತರ ಕುರಿತು ಸಿನಿಮಾ ಮಾಡುವ ಆಸೆ. ನಿರ್ದೇಶಕ ರಾಜೇಂದ್ರ ಕೊಣಿದೆಲ ಅವರು ಹೇಳಿದ ಕಥೆ ಇಷ್ಟವಾಯಿತು. ಅದಕ್ಕೆ ನಾನೇ ಈ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ಪ್ರಮುಖ ಪಾತ್ರವನ್ನು ಕೂಡ ಮಾಡಿದ್ದೇನೆ" ಎಂದರು.

'ಆದರ್ಶ ರೈತ' ಚಿತ್ರತಂಡ

"ತೆಲುಗು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ನನಗೆ ಇದು ಮೊದಲ ಚಿತ್ರ. ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ನಮ್ಮ ಚಿತ್ರದಲ್ಲಿ ರೈತ ಹೆಚ್ಚಿನ ಬಡ್ಡಿಗೆ ಸಾಲ ಮಾಡಬಾರದು. ಸರ್ಕಾರ ಬ್ಯಾಂಕ್​ನಿಂದ ನೀಡುವ ಸಾಲವನ್ನೇ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು. ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೇವೆ. ಒಬ್ಬ ರೈತ ಇಂತಹ ಅನೇಕ ವಿಷಯಗಳನ್ನು ತಿಳಿದು ವ್ಯವಸಾಯ ಮಾಡಿದಾಗ 'ಆದರ್ಶ ರೈತ'ನಾಗುತ್ತಾನೆ" ಎಂದು ನಿರ್ದೇಶಕ ರಾಜೇಂದ್ರ ಕೊಣದೆಲ ಹೇಳಿದರು.

ಚಿತ್ರದಲ್ಲಿ ರೇಖಾ ದಾಸ್, ಸಿದ್ಧಾರ್ಥ್, ಮೈಸೂರು ಸುಜಾತ, ಸೂಫಿಯಾ, ಖುಷಿ ಮೆಹ್ತಾ ಹೀಗೆ ಸಾಕಷ್ಟು ಕಲಾವಿದರಿದ್ದಾರೆ. ಮುರಳಿಧರ್ ನಾವಡ ಸಂಗೀತ ನೀಡಿದ್ದು, ಸಿದ್ದರಾಜ್ ಕೊಟ್ರೇಶಿ ಛಾಯಾಗ್ರಹಣವಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಆದರ್ಶ ರೈತ' ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ಬೆಂಗಳೂರಿನಲ್ಲಿ 'ಗನ್ಸ್ ಆ್ಯಂಡ್​ ರೋಸಸ್​' ಚಿತ್ರೀಕರಣ: ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಚಿತ್ರ 'ಗನ್ಸ್ ಆ್ಯಂಡ್ ರೋಸಸ್'. ಅಂಡರ್ ವಲ್ಡ್ ಹಾಗೂ ಪ್ರೇಮಕಥೆ ಹೊಂದಿರುವ 'ಗನ್ಸ್ ಆ್ಯಂಡ್ ರೋಸಸ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಕೆಂಗೇರಿ ಸುತ್ತಮುತ್ತ, ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

'ಗನ್ಸ್​ ಅಂಡ್​ ರೋಸಸ್​'

ರಾಜಕೀಯದಲ್ಲಿ ಸಕ್ರಿಯರಾಗಿರುವ ಉದ್ಯಮಿ ಹೆಚ್.ಆರ್.ನಟರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್.ಎಸ್.ಶ್ರೀನಿವಾಸಮೂರ್ತಿ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಶರತ್.ಎಸ್ ಅವರದ್ದು. ಶಶಿಕುಮಾರ್ ಸಂಗೀತ ನಿರ್ದೇಶನ, ಆರ್.ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ನಾಯಕಿಯಾಗಿ ಯಶ್ಚಿಕ ನಿಷ್ಕಲ ನಟಿಸುತ್ತಿದ್ದು, ಉಳಿದಂತೆ ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ವೀಣಾ ಸುಂದರ್ ಮುಂತಾದವರು ತಾರಾಗಣದಲ್ಲಿದ್ದಾರೆ‌.

ಇದನ್ನೂ ಓದಿ:'ಗನ್ಸ್ ಅಂಡ್ ರೋಸಸ್' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್​ ಎಂಟ್ರಿ

ABOUT THE AUTHOR

...view details