ಕರ್ನಾಟಕ

karnataka

By

Published : Apr 8, 2023, 11:26 AM IST

ETV Bharat / entertainment

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಖುಷ್ಬೂ; ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ನಟಿ

ಹಿರಿಯ ಬಹುಭಾಷಾ ನಟಿ ಖುಷ್ಬೂ ಅನಾರೋಗ್ಯದಿಂದ ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

khushbu
ಖುಷ್ಬೂ

ಹಿರಿಯ ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಅವರು ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ತಮ್ಮ ಟ್ವಟರ್​ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡು ಆರೋಗ್ಯದ ಬಗ್ಗೆ ವಿವರಿಸಿದ್ದಾರೆ.

"ಜ್ವರ, ಗಂಟಲು ನೋವು ಮತ್ತು ಆಲಸ್ಯ ನನ್ನನ್ನು ಬಹುವಾಗಿ ಕಾಡುತ್ತಿದೆ. ಅದೃಷ್ಟವಶಾತ್​ ನಾನು ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇದಕ್ಕೆ ನಾನು ಬೇಗನೆ ಚಿಕಿತ್ಸೆ ಪಡೆಯದೇ ಹೋದಲ್ಲಿ ಗುಣಮುಖವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ" ಎಂದು ಟ್ವೀಟ್​ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್​ ನೋಡಿದ ಅಭಿಮಾನಿಗಳು ಖುಷ್ಬೂ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೀರ್ತಿ ಸುರೇಶ್​, ನಿಕ್ಕಿ ಗಲ್ರಾನಿ, ರಾಶಿ ಖನ್ನಾ, ಶ್ರೀಯಾ, ಶ್ರೀದೇವಿ ವಿಜಯಕುಮಾರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸುತ್ತಿದ್ದಾರೆ.

ನಟನೆ ಜೊತೆ ರಾಜಕೀಯದಲ್ಲೂ ಖುಷ್ಬೂ: ಖುಷ್ಬೂ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯಾಗುವುದರ ಜೊತೆಗೆ ಕೆಲವು ಚಿತ್ರಗಳ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಆ ನಂತರ ರಾಜಕೀಯಕ್ಕೆ ಪ್ರವೇಶಿಸಿದ ಅವರು 2010 ರಲ್ಲಿ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಾಲ್ಕು ವರ್ಷಗಳ ಬಳಿಕ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ್ದರು. ಅದಾಗಿ 2020 ರಲ್ಲಿ ಬಿಜೆಪಿ ಪಕ್ಷದತ್ತ ಮುಖ ಮಾಡಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಸ್ಪರ್ಧಿಸಿದ ಅವರು ಸೋಲು ಅನುಭವಿಸಿದ್ದರು.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಬೆಂಬಲದ ನಿರೀಕ್ಷೆಯಲ್ಲಿ ಬಿಜೆಪಿ: ಕ್ಯಾಂಪೇನ್‌ಗೆ ಯಾರೆಲ್ಲಾ ಬರ್ತಿದ್ದಾರೆ?

ಬಿಜೆಪಿ ಪಕ್ಷ ಸೇರಿದ ನಂತರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದರು. ಒಂದೆಡೆ ರಾಜಕೀಯ ವಿಚಾರವಾಗಿ ಬ್ಯುಸಿಯಾಗಿರುವ ಅವರು ಮತ್ತೊಂದೆಡೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಕೆಲವು ತೆಲುಗು ಚಿತ್ರಗಳಲ್ಲಿ ಖುಷ್ಬೂ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಶರ್ವಾನಂದ್​ ಅಭಿನಯದ 'ಆಡವಾಲೆ ವುಕ್ಕೆ ಜೋಹರ್ಲು' ಚಿತ್ರದ ಮೂಲಕ ಖುಷ್ಬೂ ತೆಲುಗು ಪ್ರೇಕ್ಷಕರನ್ನು ಮನರಂಜಿಸಿದ್ದರು. ಈಟಿವಿಯಲ್ಲಿ ಪ್ರಸಾರವಾಗುತ್ತಿರುವ ಜಬರ್ದಸ್ತ್​ ಕಾಮಿಡಿ ಶೋನ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಸಿನಿಮಾಗಳಲ್ಲೂ ನಟನೆ: 1986 ರಿಂದ ದಕ್ಷಿಣ ಭಾರತದ ಚಿತ್ರಗಳಲ್ಲಿ ಖುಷ್ಬೂ ನಟಿಸತೊಡಗಿದರು. ತೆಲುಗು ಚಿತ್ರ ಕಲಿಯುಗ ಪಾಂಡವುಲು(1986) ಮೂಲಕ ಖುಷ್ಬೂ ದಕ್ಷಿಣ ಭಾರತದ ಪರದೆಗಳಿಗೆ ಪರಿಚಯವಾದರು. ಕನ್ನಡದಲ್ಲಿ ಖುಷ್ಬೂ ಅವರು ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು, ಶಾಂತಿ ಕ್ರಾಂತಿ ಮತ್ತು ಯುಗಪುರುಷ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ತೆರೆಮೇಲೆ ರವಿಚಂದ್ರನ್ ಮತ್ತು ಖುಷ್ಬೂ ಜೊಡಿ ತುಂಬಾ ಪ್ರಸಿದ್ಧವಾಗಿತ್ತು. ಖುಷ್ಬೂ ಸುಂದರ್‌ ಅವರು ಮುಂಬೈ ಮೂಲದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ನಿಖತ್ ಖಾನ್.

ಇದನ್ನೂ ಓದಿ:ಸ್ಟೈಲಿಶ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಟೀಸರ್​ ಜೊತೆ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​.. ಹೊಸ ಅವತಾರದಲ್ಲಿ ಅಲ್ಲು ಅರ್ಜುನ್​

ABOUT THE AUTHOR

...view details