ಮೀರತ್ (ಉತ್ತರ ಪ್ರದೇಶ): ಹಿಂದಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಗಮನ ಸೆಳೆದ ನಟಿ ಮತ್ತು ರೂಪದರ್ಶಿ ಅರ್ಚನಾ ಗೌತಮ್ ಅವರು ಈಟಿವಿ ಭಾರತದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ತಮ್ಮ ಅನುಭವ ಹಂಚಿಕೊಂಡರು. ವೃತ್ತಿಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳ ಜೊತೆಗೆ ರಾಜಕೀಯ ಎಂಟ್ರಿ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು. ಸಾರ್ವಜನಿಕರಿಂದ ದೊರೆತ ಪ್ರೀತಿ, ಅಭಿಮಾನ ಹಾಗು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುವ ವಿಚಾರವನ್ನು ಹೇಳಿದರು.
ಅರ್ಚನಾ ಗೌತಮ್ ಉತ್ತರಪ್ರದೇಶದ ಮೀರತ್ನವರು. ಬಿಗ್ಬಾಸ್ ಟಾಪ್ 5 ಸ್ಪರ್ಧಿಗಳಲ್ಲಿ ಓರ್ವರಾಗಿ ಇವರು ಹೊರಹೊಮ್ಮಿದ್ದಾರೆ. ರಿಯಾಲಿಟಿ ಶೋ ಟ್ರೋಫಿ ಇವರಿಗೆ ದಕ್ಕಲಿಲ್ಲ. ಆದರೂ ತಮ್ಮ ವಿಶಿಷ್ಟ ಸಂಭಾಷಣೆ ಮತ್ತು ಶೈಲಿಯಿಂದ ಮೊದಲ ದಿನದಿಂದ ಕೊನೆಯಯವರೆಗೂ ಚರ್ಚೆಯಲ್ಲಿದ್ದರು. ಶೋನಲ್ಲಿ ಪ್ರಬಲ ಸ್ಪರ್ಧಿಯಾಗಿ ಪೈಪೋಟಿ ನೀಡುತ್ತಿದ್ದರು.
'ರಿಯಾಲಿಟಿ ಶೋ ಬದುಕು ಬದಲಿಸಿತು': ಬಿಗ್ ಬಾಸ್ 16 ಶೋ ನನ್ನ ಬದುಕನ್ನೇ ಬದಲಿಸಿದೆ ಎಂದು ಅವರು ಹೇಳಿದರು. ಶೋಗೆ ಹೋದಾಗ ಒಂದರಿಂದ ಎರಡು ವಾರಗಳಲ್ಲಿ ನಾನು ಹೊರಬರ್ತೀನಿ ಎಂದು ಕೆಲವರು ಟೀಕಿಸಿದ್ದರು. ಆದ್ರೆ ಕೊನೆ ಹಂತದವರೆಗೂ ತಲುಪಿದ್ದೇನೆ. ಅಲ್ಲಿ ಬಹಳಷ್ಟು ವಿಚಾರಗಳನ್ನು ಕಲಿತೆ. ಜೀವನಕ್ಕೊಂದು ದಿಕ್ಕು ಸಿಕ್ತು ಎಂದು ಖುಷಿ ವ್ಯಕ್ತಪಡಿಸಿದರು.
ಈ ರಿಯಾಲಿಟಿ ಶೋನಲ್ಲಿ ನಟನೆ ಇರಲಿಲ್ಲ. ಅಲ್ಲಿ ನಾನು ಮೀರತ್ನ ಡೈಲಾಗ್ಗಳನ್ನು ಹೇಳಿದ್ದೆ. ಜನರು ಅದೇ ವಿಷಯವನ್ನು ಹೆಚ್ಚು ಇಷ್ಟಪಡ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಸಾಮಾನ್ಯವಾಗಿ ನಾನು ಮನೆಯಲ್ಲಿರುವ ರೀತಿಯಲ್ಲೇ ಅಲ್ಲೂ ಬದುಕಲು ಪ್ರಯತ್ನಿಸುತ್ತಿದ್ದೆ. ಅದೇ ಕಾರಣಕ್ಕೆ ಮೀರತ್ ಭಾಷೆ ಜನ ಮನ ಸೆಳೆಯಿತು. ಶೋನಲ್ಲಿ ಮೇಕಪ್ ಇಲ್ಲದೇ ಇರುತ್ತಿದ್ದೆ ಎಂದು ಅರ್ಚನಾ ವಿವರಿಸಿದರು.
ಕಾರ್ಯಕ್ರಮದಲ್ಲಿ ತನಗೆ ಯಾವುದೇ ಸ್ಥಾನವಿಲ್ಲದಿದ್ದರೂ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅರ್ಚನಾ ತಿಳಿಸಿದರು. ಸಾರ್ವಜನಿಕರು ನಾಯಕ ಮತ್ತು ನಟರಲ್ಲಿ ನೈಜತೆ ನೋಡಲು ಬಯಸುತ್ತಾರೆ. ಅದರಂತೆ ನನ್ನ ಸ್ವಂತಿಕೆಯೇ ನನ್ನನ್ನು ಅಷ್ಟು ಸಮರ್ಥಳನ್ನಾಗಿ ಮಾಡಿದೆ ಎಂದರು. ಇನ್ನೂ ಹಲವಾರು ಪ್ರಾಜೆಕ್ಟ್ಗಳ (ಸಿನಿ ಕ್ಷೇತ್ರ) ಕುರಿತು ಮಾತುಕತೆ ನಡೆಸುತ್ತಿದ್ದೇನೆ. ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಕೂಡ ತಿಳಿಸಿದರು.